ಬಾಂಗ್ಲಾದೇಶ: ಹಡಗು ಬೆಂಕಿಗಾಹುತಿ, 37 ಮಂದಿ ದುರ್ಮರಣ
ಢಾಕಾ, ಡಿಸೆಂಬರ್ 24: ದಕ್ಷಿಣ ಬಾಂಗ್ಲಾದೇಶದಲ್ಲಿ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುತ್ತಿದ್ದ ಹಡಗು ಬೆಂಕಿಗಾಹುತಿಯಾಗಿದ್ದು ಕನಿಷ್ಠ 37 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜಧಾನಿ ಢಾಕಾದಿಂದ ದಕ್ಷಿಣಕ್ಕೆ 250 ಕಿಲೋಮೀಟರ್ ದಕ್ಷಿಣದ ಗ್ರಾಮೀಣ ಪಟ್ಟಣವಾದ ಜಕಾಕತಿ ಬಳಿ ಈ ಘಟನೆ ಮುಂಜಾನೆ ಸಂಭವಿಸಿದೆ. ಶುಕ್ರವಾರ ಮೂರು ಅಂತಸ್ತಿನ ಬೋಟ್ಗೆ ಸಮುದ್ರದ ಮಧ್ಯದಲ್ಲಿ ಬೆಂಕಿ ಹೊತ್ತಿಕೊಂಡಿದೆ. ನಾವು 37 ಮೃತದೇಹಗಳನ್ನು ಹೊರತೆಗೆದಿದ್ದೇವೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು. ಹೆಚ್ಚಿನವರು ಬೆಂಕಿಯಿಂದ ಸಾವನ್ನಪ್ಪಿದರು ಮತ್ತು ಕೆಲವರು ನದಿಗೆ ಹಾರಿದ ನಂತರ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಮೊಯಿನುಲ್ ಇಸ್ಲಾಂ ತಿಳಿಸಿದರು.
ಘಟನೆಯಲ್ಲಿ ಗಾಯಗೊಂಡ ಕನಿಷ್ಠ100 ಜನರನ್ನು ನಾವು ಚಿಕಿತ್ಸೆಗಾಗಿ ಹತ್ತಿರದ ಬರಿಸಾಲ್ ನ ಆಸ್ಪತ್ರೆಗೆ ದಾಖಲಿಸಿದ್ದೇವೆ. ಸ್ಥಳೀಯ ಜಿಲ್ಲಾ ಆಡಳಿತಾಧಿಕಾರಿ ಜೋಹರ್ ಅಲಿ ಮಾತನಾಡಿ, ಬೆಂಕಿ ಕಾಣಿಸಿಕೊಂಡ ಒಂದು ಗಂಟೆಯೊಳಗೆ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ ಎಂದು ತಿಳಿಸಿದರು.
ಕೆಲ ತಿಂಗಳ ಹಿಂದೆ ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ದೋಣಿಗಳ ಮಧ್ಯೆ ಅಪಘಾತ ಸಂಭವಿಸಿ ಎರಡೂ ದೋಣಿಗಳು ಮುಳುಗಡೆಯಾಗಿದ್ದವು. ಈ ವೇಳೆ 120ಕ್ಕೂ ಹೆಚ್ಚು ಮಂದಿ ಬೋಟ್ನಲ್ಲಿದ್ದರು ಎಂದು ವರದಿಯಾಗಿತ್ತು.
ನಂತರ ಘಟನಾ ಸ್ಥಳಕ್ಕೆ ಆಗಮಿಸಿದ NDRF, SDRF ತಂಡಗಳು ಬೇರೆ ಸಣ್ಣ ಸಣ್ಣ ದೋಣಿಗಳಲ್ಲಿ ಜನರನ್ನು ರಕ್ಷಿಸಿದ್ದರು. ನಿಮಾತಿ ಘಾಟ್ನಿಂದ ಮಜಲಿಗೆ ತೆರಳುತ್ತಿದ್ದ ಬೋಟ್ ಹಾಗೂ ಮಜಲಿನಿಂದ ನಿಮಾತಿ ಘಾಟ್ಗೆ ಮರಳುತ್ತಿದ್ದ ಬೋಟ್ಗಳ ಮಧ್ಯೆ ಅಪಘಾತ ಸಂಭವಿಸಿತ್ತು. ಅಪಘಾತದ ನಂತರ ಎರಡೂ ಬೋಟ್ಗಳ ಪ್ರಯಾಣಿಕರು ನೀರಿನಲ್ಲಿ ಮುಳುಗಡೆಯಾಗಿದ್ದರು. ಕೆಲವರು ಈಜೀ ದಡ ಸೇರಿದ್ದರು.
''ಈವರೆಗೆ 37 ಶವಗಳನ್ನು ಹೊರತೆಗೆಯಲಾಗಿದೆ, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆ ಹಡಗಿನಲ್ಲಿ 310 ಮಂದಿ ಪ್ರಯಾಣಿಸಬಹುದಾಗಿದ್ದು, ಆದರೆ 500 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅವರು ರಾಜಧಾನಿಯಿಂದ ವಾಪಸಾಗುತ್ತಿದ್ದರು. 4 ರಿಂದ 5 ಗಂಟೆಗಳ ಕಾಲ ಹಡಗಿನಲ್ಲಿ ಬೆಂಕಿಯ ಕೆನ್ನಾಲಿಗೆ ಇತ್ತು.
ಆಗಸ್ಟ್ನಲ್ಲಿ ಸ್ಯಾಂಡ್-ಲ್ಯಾಡನ್ ಕಾರ್ಗೋ ಹಡಗು ಅಪಘಾತ ಸಂಭವಿಸಿ 21 ಮಂದಿ ಮೃತಪಟ್ಟಿದ್ದರು. ಏಪ್ರಿಲ್ನಲ್ಲಿ ನಡೆದ ಅಪಘಾತದಲ್ಲಿ 54 ಮಂದಿ ಮೃತಪಟ್ಟಿದ್ದರು.