ಸುಡಾನ್ ಕಾರ್ಖಾನೆಯಲ್ಲಿ ಸ್ಫೋಟ: 18 ಭಾರತೀಯರ ದಹನ
ಖರ್ಟೋಮ್, ಡಿಸೆಂಬರ್ 4: ಸುಡಾನ್ನಲ್ಲಿ ಸೆರಾಮಿಕ್ ಕಾರ್ಖಾನೆಯಲ್ಲಿ ಉಂಟಾದ ಭೀಕರ ಎಲ್ಪಿಜಿ ಟ್ಯಾಂಕರ್ ಸ್ಫೋಟದಲ್ಲಿ 18 ಮಂದಿ ಭಾರತೀಯರು ಸೇರಿದಂತೆ 23 ಮಂದಿ ಜೀವ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ 130ಕ್ಕೂ ಅಧಿಕ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸುಡಾನ್ನ ರಾಜಧಾನಿ ಖರ್ಟೋಮ್ನ ಬಹ್ರಿ ಎಂಬಲ್ಲಿ ಮಂಗಳವಾರ ಸೀಲಾ ಸೆರಾಮಿಕ್ ಕಾರ್ಖಾನೆಯಲ್ಲಿ ಈ ದುರತ ಸಂಭವಿಸಿದೆ. ಘಟನೆ ಬಳಿಕ 16 ಮಂದಿ ಭಾರತೀಯರು ನಾಪತ್ತೆಯಾಗಿದ್ದರು ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿ ಬುಧವಾರ ತಿಳಿಸಿದೆ.
'ಇತ್ತೀಚಿನ ಮಾಹಿತಿ ಪ್ರಕಾರ, ಅಧಿಕೃತವಾಗಿ ಖಚಿತಪಡದೆ ಇದ್ದರೂ 18 ಮಂದಿ ಭಾರತೀಯರು ಮೃತಪಟ್ಟಿದ್ದಾರೆ' ಎಂದು ಭಾರತೀಯ ರಾಯಭಾರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.
ನಾಪತ್ತೆಯಾಗಿರುವ ಕೆಲವರು ಮೃತರ ಪಟ್ಟಿಯಲ್ಲಿ ಇರಬಹುದು. ಮೃತದೇಹಗಳನ್ನು ಗುರುತು ಹಚ್ಚಲು ಅವುಗಳನ್ನು ಇನ್ನೂ ಪಡೆದುಕೊಳ್ಳಬೇಕಿದೆ. ಆದರೆ ದೇಹಗಳು ಬಹುತೇಕ ಸುಟ್ಟಿರುವುದರಿಂದ ಗುರುತು ಹಚ್ಚುವುದು ಕಷ್ಟವಾಗಲಿದೆ ಎಂದು ಅದು ತಿಳಿಸಿದೆ.

ಈ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ, ನಾಪತ್ತೆಯಾಗಿರುವ ಮತ್ತು ಬಚಾಗಿರುವ ಭಾರತೀಯರ ಪಟ್ಟಿಯನ್ನು ಕಚೇರಿ ಬುಧವಾರ ಬಿಡುಗಡೆ ಮಾಡಿದೆ. ಅದರ ಮಾಹಿತಿ ಪ್ರಕಾರ ಏಳು ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ನಾಲ್ವರ ಪರಿಸ್ಥಿತಿ ಚಿಂತಾಜನಕವಾಗಿದೆ.
ಈ ಸ್ಫೋಟದಿಂದ ಗಾಯಗಳಾಗದೆ ಅದೃಷ್ಟವಶಾತ್ ಪಾರಾದ 34 ಮಂದಿ ಭಾರತೀಯರಿಗೆ ಸಲೂಮಿ ಸೆರಾಮಿಕ್ಸ್ ಫ್ಯಾಕ್ಟರಿ ವಸತಿಯಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಸುಡಾನ್ ಸರ್ಕಾರದ ಮಾಹಿತಿ ಪ್ರಕಾರ ಘಟನೆಯಲ್ಲಿ 23 ಮಂದಿ ಮೃತಪಟ್ಟಿದ್ದು, 130ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಾರ್ಖಾನೆಯಲ್ಲಿ ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆ ಸೌಲಭ್ಯಗಳು ಇರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಕಾರ್ಖಾನೆಯಲ್ಲಿ ಬೆಂಕಿಗೆ ಉರಿಯಬಲ್ಲ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿತ್ತು. ಇದರಿಂದಾಗಿ ಬೆಂಕಿ ವೇಗವಾಗಿ ವ್ಯಾಪಿಸಿತು ಎಂದು ಸರ್ಕಾರ ತಿಳಿಸಿದೆ.












Click it and Unblock the Notifications