ಕೊರೊನಾ ವೈರಸ್: ಕನ್ನಡಿಗರೇ ವಿದೇಶಕ್ಕೆ ಹೋಗಿದ್ರಾ, 104ಕ್ಕೆ ಕರೆ ಮಾಡಿ!
ಬೆಂಗಳೂರು, ಫೆಬ್ರವರಿ.06: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಕರ್ನಾಟಕದಲ್ಲೂ ಸದ್ದು ಮಾಡಿದೆ. ಮಾರಕ ರೋಗಕ್ಕೆ ಕನ್ನಡಿಗರು ಬೆಚ್ಚಿ ಬಿದ್ದಿದ್ದು, ಸಾಲು ಸಾಲು ಜನರು ಸಹಾಯವಾಣಿ 104ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಹ್ಯೂಬೈ ಆರೋಗ್ಯ ಪ್ರಾಧಿಕಾರದ ಅಂಕಿ-ಅಂಶಗಳ ಪ್ರಕಾರ ಚೀನಾದಲ್ಲಿ ಗುರುವಾರದ ವೇಳೆಗೆ 563 ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ. ಸೋಂಕಿತರ ಸಂಖ್ಯೆ ಚೀನಾ ಒಂದರಲ್ಲೇ 25 ಸಾವಿರದ ಗಡಿ ದಾಡಿದೆ. ಕೇರಳದಲ್ಲಿ ಮೂವರಿಗೆ ಸೋಂಕು ತಗಲಿರುವ ಬಗ್ಗೆ ಸ್ಪಷ್ಟವಾಗಿದೆ.
ಹಲೋ.. 104.. ಕರ್ನಾಟಕದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತಾ ಹೆಂಗೆ?
ಕರ್ನಾಟಕದಲ್ಲಿ ಮಾರಕ ರೋಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸರ್ಕಾರ ಆರಂಭಿಸಿದ ಸಹಾಯವಾಣಿಗೆ ಸಾವಿರಾರು ದೂರವಾಣಿ ಕರೆಗಳು ಬರುತ್ತಿವೆ. ಕೊರೊನಾ ವೈರಸ್ ಪತ್ತೆ ಕುರಿತು ವಿಚಾರಣೆಗೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ 104 ಸಹಾಯವಾಣಿ ಸಂಖ್ಯೆ ತರೆದಿದ್ದು, ಇದುವರೆಗೂ 1250 ದೂರವಾಣಿ ಕರೆಗಳು ಬಂದಿವೆ.
ರಾಜ್ಯದಲ್ಲಿ 118 ವಿದೇಶಿಗರಿಗೆ ವೈದ್ಯಕೀಯ ಪರೀಕ್ಷೆ
ರಾಜ್ಯದಲ್ಲಿ 118 ಮಂದಿಗೆ ಕೊರೊನಾ ವೈರಸ್ ತಗಲಿರುವ ಶಂಕೆ ವ್ಯಕ್ತವಾಗಿದ್ದು, ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಈ ಪೈಕಿ 93 ಶಂಕಿತರ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದು, ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿ ಕೊಡಲಾಗಿತ್ತು. ಇದರಲ್ಲಿ 68 ಮಂದಿಗೆ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಬೆಂಗಳೂರು ಏರ್ ಪೋರ್ಟ್ ನಲ್ಲಿ 10 ಸಾವಿರ ಮಂದಿ ತಪಾಸಣೆ
ರಾಜ್ಯದಲ್ಲೂ ಕೊರೊನಾ ವೈರಸ್ ಹಿನ್ನೆಲೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ವಿದೇಶಗಳಿಂದ ಆಗಮಿಸುವವರ ಮೇಲೆ ಹದ್ದಿನಗಣ್ಣು ಇಡಲಾಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೊನಾ ವೈರಸ್ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ. ಇಲ್ಲಿದೆ ಈವರೆಗೆ 11,494 ಜನರನ್ನು ತಪಾಸಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಕೊರೊನಾ ವೈರಸ್: ನಿಮಗೆ ಈ ಮಹತ್ವದ ಅಂಶಗಳು ಗೊತ್ತಿರಲಿ
ಚೀನಾ ಸೇರಿದಂತೆ 28 ರಾಷ್ಟ್ರಗಳಲ್ಲಿ ಕೊರೊನಾ ವೈರಸ್
ಇನ್ನು, ಚೀನಾದಲ್ಲಿ ಹುಟ್ಟಿಕೊಂಡ ಕೊನೊರಾ ವೈರಸ್ 28 ರಾಷ್ಟ್ರಗಳಲ್ಲಿ ಹರಡಿರುವ ಬಗ್ಗೆ ವರದಿಯಾಗಿದೆ. ಅಮೆರಿಕಾ, ಇಂಗ್ಲೆಂಡ್, ಥೈಲ್ಯಾಂಡ್, ರಷ್ಟಾ, ಅಷ್ಟೇ ಯಾಕೆ ಭಾರತದಲ್ಲೂ ಕೊರೊನಾ ವೈರಸ್ ಪತ್ತೆಯಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಕರ್ನಾಟಕ ಗಡಿ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಣೆ
ಇನ್ನು, ಕೊರೊನಾ ವೈರಸ್ ತಡೆಗಟ್ಟುವ ದೃಷ್ಟಿಯಿಂದ ರಾಜ್ಯದ ಗಡಿಜಿಲ್ಲೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೈಅಲರ್ಟ್ ಘೋಷಿಸಿದೆ. ಮಂಗಳೂರು, ಕೊಡಗು, ಚಾಮರಾಜನಗರ, ಮೈಸೂರಿನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.