ಜಗನ್ - ಮೋದಿ ಭೇಟಿ ಹಿಂದಿನ ಮರ್ಮವೇನು?
ನವದೆಹಲಿ, ಮೇ 20: ಸೀಮಾಂಧ್ರದಲ್ಲಿ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗುತ್ತಿದ್ದಂತೇ, ತನ್ನ ಸಂಭಾವ್ಯ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ಮೋಹನ್ ರೆಡ್ಡಿ, ನರೇಂದ್ರ ಮೋದಿ ಮೊರೆ ಹೋಗಿದ್ದಾರೆ.
ಸೀಮಾಂಧ್ರದಲ್ಲಿ ಟಿಡಿಪಿ ಸರಕಾರ ಇನ್ನು ಕೆಲವು ದಿನಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ. ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಕಿರುಕುಳ ನೀಡುವುದನ್ನು ತಪ್ಪಿಸಲು ಜಗನ್ ಬಿಜೆಪಿಯ ನಿಯೋಜಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಸೋಮವಾರ (ಮೇ 19) ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಜಗನ್, ವೈಎಸ್ಆರ್ ಪಕ್ಷದ ವಿಜೇತ ಸಂಸದರನ್ನೊಳಗೊಂಡ ನಿಯೋಗದ ಜೊತೆ ಸೋಮವಾರ (ಮೇ 19) ನರೇಂದ್ರ ಮೋದಿಯವರನ್ನು ಭೇಟಿಯಾಗಿ ವಿಷಯಾಧಾರಿತ ಬೆಂಬಲ ನೀಡುವುದರ ಬಗ್ಗೆ ಮಾತುಕತೆ ನಡೆಸಿ, ಇತರ ಪರಿಸ್ಥಿತಿಯನ್ನೂ ಮೋದಿಯವರಿಗೆ ವಿವರಿಸಿದ್ದಾರೆಂದು ತಿಳಿದು ಬಂದಿದೆ.
ಸುಪ್ರೀಂಕೋರ್ಟ್ ಭ್ರಷ್ಟಾಚಾರ ಮತ್ತು ಅಕ್ರಮಗಳ ವಿರುದ್ದ ತೀರ್ಪು ನೀಡಿದೆ. ಜಗನ್ಮೋಹನ್ ರೆಡ್ಡಿ ಇನ್ನು 45 ದಿನದೊಳಗೆ ಜೈಲು ಸೇರುವುದು ನಿಶ್ಚಿತ ಎಂದು ಟಿಡಿಪಿ ನಾಯಕರು ನೀಡುತ್ತಿರುವ ಹೇಳಿಕೆ ಜಗನ್ ನಿದ್ದೆಗೆಡಿಸಿದೆ.
ಟಿಡಿಪಿ ಫೇಸ್ ಬುಕ್
ಟಿಡಿಪಿ ತನ್ನ ಅಧಿಕೃತ ಫೇಸ್ ಬುಕ್ ನಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೇ, ಭ್ರಷ್ಟಾಚಾರ ಆರೋಪ ಹೊತ್ತಿರುವ ಮಾಜಿ ಸಚಿವರು ಮತ್ತು ಪಕ್ಷದ ನಾಯಕರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ಪ್ರಕಟಿಸಿತ್ತು.
ಮೋದಿ ಸರಕಾರಕ್ಕೆ ಬಾಹ್ಯ ಬೆಂಬಲ
NDA ಮೈತ್ರಿಕೂಟಕ್ಕೆ ಸದ್ಯ ಇತರ ಯಾವುದೇ ಪಕ್ಷಗಳ ಬೆಂಬಲದ ಅವಶ್ಯಕತೆ ಇಲ್ಲದಿದ್ದರೂ, ಜಗನ್ಮೋಹನ್ ರೆಡ್ಡಿ ತಾನೇ ಮುಂದೆ ಬಂದು ಮೋದಿ ಸರಕಾರಕ್ಕೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಬಲಕ್ಕೆ ಪ್ರತಿಯಾಗಿ
ಬಾಹ್ಯ ಬೆಂಬಲಕ್ಕೆ ಪ್ರತಿಯಾಗಿ ತನ್ನ ವಿರುದ್ದ ಯಾವುದೇ ಕಾನೂನು ಕ್ರಮಕ್ಕೆ ಚಂದ್ರಬಾಬು ನಾಯ್ಡು ಸರಕಾರ ಮುಂದಾಗದಂತೆ ನೋಡಿಕೊಳ್ಳುವಂತೆ ಮೋದಿಯವರನ್ನು ಜಗನ್ ನಿವೇದಿಸಿ ಕೊಂಡಿದ್ದಾರೆಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.
ನಾಯ್ಡು ಹೇಳಿಕೆ
ನಾವು ಕಾನೂನನ್ನು ಗೌರವಿಸಿ ಅದನ್ನು ಪ್ರಾಮಾಣಿಕತೆಯಿಂದ ಪಾಲಿಸುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಭ್ರಷ್ಟರ ವಿರುದ್ದ ಕ್ರಮ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ್ದರು.
ಲೋಕಸಭಾ ಚುನಾವಣೆ
ಹದಿನಾರನೇ ಲೋಕಸಭಾ ಚುನಾವಣೆಯಲ್ಲಿ NDA ಮೈತ್ರಿಕೂಟ ಹದಿನಾರು ಮತ್ತು ವೈಎಸ್ಆರ್ ಕಾಂಗ್ರೆಸ್ ಒಂಬತ್ತು ಸ್ಥಾನವನ್ನು ಗೆದ್ದಿತ್ತು. ಚುನಾವಣೆಗೂ ಮುನ್ನ ಮೋದಿ ಜೊತೆ ಉತ್ತಮ ಸಂಬಂಧವನ್ನು ಕಾಯ್ದು ಕೊಂಡು ಬಂದಿದ್ದ ಜಗನ್ ದೇಶದೆಲ್ಲಡೆ ಮೋದಿ ಹವಾ ಇರುವುದನ್ನು ಒಪ್ಪಿಕೊಂಡಿದ್ದರು.