ಜಗನ್ ರೆಡ್ಡಿಯ ಸಂಕಲ್ಪ ಯಾತ್ರೆ ಆರಂಭ, ನಾಯ್ಡುಗೆ ನಡುಕ
ಅಮರಾವತಿ, ನವೆಂಬರ್ 06: ಆಂಧ್ರಪ್ರದೇಶದ ಮಾಜಿ ಸಿಎಂ, ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರ ಪಕ್ಷದ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಬೃಹತ್ ಪಾದಯಾತ್ರೆಯನ್ನು ಸೋಮವಾರದಂದು ಆರಂಭಿಸಿದ್ದಾರೆ.
ರಾಜಕೀಯ ನೆಲೆ ಕಂಡುಕೊಳ್ಳಲು ಮತ್ತೆ ಜನರ ಬಳಿಗೆ ಮರಳುತ್ತಿದ್ದಾರೆ. ಅಪ್ಪನ ಹಾದಿಯಲ್ಲೇ ಸಾಗಲು ನಿರ್ಧರಿಸಿರುವ ಜಗನ್ ಸುಮಾರು 3,000 ಕಿ.ಮೀ ದೂರ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಸಾರ್ ಕಾಂಗ್ರೆಸ್ ಅಧಿಪತ್ಯ ಹೊಂದಿರುವ ರಾಯಲ ಸೀಮೆಯ ಕಡಪ, ಕರ್ನೂಲ್, ನೆಲ್ಲೂರು ಜಿಲ್ಲೆಗಳ ಮೇಲೆ ಟಿಡಿಪಿ ತನ್ನ ಬಾವುಟ ಹಾರಿಸಿದೆ. ಹೀಗಾಗಿ ಮತ್ತೊಮ್ಮೆ ರಾಯಲಸೀಮೆಯಲ್ಲಿ ಪ್ರಭುತ್ವ ಮೆರೆದು ಕೇಂದ್ರದ ಮೋದಿ ಸರ್ಕಾರದ ಮುಂದೆ ನಿಲ್ಲಬೇಕು ಎಂಬುದು ಜಗನ್ ಆಶಯ.
ವೈಎಸ್ ರಾಜಶೇಖರ್ ರೆಡ್ಡಿಗೆ ಸಮಾಧಿಗೆ ನಮಿಸಿ ಪಾದಯಾತ್ರೆ ಆರಂಭಿಸಲಿರುವ ಜಗನ್, ಮಾರ್ಗ ಮಧ್ಯದಲ್ಲಿ ಕಡಪ ದರ್ಗಾ, ಪುಲಿವೆಂದಲ ಚರ್ಚ್ ಗಳಿಗೂ ಭೇಟಿ ನೀಡಲಿದ್ದಾರೆ.

2019ರ ಚುನಾವಣೆ ಪ್ರಚಾರಕ್ಕೆ ಮುನ್ನುಡಿ
2019ರ ಚುನಾವಣೆ ಪ್ರಚಾರಕ್ಕೆ ಮುನ್ನುಡಿ ಬರೆಯಲಿರುವ ಈ ಪಾದಯಾತ್ರೆ ನಂತರ ಮುಂದಿನ 6 ತಿಂಗಳುಗಳಲ್ಲಿ 125 ಕ್ಷೇತ್ರಗಳಲ್ಲಿ ಸುಮಾರು 5000ಕ್ಕೂ ಅಧಿಕ ರಸ್ತೆ ಬದಿ ಸಭೆಗಳು, 125 ಸಾರ್ವಜನಿಕ ಬೃಹತ್ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ.

1500 ಕಿಮೀ ಪಾದಯಾತ್ರೆ ನಡೆಸಿದ್ದ ರಾಜಶೇಖರ್ ರೆಡ್ಡಿ
2003ರಲ್ಲಿ ಜಗನ್ ತಂದೆ ವೈ ರಾಜಶೇಖರ ರೆಡ್ಡಿ ಅವರು 1500 ಕಿಮೀ ಪಾದಯಾತ್ರೆ ನಡೆಸಿ, ಅಧಿಕಾರಕ್ಕೆ ಬಂದಿದ್ದರು.ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಈ ಹಿಂದೆ ನಡೆಸಿದ್ದ 2800 ಕಿಮೀ ಪಾದಯಾತ್ರೆ ಅತಿಹೆಚ್ಚು ದೀರ್ಘ ಪಾದಯಾತ್ರೆಯಾಗಿತ್ತು. ಈಗ ಜಗನ್ ಪ್ರಜಾ ಸಂಕಲ್ಪ ಯಾತ್ರೆ 3,000 ಕಿ.ಮೀ. ಪೂರೈಸಿ ಮತ್ತೆ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿದ್ದಾರೆ.

ಜಗನ್ ಅವರ ರಾಜಕೀಯ ಸಲಹೆಗಾರ
ಜಗನ್ ಅವರ ರಾಜಕೀಯ ಸಲಹೆಗಾರ, ರಾಯಲಸೀಮೆಯ ಪ್ರಮುಖ ನಾಯಕ ಸಜ್ಜಲ ರಾಮಕೃಷ್ಣ ರೆಡ್ಡಿ, ಹಿರಿಯ ನಾಯಕರಾದ ವೈಎಸ್ ವಿವೇಕಾನಂದ ರೆಡ್ಡಿ, ಸಂಸದ ವೈಎಸ್ ಅವಿನಾಶ್ ರೆಡ್ಡಿ ಎಲ್ಲರೂ ಖುದ್ದು ಈ ಪಾದಯಾತ್ರೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈ ಯಾತ್ರೆ ಸಾಫಲ್ಯಗೊಂಡರೆ ಆಂಧ್ರದಲ್ಲಿ ಟಿಡಿಪಿ ಸರ್ಕಾರಕ್ಕೆ ಭಾರಿ ಹೊಡೆತ ಬೀಳಲಿದೆ.

2019ರ ಚುನಾವಣೆ ನನ್ನ ಗುರಿ ಎಂದ ಜಗನ್
ಪ್ರಜಾ ಸಂಕಲ್ಪ ಯಾತ್ರೆ ಆರಂಭಿಸಿದ ಜಗನ್ ರೆಡ್ಡಿ ಅವರು 2019ರ ಚುನಾವಣೆ ನನ್ನ ಗುರಿ ಎಂದಿದ್ದು, ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಹೆಚ್ಚೆಚ್ಚು ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಸಂಸದರನ್ನು ಆಂಧದಿಂದ ಕಳಿಸಬೇಕು ಎಂಬುದು ಅವರ ಆಶಯವಾಗಿದೆ. ಇದು ಸಾಧ್ಯವಾದರೆ, ಚಂದ್ರಬಾಬು ನಾಯ್ಡು ಅವರ ಟಿಡಿಪಿ ಬೆಲೆ ಕಳೆದುಕೊಳ್ಳಲಿದ್ದಾರೆ.

ಇಬ್ಬರ ಮೇಲೂ ಆರೋಪಗಳಿವೆ
ಆಂಧ್ರಪ್ರದೇಶದ ಸಿಎಂ ಎನ್ ಚಂದ್ರಬಾಬು ನಾಯ್ಡು ಹಾಗೂ ವೈಎಸ್ಸಾರ್ ಪಕ್ಷದ ಜಗನ್ ಮೋಹನ್ ರೆಡ್ಡಿ ಇಬ್ಬರ ಮೇಲೂ ಭ್ರಷ್ಟಾಚಾರದ ಆರೋಪಗಳಿವೆ. ಇತ್ತೀಚಿನ ಪ್ಯಾರಡೈಸ್ ಪೇಪರ್ಸ್ ನಲ್ಲೂ ಜಗನ್ ಹೆಸರು ಉಲ್ಲೇಖವಾಗಿದೆ. ಈ ಹಿಂದೆ ಒಮ್ಮೆ ಮೋದಿ ಅವರ ನೆರವು ಕೋರಿದ್ದ ಜಗನ್ ಗೆ ನಿರಾಶೆಯಾಗಿತ್ತು. ಸಿಬಿಐ ಕೇಸುಗಳು, ಸತಸ ಸೋಲು ಜಗನ್ ರನ್ನು ಕಂಗೆಡಿಸಿದೆ. ಆದರೆ, ಅದ್ಭುತ ಮಾತುಗಾರ ಜಗನ್ ಒಮ್ಮೆ ಜನರ ಬಳಿ ಹೋಗಿ ಮಾತನಾಡಿದರೆ ಮತ್ತೆ ವೈಎಸ್ಸಾರ್ ಪಕ್ಷದತ್ತ ಜನರ ಬೆಂಬಲ ವಾಲುವುದು ಖಚಿತ ಎಂಬ ಅಂಜಿಕೆ ನಾಯ್ಡುಗಿದೆ.












Click it and Unblock the Notifications