ಮೋಹನ್ ಭಾಗ್ವತ್ ಸೇನೆ ಕುರಿತ ಹೇಳಿಕೆಗೆ ಆರೆಸ್ಸೆಸ್ ಸ್ಪಷ್ಟನೆ
ನಾಗ್ಪುರ, ಫೆಬ್ರವರಿ 12: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಬಿಹಾರದ ಮುಝಫರ್ ಪುರದಲ್ಲಿ ಮಾಡಿದ ಭಾಷಣ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಈ ಹೇಳಿಕೆ ಸಂಬಂಧ ಆರೆಸ್ಸೆಸ್ ಸ್ಪಷ್ಟನೆ ನೀಡಿದೆ. ಆದರೆ ಸ್ಪಷ್ಟನೆಯ ಮಧ್ಯೆಯೂ ಯುವ ಕಾಂಗ್ರೆಸ್ ನಾಯಕರು ಇಂದು ದೆಹಲಿಯಲ್ಲಿ ಭಾಗ್ವತ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
"ಸರಸಂಘಚಾಲಕ್ ಮೋಹನ್ ಭಾಗ್ವತ್ ಬಿಹಾರದ ಮುಝಫರ್ ಪುರದಲ್ಲಿ ಮಾಡಿದ ಭಾಷಣವನ್ನು ತಿರುಚಲಾಗಿದೆ. ಒಂದೊಮ್ಮೆ ಪರಿಸ್ಥಿತಿ ಬಂದೊದಗಿದರೆ, ಸಂವಿಧಾನ ಅವಕಾಶ ನೀಡಿದರೆ ಸಂಘದ ಸ್ವಯಂಸೇವಕರನ್ನು ಮೂರು ದಿನಗಳಲ್ಲಿ ಭಾರತೀಯ ಸೇನೆ ತಯಾರು ಮಾಡಬಹುದು. ಅದೇ ಸಾಮಾನ್ಯ ಜನರನ್ನು ತಯಾರು ಮಾಡಲು ಸೇನೆಗೆ ಆರು ತಿಂಗಳ ಬೇಕಾಗುತ್ತದೆ. ಸ್ವಯಂ ಸೇವಕರು ದಿನನಿತ್ಯ ಶಿಸ್ತನ್ನು ಪಾಲಿಸುತ್ತಾರೆ ," ಎಂದಷ್ಟೇ ಅವರು ಹೇಳಿದ್ದು ಎಂದು ಆರೆಸ್ಸೆಸ್ ನ ಪ್ರಚಾರ ಪ್ರಮುಖ ಡಾ. ಮನ್ ಮೋಹನ್ ವೈದ್ಯ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಮೋಹನ್ ಭಾಗ್ವತ್ ವಿವಾದಿತ ಹೇಳಿಕೆ, ತಿರುಗಿಬಿದ್ದ ಕಾಂಗ್ರೆಸ್ಸಿಗರು
ಇದು ಭಾರತೀಯ ಸೇನೆ ಮತ್ತು ಸಂಘದ ಸ್ವಯಂ ಸೇವಕರ ನಡುವಿನ ಹೋಲಿಕೆಯಲ್ಲ. ಬದಲಿಗೆ ಸಾಮಾನ್ಯ ಸಮಾಜ ಮತ್ತು ಸ್ವಯಂ ಸೇವಕರ ನಡುವಿನ ಹೋಲಿಕೆ. ಇಬ್ಬರನ್ನೂ ಭಾರತೀಯ ಸೇನೆಯೇ ಸಜ್ಜುಗೊಳಿಸಬೇಕು ಎಂದು ಆರೆಸ್ಸೆಸ್ ನ ಪ್ರಚಾರ ಪ್ರಮುಖ ಡಾ. ಮನ್ ಮೋಹನ್ ವೈದ್ಯ ಪಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
10 ದಿನಗಳ ಕಾಲ ಬಿಹಾರ ರಾಜ್ಯ ಪ್ರವಾಸದಲ್ಲಿರುವ ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ಅವರು ಭಾನುವಾರ ಮುಝಫರ್ ಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿ, "ಅಗತ್ಯ ಬಿದ್ದರೆ ಮೂರು ದಿನಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಸೇನೆ ಸಿದ್ಧವಾಗಲಿದೆ. ಇಂಥ ಪಡೆ ತಯಾರು ಮಾಡಲು ಭಾರತೀಯ ಸೇನೆಗೆ ಕನಿಷ್ಟ ಆರೇಳು ತಿಂಗಳುಗಳು ಬೇಕಾಗಬಹುದು. ಸಂವಿಧಾನದ ಬೆಂಬಲ ಸಿಕ್ಕರೆ ನಮ್ಮ ಕಾರ್ಯಕರ್ತರು ದೇಶ ರಕ್ಷಣೆಯಲ್ಲಿ ಎಲ್ಲರಿಗಿಂತ ಮುಂದಿರುತ್ತಾರೆ," ಎಂದಿದ್ದರು.
"ನಮ್ಮದು ಕೌಟುಂಬಿಕ ಸಂಸ್ಥೆಯಿದ್ದಂತೆ. ನಾವು ಮಿಲಿಟರಿಯಲ್ಲ ನಿಜ; ಆದರೆ, ನಮ್ಮಲ್ಲೂ ಶಿಸ್ತಿದೆ. ತುರ್ತು ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಬಲಿದಾನ ನೀಡಬಲ್ಲ ಕಾರ್ಯಕರ್ತರಿದ್ದಾರೆ," ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು.
ಇದಕ್ಕೆ ಕಾಂಗ್ರೆಸ್ ಸೇರಿದಂತೆ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮತ್ತು ಆರೆಸ್ಸೆಸ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಆರೆಸ್ಸೆಸ್ ಈ ಸ್ಪಷ್ಟನೆ ನೀಡಿದೆ.