ಸಂಪಾದಕೀಯದಲ್ಲಿ ಯೋಗಿ ಆಯ್ಕೆ ಪ್ರಶ್ನೆ: 'ಟೈಮ್ಸ್' ಗೆ ಕೇಂದ್ರದ ನೋಟಿಸ್
ಯೋಗಿ ಆದಿತ್ಯನಾಥ್ ಅವರನ್ನು 'ಫೈರ್ ಬ್ರಾಂಡ್ ಹಿಂದೂ ಕ್ಲೆರಿಕ್ (ಧರ್ಮಗುರು)' ಎಂದು ಬಣ್ಣಿಸಿದ್ದ ಪತ್ರಿಕೆ, 'ಉತ್ತರ ಪ್ರದೇಶಕ್ಕೆ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದ್ದು ಆಘಾತಕಾರಿ ವಿಚಾರ' ಎಂದೂ ಹೇಳಿತ್ತು.
ನವದೆಹಲಿ, ಮಾರ್ಚ್ 25: ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಯೋಗಿ ಆದಿತ್ಯನಾಥ್ ಅವರನ್ನು ಆಯ್ಕೆ ಮಾಡಿದ ಪ್ರಧಾನಿ ಮೋದಿ ನಡೆ ಅಪಾಯಕಾರಿ ಎಂದು ತನ್ನ ಸಂಪಾದಕೀಯ ಬರಹದಲ್ಲಿ ಹೇಳಿಕೊಂಡಿದ್ದ 'ದ ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿಗೊಳಿಸಿದ್ದು, ತನ್ನ ನಿಲುವಿಗೆ ಸಮರ್ಥನೆ ನೀಡುವಂತೆ ಕೇಳಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕೇಂದ್ರ ವಿದೇಶಾಂಗ ಇಲಾಖೆಯು, ''ಪ್ರತಿಯೊಂದು ಪತ್ರಿಕೆಗೂ ಅದರದ್ದೇ ಆದ ಸಂಪಾದಕೀಯ ಬರಹಗಳನ್ನು ಬರೆಯುವ ಸ್ವಾತಂತ್ರ್ಯವಿದೆ. ಆದರೆ, ಆ ಸಂಪಾದಕೀಯ ಬರಹಗಳು ನಿಷ್ಪಕ್ಷಪಾತವಾಗಿದ್ದು, ವಿದ್ವಾಂಸದ ಮಟ್ಟದಲ್ಲಿರಬೇಕು ಎಂದು ಎಲ್ಲರೂ ನಿರೀಕ್ಷಿಸುತ್ತಾರೆ. ಆದರೆ, ಜನಾದೇಶವನ್ನೇ ಪ್ರಶ್ನಿಸುವಂತಹ, ಜನಾದೇಶಕ್ಕೆ ಅನುಗುಣವಾಗಿ ಕೈಗೊಂಡ ನಿರ್ಧಾರವನ್ನು ಟೀಕಿಸುವಂಥ ಬರಹಗಳು ಪ್ರಶ್ನಾರ್ಹವಾಗುತ್ತವೆ'' ಎಂದು ಹೇಳುವ ಮೂಲಕ ತನ್ನ ನೋಟಿಸ್ ಅನ್ನು ಸಮರ್ಥಿಸಿಕೊಂಡಿದೆ.[ಯೋಗಿ ಆದಿತ್ಯನಾಥ್ ಕಚೇರಿಯಲ್ಲಿ ಮುಲಾಯಂ ಪುತ್ರ, ಸೊಸೆ: ಯಾಕೀ ಭೇಟಿ?]
ಯೋಗಿ ಆದಿತ್ಯನಾಥ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಘೋಷಿಸಿದ ಬೆನ್ನಲ್ಲೇ ಬಂದಿದ್ದ ತನ್ನ ಸಂಪಾದಕೀಯ ಬರಹದಲ್ಲಿ, 'ದ ನ್ಯೂಯಾರ್ಕ್ ಟೈಮ್ಸ್', ಹಿಂದತ್ವದ ತಳಹದಿಯ ಮೇಲೆ ನಿಂತಿರುವ ಪಕ್ಷದಿಂದ ಪ್ರಧಾನಿಯಂಥ ಹುದ್ದೆಗೆ ಏರಿರುವ ನರೇಂದ್ರ ಮೋದಿಯವರು, ಇತ್ತೀಚೆಗೆ ಹಿಂದುತ್ವ ಪ್ರತಿಪಾದಕರನ್ನು ರಾಜಕೀಯ ಉದ್ದೇಶಗಳಿಗಾಗಿ ಅಪ್ಪಿಕೊಳ್ಳುತ್ತಿರುವುದು ಅಪಾಯಕಾರಿ ಎಂದು ಹೇಳಿತ್ತು.[ವಿಮಾನ ನಿಲ್ದಾಣದಲ್ಲೇ ಸಂಧ್ಯಾವಂದನೆ: ವೈರಲ್ ಆಯ್ತು ಆಚಾರ್ ಫೋಟೊ!]
ಅಲ್ಲದೆ, ಯೋಗಿ ಆದಿತ್ಯನಾಥ್ ಅವರನ್ನು 'ಫೈರ್ ಬ್ರಾಂಡ್ ಹಿಂದೂ ಕ್ಲೆರಿಕ್ (ಧರ್ಮಗುರು)' ಎಂದು ಬಣ್ಣಿಸಿದ್ದ ಪತ್ರಿಕೆ, 'ಉತ್ತರ ಪ್ರದೇಶಕ್ಕೆ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದ್ದು ಆ ರಾಜ್ಯದಲ್ಲಿರುವ ಅಲ್ಪಸಂಖ್ಯಾತರ ಪಾಲಿಗೆ ಆಘಾತಕಾರಿ ವಿಚಾರ' ಎಂದೂ ಹೇಳಿತ್ತು.












Click it and Unblock the Notifications