ವಿಡಿಯೋ; ಕೆಂಪುಕೋಟೆ ಗೋಡೆಗೆ ತಲುಪಿದ ಯಮುನಾ ಪ್ರವಾಹ!
ನವದೆಹಲಿ, ಜುಲೈ 16; ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರವಾಹ ಉಂಟಾಗಿದೆ. ಯಮುನಾ ನದಿ ಅಪಾಯಮಟ್ಟವನ್ನು ಮೀರಿ ಹರಿಯುತ್ತಿದ್ದು, ನಗರದ ಪ್ರದೇಶದ ಜನರಿಗೆ ಕುಡಿಯುವ ನೀರಿಗೆ ಸಹ ಸಮಸ್ಯೆ ಉಂಟಾಗಿದೆ. ರಾಜಕೀಯ ಟೀಕೆ ಟಿಪ್ಪಣಿಗಳಿಗೆ ಸಹ ಪ್ರವಾಹ ಸಾಕ್ಷಿಯಾಗಿದೆ.
ಉಕ್ಕಿ ಹರಿಯುತ್ತಿರುವ ಯಮುನಾ ನದಿ ಪ್ರವಾಹದಿಂದ ನವದೆಹಲಿಯ ಹಲವು ರಸ್ತೆ, ಬಡಾವಣೆಗಳು ಜಲಾವೃತವಾಗಿವೆ. ಈಗ ಪ್ರವಾಹದ ನೀರು ಐತಿಹಾಸಿಕ ಕೆಂಪುಕೋಟೆಯ ಗೋಡೆಯನ್ನು ತಲುಪಿದೆ. ಈ ಕುರಿತ ವಿಡಿಯೋವನ್ನು ANI ಟ್ವೀಟ್ ಮಾಡಿದೆ.

ದೆಹಲಿಯ ರಿಂಗ್ ರೋಡ್ನಲ್ಲಿರುವ ಕೆಂಪುಕೋಟೆಯ ಗೋಡೆಗೆ ಯಮುನಾ ನದಿ ನೀರು ತಲುಪಿದೆ. ಸುತ್ತಮುತ್ತಲಿನ ಪ್ರದೇಶಗಳು ಯಮುನಾ ಪ್ರವಾಹದಲ್ಲಿ ಮುಳುಗಿವೆ. ನೀರು ತುಂಬಿರುವ ಕಾರಣ ರಿಂಗ್ ರಸ್ತೆಯನ್ನು ದೆಹಲಿ ಪೊಲೀಸರು ಬಂದ್ ಮಾಡಿದ್ದಾರೆ.
ವಿಡಿಯೋ ನೋಡಿ; ಎಎನ್ಐ ಕೆಂಪುಕೋಟೆಯ ಗೋಡೆಗೆ ಯಮುನಾ ನದಿ ನೀರು ತಲುಪಿರುವ ರಿಂಗ್ ರಸ್ತೆಯ ವಿಡಿಯೋವನ್ನು ಟ್ವೀಟ್ ಮಾಡಿದೆ. ಉಕ್ಕಿ ಹರಿಯುತ್ತಿರುವ ಯಮುನಾ ನದಿಯ ನೀರಿನಲ್ಲಿ ಹಲವು ಪ್ರದೇಶಗಳು, ರಸ್ತೆಗಳು ಜಲಾವೃತವಾಗಿದ್ದನ್ನು ಕಾಣಬಹುದಾಗಿದೆ.
#WATCH | Delhi: As water from overflowing Yamuna River has touched the Red Fort wall on Ring road, the nearby area remains inundated.
— ANI (@ANI) July 16, 2023
(Drone visuals) pic.twitter.com/bCAjU5cUzw
ಶನಿವಾರ ದೆಹಲಿಯ ಪ್ರವಾಹ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದಿದೆ ಎಂದು ವಿಭಾಗೀಯ ಆಯುಕ್ತ ಅಶ್ವನಿ ಕುಮಾರ್ ಹೇಳಿದ್ದರು. ಮಳೆ ಬಾಧಿತ ಪ್ರದೇಶಗಳಲ್ಲಿನ ಪರಿಸ್ಥಿತಿ ಕೂಡ ಸುಧಾರಿಸುತ್ತಿದೆ ಎಂದು ಅವರು ತಿಳಿಸಿದ್ದರು.
ದೆಹಲಿ ಮಹಾನಗರ ಪಾಲಿಕೆ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವುದು. ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ಅಗತ್ಯ ಕಾರ್ಯಗಳಲ್ಲಿ ತೊಡಗಿದೆ.
ಯಮುನಾ ನದಿ ಪ್ರವಾಹ ಕೊಂಚ ಇಳಿಮುಖವಾದ ಕಾರಣ ಜನರು ಸ್ವಲ್ಪ ನಿರಾಳರಾಗಿದ್ದರು. ಕೆಲವು ಪ್ರದೇಶಗಳಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡ ಬಾಧಿತರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ಮುಂದುವರೆಸಲಾಗಿದೆ.
ಒಡಿಶಾ ರಾಜ್ಯದ ಭುವನೇಶ್ವರ ಮತ್ತು ಕಟಕ್ನಲ್ಲಿ ಶನಿವಾರವೂ ಮಳೆಯಾಗಿದೆ. ರಸ್ತೆಗಳಲ್ಲಿ, ಜನವಸತಿ ಪ್ರದೇಶಗಳಲ್ಲಿ ನೀರು ನಿಂತು ಜನರು ಪರದಾಡಿದರು. ಭಾರತೀಯ ಹವಾಮಾನ ಇಲಾಖೆ ಜುಲೈ 17ರ ತನಕ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹೇಳಿದೆ. ಜುಲೈ 18ರಂದು ಯೆಲ್ಲೋ ಅಲರ್ಟ್ ಸಹ ಘೋಷಣೆ ಮಾಡಿದ್ದು, ಜನರ ಆತಂಕ ಹೆಚ್ಚಿಸಿದೆ.
ನವದೆಹಲಿಯಲ್ಲಿ ಯಮುನಾ ನದಿ ನೀರಿನ ಅಪಾಯ ಮಟ್ಟ 204 ಮೀಟರ್. ಭಾನುವಾರ ಬೆಳಗ್ಗೆ 8 ಗಂಟೆಯ ಮಾಹಿತಿಯಂತೆ ನದಿಯಲ್ಲಿ 206.02 ಮೀಟರ್ ನೀರು ಹರಿಯುತ್ತಿದೆ. ರಾಷ್ಟ್ರ ರಾಜಧಾನಿಯ ಜನರು ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರವಾಹ ರಾಜಕೀಯ; ದೆಹಲಿಯ ಯಮುನಾ ಪ್ರವಾಹ ರಾಜಕೀಯಕ್ಕೂ ಕಾರಣವಾಗಿದೆ. ಕೇಂದ್ರ ಸರ್ಕಾರ ಮತ್ತು ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರದ ನಡುವೆ ಕಿತ್ತಾಟ ನಡೆಯುತ್ತಿದೆ. ಪರಸ್ಪರ ಆರೋಪ ಪ್ರತ್ಯಾರೋಪ ಮಾಡಲಾಗುತ್ತಿದೆ.
ಶನಿವಾರ ದೆಹಲಿಯ ಲೋಕೋಪಯೋಗಿ ಸಚಿವೆ ಅತಿಶಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದು, ಪ್ರವಾಹ ಸಂತ್ರಸ್ತರಿಗಾಗಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ ಜನರಿಗೆ ನೀರು ಮತ್ತು ಶೌಚಾಲಯಗಳ ಕೊರತೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾಳಜಿ ಕೇಂದ್ರದಲ್ಲಿ ಸರಿಯಾದ ವಿದ್ಯುತ್ ಸಂಪರ್ಕವಿಲ್ಲ. ಆಹಾರ ಸಿಗುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ವಿಭಾಗೀಯ ಆಯುಕ್ತರನ್ನು ಸಂಪರ್ಕಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ. ನನ್ನ ಕರೆಗಳಿಗೆ, ಸಂದೇಶಗಳಿಗೆ ಅವರು ಸ್ಪಂದಿಸುತ್ತಿಲ್ಲ ಎಂದು ಪತ್ರದಲ್ಲಿ ಆರೋಪ ಮಾಡಿದ್ದಾರೆ.
ಸಚಿವೆ ಅತಿಶಿ ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಖಂಡಿಸಿದ್ದು, ಸುಗ್ರೀವಾಜ್ಞೆ ವಿನಾಶಕಾರಿ ಎಂಬುದು ಪ್ರವಾಹ ಪರಿಹಾರ ಸಂದರ್ಭದಲ್ಲಿಯೇ ಸಾಬೀತಾಗಿದೆ ಎಂದು ದೂರಿದ್ದಾರೆ.












Click it and Unblock the Notifications