ಉತ್ತರ ಪ್ರದೇಶ: ಮಗನ ಕೊಲೆ ಆರೋಪಕ್ಕಾಗಿ ತಾಯಿಗೆ ಬಹಿಷ್ಕಾರದ ಶಿಕ್ಷೆ
ಲಲಿತ್ಪುರ(ಉತ್ತರ ಪ್ರದೇಶ), ನವೆಂಬರ್ 29: ಪುತ್ರನನ್ನು ಕೊಲೆ ಮಾಡಿದ್ದಾಳೆ ಎಮಬ ಆರೋಪದ ಮೇಲೆ ತಾಯಿ ಮತ್ತವರ ಕುಟುಂಬಕ್ಕೆ ಊರಿನಿಂದಲೇ ಬಹಿಷ್ಕಾರ ಹಾಕಿದ ಘಟನೆ ಉತ್ತರ ಪ್ರದೇಶದ ಲಲಿತ್ಪುರ ಎಂಬಲ್ಲಿ ನಡೆದಿದೆ.
ಕೊಪ್ಪಳದಲ್ಲಿ 4 ಲಂಬಾಣಿ ಕುಟುಂಬಗಳಿಗೆ ಬಹಿಷ್ಕಾರ
ಎರಡು ತಿಂಗಳ ಹಿಂದೆ ಮಹಿಳೆಯೊಬ್ಬರ ಪುತ್ರ ಮನೆಯ ಬಳಿಯ ಮರವೊಂದಕ್ಕೆ ನೇಣುಬಿಗಿದುಕೊಂಡು ಸಾವಿಗೀಡಾಗಿದ್ದ. ಈ ಕುರಿತಂತೆ ಪಂಚಾಯತಿ ಮಾಡಿದಾಗ ಊರಿನಲ್ಲಿರುವ ಕೆಲವು ಗೂಂಡಾಗಳು ತನ್ನ ಮಗನನ್ನು ದ್ವೇಷಿಸುತ್ತಿದ್ದರು, ಅವರೇ ನನ್ನ ಮಗನನ್ನು ಸಾಯಿಸಿ, ಕೊನೆಗೆ ನೇಣಿಗೇರಿಸಿದ್ದಾರೆ ಎಂದು ತಾಯಿ ಮತ್ತು ಆಕೆಯ ಕುಟುಂಬಸ್ಥರು ಪಂಚಾಯಿತಿಯಲ್ಲಿ ಹೇಳಿದ್ದರು.
ಆದರೆ ಪ್ರಭಾವಿಗಳಾಗಿದ್ದ ಗೂಂಡಾಗಳು ಈ ಆರೋಪವನ್ನು ಮೃತನ ತಾಯಿಯ ಮೇಲೇ ಹೊರೆಸಿ, ಅವರನ್ನು ಊರಿನಿಂದ ಬಹಿಷ್ಕಾರ ಹಾಕುವಂತೆ ಪಂಚಾಯತಿಯನ್ನು ಒತ್ತಾಯಿಸಿದ್ದರು. ಉಳ್ಳವರ ಪರವೇ ನ್ಯಾಯ ಎಂಬ ತತ್ತ್ವವನ್ನು ಪಾಲಿಸಿದ ಪಂಚಾಯತಿ, ತಾಯಿ ಮತ್ತು ಆಕೆಯ ಕುಟುಂಬಸ್ಥರ ತಲೆಯನ್ನು ಬೋಳಿಸಿ, ಊರಿಂದ ಬಹಿಷ್ಕಾರ ಹಾಕಿದೆ.
ಈ ಕುರಿತು ಪೊಲೀಸರಿಗೆ ದೂರು ನೀಡುವುದಕ್ಕೆ ಹೋದರೂ, ಈ ಕುಟುಂಬದ ದೂರನ್ನು ದಾಖಲಿಸಿಕೊಳ್ಳದೆ, ಪಂಚಾಯತಿಯ ತೀರ್ಮಾನವೇ ಅಂತಿಮ ಎಂದು ಪೊಲೀಸರು ಹೇಳಿದ್ದಾರೆ. ಇದರಿಂದ ಬೇರೆ ದಾರಿ ಕಾಣದ ಈ ಕುಟುಂಬ ಊರಿಂದ ಹೊರನಡೆದಿದೆ.