ರಾಷ್ಟ್ರಪತಿ ಚುನಾವಣೆ: ಶಿವಸೇನೆ ಸತತ ಮೂರನೇ ಬಾರಿ ಬಿಜೆಪಿಗೆ ಕೈಕೊಡುತ್ತಾ?
ಕಳೆದೆರಡು ರಾಷ್ಟ್ರಪತಿ ಚುನಾವಣೆಗಳಲ್ಲಿ ಬಿಜೆಪಿ ಕಣಕ್ಕಿಳಿಸಿದ್ದ ಅಭ್ಯರ್ಥಿಗೆ, ಬಿಜೆಪಿಯ ಮಿತ್ರ ಪಕ್ಷವಾದ ಶಿವಸೇನೆ ಬೆಂಬಲಿಸಿರಲಿಲ್ಲ. ಹಾಗಾಗಿ, ಈ ಬಾರಿಯ ರಾಷ್ಟ್ರಪತಿ ಚುನಾವಣೆ ವೇಳೆ ಅದು ಬಿಜೆಪಿಗೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತದೆಯೇ?
ನವದೆಹಲಿ, ಜೂನ್ 9: ರಾಷ್ಟ್ರಪತಿ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಮುಂದಿನ ತಿಂಗಳ 20ರಂದು ಭಾರತವು ಹೊಸ ರಾಷ್ಟ್ರಪತಿಯನ್ನು ನೋಡಲಿದೆ.
ಎಲ್ಲಾ ಪಕ್ಷಗಳಂತೆ ಬಿಜೆಪಿಯೂ ರಾಷ್ಟ್ರಪತಿ ಚುನಾವಣೆಗೆ ತನ್ನ ಮಿತ್ರಪಕ್ಷಗಳೊಂದಿಗೆ ಚುನಾವಣಾ ಕಾರ್ಯತಂತ್ರ ರೂಪಿಸುತ್ತಿದೆ. ಆದರೆ, ಬಿಜೆಪಿಯ ಮುಂದಾಳತ್ವದಲ್ಲಿ ರೂಪಿತಗೊಂಡಿರುವ ಎನ್ ಡಿಎ ಮಿತ್ರ ಪಕ್ಷವಾದ ಶಿವಸೇನೆ, ಸತತ ಮೂರನೇ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಆಯ್ಕೆಯ ಅಭ್ಯರ್ಥಿಗೆ ಬೆಂಬಲ ಸೂಚಿಸುವುದಿಲ್ಲವಾ ಎಂಬ ಪ್ರಶ್ನೆ ಈಗ ಕಾಡತೊಡಗಿದೆ.
ಹೌದು. ಇಂಥದ್ದೊಂದು ಪ್ರಶ್ನೆ ಕಾಡಲೂ ಕಾರಣವಿದೆ. ಈ ಹಿಂದೆ ನಡೆದ ಎರಡು ರಾಷ್ಟ್ರಪತಿ ಚುನಾವಣೆಗಳಲ್ಲಿ ಎನ್ ಡಿಎ ವಲಯದ ಪ್ರಭಾವಿ ಪಕ್ಷವಾಗಿದ್ದರೂ, ಅದು ಬಿಜೆಪಿಯು ಚುನಾವಣಾ ಕಣಕ್ಕಿಳಿಸಿದ್ದ ಅಭ್ಯರ್ಥಿಯನ್ನು ಬಿಟ್ಟು ವಿರೋಧ ಪಕ್ಷಗಳ ಅಭ್ಯರ್ಥಿಗೆ ಮತ ಹಾಕಿ, ಅವರು ಗೆಲ್ಲುವಲ್ಲಿ ತನ್ನದೂ ಒಂದು ಕಾಣಿಕೆ ಸಲ್ಲಿಸಿದೆ.
2007ರಲ್ಲಿ ನಡೆದಿದ್ದ ರಾಷ್ಟ್ರಪತಿ ಚುನಾವಣೆ ವೇಳೆ ಪ್ರತಿಭಾ ಪಾಟೀಲ್ ಅವರನ್ನು ಶಿವಸೇನೆ ಬೆಂಬಲಿಸಿತ್ತು. 2012ರಲ್ಲಿ ನಡೆದಿದ್ದ ಚುನಾವಣೆ ವೇಳೆ ಅದು ಪ್ರಣಬ್ ಮುಖರ್ಜಿಯವರನ್ನು ಬೆಂಬಲಿಸಿತ್ತು. ಈ ಇಬ್ಬರೂ ಆಗ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು.
ಆ ಎರಡೂ ಚುನಾವಣೆಗಳಲ್ಲಿ ವಿರೋಧಿ ವಲಯದ ಅಭ್ಯರ್ಥಿಯನ್ನು ಬೆಂಬಲಿಸಿದ್ದ ಶಿವಸೇನೆ ಈಗ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲಕಾರಿ. ಅಲ್ಲದೆ, ಈ ಬಾರಿಯೂ ತಾನು ಸ್ವತಂತ್ರವಾಗಿ ಆಲೋಚಿಸಿ, ಅವಲೋಕಿಸಿ ತನಗೆ ಸೂಕ್ತ ಎನಿಸುವವರಿಗೇ ಮತ ಹಾಕುವುದಾಗಿ ಶಿವಸೇನೆ ಹೇಳಿರುವುದು ಬಿಜೆಪಿಗೆ ಮತ್ತೊಮ್ಮೆ ಇರುಸು ಮುರುಸು ತಂದಿರುವುದಂತೂ ಸ್ಪಷ್ಟ.