ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಬಿಜೆಪಿಗೆ ಘರ್ ವಾಪ್ಸಿ?
Recommended Video
ನವದೆಹಲಿ, ಫೆ 27: ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂದು ವರ್ಷದ ಮೇಲೆ ಇರುವಾಗಲೇ, ಬಿಜೆಪಿ ತಂತ್ರಗಾರಿಕೆ ರೂಪಿಸಲು ಆರಂಭಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಯಶಸ್ವೀ ತಂತ್ರಗಾರಿಕೆ ಹಣೆದಿದ್ದ ಪ್ರಶಾಂತ್ ಕಿಶೋರ್ ಮತ್ತೆ ಬಿಜೆಪಿ ಪಾಳಯಕ್ಕೆ ಸೇರುವ ಸಾಧ್ಯತೆ ದಟ್ಟವಾಗಿದೆ.
'ಚಾಯ್ ಪೇ ಚರ್ಚಾ'. 'ಅಬ್ ಕೀ ಬಾರ್ ಮೋದಿ ಸರ್ಕಾರ್' ಮುಂತಾದ ಟ್ಯಾಗ್ ಲೈನ್ ಮೂಲಕ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ರಣತಂತ್ರ ರೂಪಿಸಿ ಸೈ ಎನಿಸಿಕೊಂಡಿದ್ದ ಪ್ರಶಾಂತ್ ಕಿಶೋರ್, 2012ರ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲೂ ಬಿಜೆಪಿ ಪರ ಕೆಲಸ ಮಾಡಿದ್ದರು.
ಬಿಜೆಪಿಯ ಎ ಪ್ಲಾನ್, ಬಿ ಪ್ಲಾನ್ ಕುರಿತು ಇಂಟರೆಸ್ಟಿಂಗ್ ಚರ್ಚೆ
ಕಳೆದ ಲೋಕಸಭಾ ಚುನಾವಣೆಯ ನಂತರ ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಜೊತೆ ಭಿನ್ನಾಭಿಪ್ರಾಯ ತಲೆದೋರಿದ್ದರಿಂದ, ಬಿಜೆಪಿ ವಾರ್ ರೂಂನಿಂದ ಪ್ರಶಾಂತ್ ಹೊರಬಂದಿದ್ದರು. ಆದರೆ, ಪ್ರಧಾನಿ ಮೋದಿ ಜೊತೆ ಯಾವುದೇ ಮನಸ್ತಾಪವನ್ನು ಪ್ರಶಾಂತ್ ಹೊಂದಿರಲಿಲ್ಲ.
ಮೂಲಗಳ ಪ್ರಕಾರ ಪ್ರಧಾನಿ ಮೋದಿ ಈಗಾಗಲೇ ಪ್ರಶಾಂತ್ ಅವರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ, ಜೊತೆಗೆ ಅಮಿತ್ ಶಾ ಎಲ್ಲಾ ಭಿನ್ನಾಭಿಪ್ರಾಯಗಳನ್ನು ದೂರವಿಟ್ಟು ಒಂದು ಸುತ್ತಿನ ಮಾತುಕತೆಯನ್ನು ಪ್ರಶಾಂತ್ ಜೊತೆ ನಡೆಸಿದ್ದಾರೆ ಎನ್ನುವ ಮಾಹಿತಿಯಿದೆ.
ಅಮಿತ್ ಶಾ ಜೊತೆಗಿನ ಮನಸ್ತಾಪದಿಂದ ಬೇಸತ್ತು ಪ್ರಶಾಂತ್ ಕಿಶೋರ್, ಬಿಜೆಪಿ ವಿರೋಧಿಗಳ ಜೊತೆ ಕೈಜೋಡಿಸಿದ್ದರು. ಅದರಲ್ಲಿ ಬಿಹಾರ ಮತ್ತು ಉತ್ತರಪ್ರದೇಶದ ಚುನಾವಣೆಯೂ ಒಂದು.
ಹಲವು ಬಾರಿ ಮೋದಿಯವರನ್ನು ಭೇಟಿಯಾಗಿರುವ ಪ್ರಶಾಂತ್ ಕಿಶೋರ್
2019ರ ಲೋಕಸಭಾ ಚುನಾವಣೆಯ ಸಂಬಂಧ ಪ್ರಶಾಂತ್ ಕಿಶೋರ್ ಹಲವು ಬಾರಿ ಮೋದಿಯವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಜೊತೆಗೆ ಮೋದಿ ಅಲೆ ಏಳುವಂತೆ ಮಾಡಲು ಯಶಸ್ವಿಯಾಗಿದ್ದದ್ದು ಪ್ರಶಾಂತ್ ಅವರ ಬ್ಯಾಕ್ ಗ್ರೌಂಡ್ ಕೆಲಸ ಕಾರಣ ಎನ್ನುವುದನ್ನು ಅರಿತಿರುವ ಪ್ರಧಾನಿ, ಮುಂದಿನ ಚುನಾವಣೆಗೂ ಅವರನ್ನೇ ನೇಮಿಸುವುದು ಬಹುತೇಕ ಖಚಿತ ಎನ್ನುವ ಮಾಹಿತಿಯಿದೆ.
ಬಿಜೆಪಿಗೆ ಬಿಹಾರದಲ್ಲಿ ಭಾರೀ ಮುಖಭಂಗ ತಂದಿದ್ದ ಪ್ರಶಾಂತ್
ಅಮಿತ್ ಶಾ ಜೊತೆಗಿನ ಭಿನ್ನಾಭಿಪ್ರಾಯದಿಂದ ಬಿಜೆಪಿಯಿಂದ ದೂರವಾದ ಪ್ರಶಾಂತ್ ಕಿಶೋರ್, ಬಿಹಾರದ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮೈತ್ರಿಕೂಟದ ಜೊತೆ ಕೆಲಸ ಮಾಡಿದ್ದರು. 'ಸಾರಾಯಿ ಮುಕ್ತ ಬಿಹಾರ' ಮಂತ್ರದ ತಂತ್ರಗಾರಿಕೆ ರೂಪಿಸಿ, ಪ್ರಶಾಂತ್ ಬಿಜೆಪಿಗೆ ಬಿಹಾರದಲ್ಲಿ ಭಾರೀ ಮುಖಭಂಗ ತಂದೊಡ್ಡಿದ್ದರು.
ತಂತ್ರಗಾರಿಕೆ ದಯನೀಯ ವೈಫಲ್ಯವನ್ನು ಕಂಡಿತ್ತು
ಇದಾದ ನಂತರ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದ ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆ ದಯನೀಯ ವೈಫಲ್ಯವನ್ನು ಕಂಡಿತ್ತು. ಜಾತಿ ಲೆಕ್ಕಾಚಾರದ ಮರ್ಮ ಅರಿಯದೆ 'ಮೇಲ್ವರ್ಗದ ಸಿಎಂ' ಎಂದು ಬ್ರಾಹ್ಮಣ ಸಿಎಂ ಅಭ್ಯರ್ಥಿ (ಶೀಲಾ ದೀಕ್ಷಿತ್) ಗೆ ಮಣೆ ಹಾಕಿ, ಪ್ರಶಾಂತ್ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಹೊಡಿದಿತ್ತು.
ಪೂರಕ ವಾತಾವರಣ ಸೃಷ್ಟಿಸುವಲ್ಲಿ ಪ್ರಶಾಂತ್ ಕಿಶೋರ್ ಯಶಸ್ವಿ
ಸದ್ಯ, ಪ್ರಶಾಂತ್ ಕಿಶೋರ್ ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆ ಏರಲೇಬೇಕೆಂದು ರಾಜ್ಯ ಪ್ರವಾಸ ಮಾಡುತ್ತಿರುವ ವೈ. ಜಗನ್ಮೋಹನ್ ರೆಡ್ಡಿ ಪರ ಸ್ವಲ್ಪ ಮಟ್ಟಿನ ಪೂರಕ ವಾತಾವರಣ ಸೃಷ್ಟಿಸುವಲ್ಲಿ ಪ್ರಶಾಂತ್ ಕಿಶೋರ್ ಯಶಸ್ವಿಯಾಗುತ್ತಿದ್ದಾರೆ ಎನ್ನುವ ಮಾಹಿತಿಯಿದೆ.
ಪ್ರಶಾಂತ್ ಯಾವ ರೀತಿಯ ತಂತ್ರಗಾರಿಕೆ ರೂಪಿಸಲಿದ್ದಾರೆ
ಮುಂದಿನ ಚುನಾವಣೆಯಲ್ಲಿ ಮತ್ತೆ ಗೆಲ್ಲಲು ಎಲ್ಲಾ ಮನಸ್ತಾಪವನ್ನು ದೂರವಿಟ್ಟು ಅಮಿತ್ ಶಾ, ಪ್ರಶಾಂತ್ ಅವರನ್ನು ಬಿಜೆಪಿಗೆ ಮತ್ತೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಕಳೆದ ಬಾರಿಗಿಂತ ಈ ಬಾರಿ ತಂತ್ರಗಾರಿಕೆ ರೂಪಿಸುವುದು ಭಿನ್ನ ಎನ್ನುವುದನ್ನು ಅರಿತಿರುವ, (ಒಂದು ವೇಳೆ ಬಿಜೆಪಿಗೆ ಸೇರಿದ್ದೇ ಆದಲ್ಲಿ) ಪ್ರಶಾಂತ್ ಯಾವ ರೀತಿಯ ತಂತ್ರಗಾರಿಕೆ ರೂಪಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಬಸವನಗೌಡ ವಿರುದ್ಧ ಬಸನಗೌಡ, ಇದು ಅಮಿತ್ ಶಾ ತಂತ್ರ
ವಿಡಿಯೋ: ರಾಹುಲ್ ಗಾಂಧಿ ಮಿಮಿಕ್ರಿ ಮಾಡಿ ರಂಜಿಸಿದ ಅಮಿತ್ ಶಾ!