ಮಕ್ಕಳು, ಹದಿಹರೆಯದವರಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಳ: WHO
ನವದೆಹಲಿ, ಅಕ್ಟೋಬರ್ 08: ಭಾರತದಲ್ಲಿ 0-19ರ ವಯೋಮಾನದವರಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳ ಕಂಡುಬರುತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಈಚಿನ ಅಧ್ಯಯನ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಕೋವಿಡ್ 19 ವಾರದ ಕೊರೊನಾ ವರದಿಯಲ್ಲಿ, ಡೆಲ್ಟಾ ಕೊರೊನಾ ರೂಪಾಂತರದಿಂದಾಗಿ ಲಸಿಕೆ ನೀಡಿದ ನಂತರವೂ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಿದೆ.
9500 ಕೊರೊನಾ ರೋಗಿಗಳ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದ್ದು, ಕಿರಿಯ ವಯಸ್ಸಿನ, ಅಂದರೆ 0-19ರ ವಯೋಮಾನದವರಲ್ಲಿ ಹಾಗೂ ಮಹಿಳೆಯರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವುದು ಅಧ್ಯಯನ ತಿಳಿಸಿದೆ. ಹದಿಹರೆಯದವರಲ್ಲಿ ಹಾಗೂ ಮಕ್ಕಳಲ್ಲಿ ಕ್ರಮೇಣ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಲಸಿಕೆ ಪಡೆದ ನಂತರ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯೂ ಡೆಲ್ಟಾ ರೂಪಾಂತರದಿಂದಾಗಿ ಹೆಚ್ಚಾಗಿದೆ ಎಂದು ಹೇಳಿದೆ.

ಜಾಗತಿಕವಾಗಿ ವಾರದ ಕೊರೊನಾ ಪ್ರಕರಣಗಳ ಸಂಖ್ಯೆ ಹಾಗೂ ಮರಣ ಸಂಖ್ಯೆ ಇಳಿಮುಖವಾಗಿದೆ. ಆಗಸ್ಟ್ ತಿಂಗಳಿನಿಂದಲೂ ಈ ಬದಲಾವಣೆ ಕಂಡುಬಂದಿದೆ. ಸೆಪ್ಟೆಂಬರ್ 27ರಿಂದ ಅಕ್ಟೋಬರ್ 3ರವರೆಗೆ 3.1 ಮಿಲಿಯನ್ ಹೊಸ ಕೊರೊನಾ ಪ್ರಕರಣಗಳು ಹಾಗೂ 54000 ಮರಣ ಸಂಭವಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ 9% ಇಳಿಕೆಯಾಗಿದೆ. ಮರಣ ಪ್ರಮಾಣ ಹಾಗೇ ಉಳಿದಿದೆ ಎಂದಿದೆ.
ಆಫ್ರಿಕಾದಲ್ಲಿ ಹೊಸ ಕೊರೊನಾ ಪ್ರರಕಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಇದರ ಪ್ರಮಾಣ 43% ಆಗಿದೆ. ಮೆಡಿಟರೇನಿಯನ್ (21%), ಆಗ್ನೇಯ ಏಷ್ಯಾ (19%), ಅಮೆರಿಕ (12%) ಮಟ್ಟದಲ್ಲಿ ಕೊರೊನಾ ಪ್ರಕರಣಗಳ ಇಳಿಕೆಯಾಗಿರುವುದಾಗಿ ತಿಳಿಸಿದೆ.

ಜಾಗತಿಕವಾಗಿ ವರದಿಯಾದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 234 ಮಿಲಿಯನ್ ಆಗಿದ್ದು, ಮರಣ ಪ್ರಮಾಣ 4.8 ಮಿಲಿಯನ್ಗಿಂತ ಕಡಿಮೆ ಇದೆ.
ಭಾರತದಲ್ಲಿ ಕೊರೊನಾ ಪ್ರಕರಣಗಳು:
ಭಾರತದಲ್ಲಿ ಶುಕ್ರವಾರ 21,257 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು,. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 2,40,257 ಆಗಿದೆ. 271 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟಾರೆ ಮರಣ ಸಂಖ್ಯೆ 4,50,127ಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಮತ್ತೆ ಸೋಂಕಿಗೆ ತುತ್ತಾದವರ ಸಂಖ್ಯೆ 3,32,25,221 ಆಗಿದೆ.
ಕೇರಳ, ಮಹಾರಾಷ್ಟ್ರ, ತಮಿಳುನಾಡು, ಮಿಝೋರಾಂ ಹಾಗೂ ಕರ್ನಾಟಕದಲ್ಲಿ 10 ಸಾವಿರಕ್ಕೂ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳಿವೆ. ಲಕ್ಷದ್ವೀಪ, ಚಂಡೀಗಢ, ಗೋವಾ, ಹಿಮಾಚಲ ಪ್ರದೇಶ, ಅಂಡಮಾನ್, ನಿಕೋಬಾರ್ ದ್ವೀಪಗಳು, ಸಿಕ್ಕಂನಲ್ಲಿ 100% ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.
ದಿನನಿತ್ಯ 5 ಲಕ್ಷ ಕೊರೊನಾ ಪ್ರಕರಣಗಳ ನಿರ್ವಹಣೆಗೆ ಕೇಂದ್ರ ಸಜ್ಜಾಗಿದೆ:
ಕೊರೊನಾ ಸೋಂಕಿನ ವಿರುದ್ಧ ಭಾರತದ ಹೋರಾಟದ ಹಾದಿ ಇನ್ನೂ ದೂರವಿದೆ. ಕೊರೊನಾ ಲಸಿಕೆ ಅಭಿಯಾನದ ಹೊರತಾಗಿಯೂ ಹಲವು ರಾಜ್ಯಗಳು ಹಾಗೂ ಜಿಲ್ಲೆಗಳಲ್ಲಿ ಸೋಂಕಿನ ಪಾಸಿಟಿವಿಟಿ ದರ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಮೇಲೆ ನಿಗಾ ಇಡಬೇಕು. ಪ್ರತಿಯೊಂದರಲ್ಲಿಯೂ ಎಚ್ಚರಿಕೆಯ ಹೆಜ್ಜೆ ಇಡಬೇಕು. ಜನಸಂದಣಿ ಇರುವ ಕಡೆಗಳನ್ನು ತಪ್ಪಿಸಿ. ಅನವಶ್ಯಕ ಪ್ರಯಾಣವನ್ನು ಕೈಗೊಳ್ಳಬೇಡಿ. ಆದಷ್ಟು ಆನ್ಲೈನ್ನಲ್ಲಿಯೇ ಶಾಪಿಂಗ್ ಮಾಡಿ. ಮನೆಯಲ್ಲಿಯೇ ಹಬ್ಬದ ಆಚರಣೆಯನ್ನು ಮಾಡಿ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಹೇಳಿದ್ದಾರೆ.
ಮುಂದಿನ ಕೆಲವು ತಿಂಗಳು ಭಾರತಕ್ಕೆ ನಿರ್ಣಾಯಕವಾಗಿವೆ ಹಾಗೂ ಕೊರೊನಾ ಸೋಂಕಿನ ಹಲವು ರೂಪಾಂತರಗಳು ಸೃಷ್ಟಿಯಾಗುತ್ತಿರುವುದರಿಂದ, ಜೊತೆಜೊತೆಗೆ ಹಬ್ಬಗಳು ಬರುತ್ತಿರುವುದು ಸೋಂಕಿನ ಆತಂಕವನ್ನು ಹೆಚ್ಚಿಸಿವೆ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications