ದೇಶದೊಳಗಿನ ಭಯೋತ್ಪಾದಕರಿಗೆ ಲಗಾಮು ಹಾಕುವವರ್ಯಾರು..?!
ಏನಾಗುತ್ತಿದೆ ಎಂಬುದನ್ನು ಅರಿಯುವ ಮೊದಲೇ ಕಾಲನ ಕೈಸೇರಿದ 26 ಸಿಆರ್ ಪಿಎಫ್ ಯೋಧರ ನಿಷ್ಕಾರಣ ಹತ್ಯೆಯ ಶಾಪ ನಕ್ಸಲೀಯರನ್ನು ತಟ್ಟದೇ ಇರುತ್ತದೆಯೇ?
ಛತ್ತೀಸ್ ಗಢ, ಏಪ್ರಿಲ್ 26: ದೇಶದ ರಕ್ಷಣೆಗಾಗಿ ಜೀವದ ಹಂಗು ತೊರೆಯುವುದಕ್ಕೂ ಸಿದ್ಧರಾಗುವವರು ಒಂದು ಕಡೆ. ಯಾವುದೋ ಹಳಸಲು ಸಿದ್ಧಾಂತಕ್ಕೆ ಜೋತುಬಿದ್ದು ದೇಶಕಾಯುವವರನ್ನೇ ಕೊಲ್ಲುವವರು ಇನ್ನೊಂದು ಕಡೆ. ಭಾರತಕ್ಕೆ ನಿಜವಾದ ಸವಾಲು ಗಡಿಯಾಚೆ ಇರುವ ಭಯೋತ್ಪಾದಕರಷ್ಟೇ ಅಲ್ಲ, ಅದಕ್ಕಿಂತ ಹೆಚ್ಚಾಗಿ ದೇಶದ ಅನ್ನ-ನೀರು ತಿಂದು ದೇಶಕ್ಕೇ ಎರಡು ಬಗೆಯುವ ದೇಶದೊಳಗಿನ ಭಯೋತ್ಪಾದಕರು!
ಸೋಮವಾರ, ಏಪ್ರಿಲ್ 24 ರಂದು ಮಧ್ಯಾಹ್ನ ಏನಾಗುತ್ತಿದೆ ಎಂಬುದನ್ನು ಅರಿಯುವ ಮೊದಲೇ ಕಾಲನ ಕೈಸೇರಿದ 26 ಸಿಆರ್ ಪಿಎಫ್ ಯೋಧರ ನಿಷ್ಕಾರಣ ಹತ್ಯೆಯ ಶಾಪ ನಕ್ಸಲೀಯರನ್ನು ತಟ್ಟದೇ ಇರುತ್ತದೆಯೇ? ಆ ಎಲ್ಲ ಯೋಧರ ಪತ್ನಿ, ತಂದೆ-ತಾಯಿ, ಮಕ್ಕಳ ಕಣ್ಣೀರಿನ ಬಿಸಿ ನಕ್ಸಲೀಯರನ್ನು ಸುಡದೇ ಬಿಟ್ಟೀತೇ..? [ಬಿಜೆಪಿಯ ದೆಹಲಿ ವಿಜಯ ಹುತಾತ್ಮ ಸಿಆರ್ಪಿಎಫ್ ಜವಾನರಿಗೆ ಅರ್ಪಣೆ]
ಛತ್ತೀಸ್ ಗಢ ಸುಕ್ಮಾ ಪ್ರಾಂತ್ಯದಲ್ಲಿ ಸೋಮವಾರ ಮಧ್ಯಾಹ್ನ ನಕ್ಸಲರು ನಡೆಸಿದ ಭೀಕರ ಗುಂಡಿನ ದಾಳಿಗೆ ಬಲಿಯಾದವರು 26 ಯೋಧರು! ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಗೃಹಸಚಿವ ರಾಜನಾಥ್ ಸಿಂಗ್ ಆಕ್ರೋಶವನ್ನೇನೋ ವ್ಯಕ್ತಪಡಿಸಿದ್ದಾರೆ, ತನ್ನ ಪತಿಯನ್ನು ಕಿತ್ತುಕೊಂಡವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದು ಹುತಾತ್ಮ ಯೋಧ ಬನ್ಮಲಿ ಅವರ ಪತ್ನಿ ಜಿತೇಶ್ವರಿ ಎಂಬುವವರು ನಕ್ಸಲೀಯರಿಗೆ ಹಿಡಿಶಾಪ ಹಾಕಿದ್ದಾರೆ. ಆದರೆ ಈ ಎಲ್ಲರ ಆಕ್ರೋಶ ನಕ್ಸಲ್ ವಾದ ಎಂಬ ಅಸಂಬದ್ಧ ಸಿದ್ಧಾಂತಕ್ಕೆ ತಿಲಾಂಜಲಿ ಹಾಡುತ್ತಾ? ಹಾಡಲಿ ಎಂಬುದು ನಮ್ಮೆಲ್ಲರ ಆಶಯ.['ರಜಾ ಹಾಕ್ತೀನಿ ಅಂದಿದ್ದ ನನ್ನ ಮಗ ಇನ್ಯಾವತ್ತೂ ಮನೆಗೆ ಬರಲ್ಲ']
ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳು ಬದುಕೇ ಮುಗಿಯಿತೆಂಬಂತೆ ಆಕಾಶ ನೋಡುತ್ತ ಕೂತಿವೆ. ಪುಟ್ಟ ಪುಟ್ಟ ಮಕ್ಕಳು, ತಾಯಿ-ಅಜ್ಜ-ಅಜ್ಜಿಯರ ದುಃಖದ ಮುಖ ನೋಡಿ ಏನೊ ಅಚಾತುರ್ಯವಾಗಿದೆ ಎಂಬುದನ್ನು ಅರಿತು ಅವರ ಮಡಿಲಲ್ಲಿ ಮುದುಡಿ ಕುಳಿತಿದ್ದಾರೆ! ಬದುಕಿನ ಕೊನೆತನಕ ಜೊತೆಯಾಗಿರುತ್ತೇನೆಂದು ತನ್ನೊಂದಿಗೆ ಸಪ್ತಪದಿ ತುಳಿದ ಪತಿ ಬದುಕಿನ ಅರ್ಧದಾರಿಯಲ್ಲೇ ಪಯಣ ಮುಗಿಸಿದ್ದನ್ನು ನೆನೆದು ಪತ್ನಿಯರು ಕಂಗಾಲಾಗಿದ್ದಾರೆ. ಆ ಕುಟುಂಬದ ಕೆಲವು ಚಿತ್ರಗಳು ಮನ ಕಲಕುವುದು ಸುಳ್ಳಲ್ಲ...
ಈ ಕುಟುಂಬಕ್ಕೆ ಸಾಂತ್ವನ ಹೇಳುವವರ್ಯಾರು?
ನಕ್ಸಲ್ ದಾಳಿಯಲ್ಲಿ ಹತರಾದ ಜಾರ್ಖಾಂಡಿನ ಗರ್ಹ್ವಾ ಜಿಲ್ಲೆಯ ಆಶೀಶ್ ಕುಮಾರ್ ಅವರ ಕುಟುಂಬದ ಸದಸ್ಯರು ಆಶೀಶ್ ಅವರ ಅಕಾಲಿನ ನಿರ್ಗಮನದಿಂದಾಗಿ ರೋದಿಸುತ್ತಿರುವ ದೃಶ್ಯವನ್ನು ಕಂಡಾಗಲಾದರೂ ನಕ್ಸಲರ ಮನಸ್ಸು ಬದಲಾಗಬಾರದೆ..?[ಸುಕ್ಮಾ ನಕ್ಸಲ್ ದಾಳಿಯ ಹಿಂದಿನ ನಿಜವಾದ ಕಾರಣ!]
ಈ ಮಕ್ಕಳ ಭವಿಷ್ಯದ ಕತೆಯೇನು?
ಅಪ್ಪ ಫೋನ್ ಮಾಡುತ್ತಿದ್ದಾಗಲೆಲ್ಲ, 'ಮನೆಗೆ ಯಾವಾಗ ಬರ್ತೀಯಾ?' ಎಂದು ಮರೆಯದೇ ಕೇಳುತ್ತಿದ್ದ ಈ ಮಕ್ಕಳಿಗೆ ಇನ್ನು ಅಪ್ಪ ಕರೆಯನ್ನೇ ಮಾಡಲಾರ! ಎಂದೆಂದೂ ಈ ಮಕ್ಕಳನ್ನು ನೋಡಲಾರ! ಹುತಾತ್ಮ ಯೋಧ ಆಶೀಶ್ ಕುಮಾರ್ ಮಕ್ಕಳ ಭವಿಷ್ಯದ ಕತೆಯೇನು?![ನಕ್ಸಲೀಯರ ಇತ್ತೀಚಿನ ಹತ್ಯಾಕಾಂಡ : ಟೈಮ್ ಲೈನ್]
ಕತ್ತಲಲ್ಲಿ ಕುಟುಂಬದ ಭವಿಷ್ಯ
ನಕ್ಸಲ್ ದಾಳಿಯಲ್ಲಿ ಹತರಾದ ಬಿಹಾರದ ದನಾಪುರದ ಸೌರಭ್ ಕುಮಾರ್ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಸೌರಭ್ ಗೈರಿನಿಂದಾಗಿ ಕುಟುಂಬದ ಭವಿಷ್ಯವೇ ಕತ್ತಲಾಗಿದೆ.
ಈ ಕಂದನಿಗೆ ಅಪ್ಪನ ಸಾವಿನ ಅರಿವಿಲ್ಲ!
ಈ ಮುದ್ದು ಮಗುವಿಗೆ ತನ್ನಪ್ಪ ಇನ್ನೆಂದಿಗೂ ತನ್ನನ್ನು ಮುದ್ದಾಡಲಾರ ಅನ್ನೋ ಅರಿವೂ ಇಲ್ಲ. ತನ್ನ ಮನೆಯೆದೆರು ಸೇರಿರುವ ಜನಜಂಗುಳಿಯನ್ನು ಕಂಡು ಕುತೂಹಲ ವ್ಯಕ್ತಪಡಿಸುತ್ತಿರುವ ಈ ಪುಟ್ಟ ಕಂದಮ್ಮ ಹತರಾದ ಸೌರಭ್ ಕುಮಾರ್ ಮಗು!
ಅಂತ್ಯಕ್ರಿಯೆಗೂ ಮುನ್ನ ಪ್ರಾರ್ಥನೆ
ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಇಬ್ಬರು ಯೋಧರ ಕುಟುಂಬ, ಯೋಧರ ಅಂತ್ಯಕ್ರಿಯೆಯ ಸಮಯದಲ್ಲಿ ಅಲ್ಲಾನನ್ನು ಬೇಡಿದ್ದು ಹೀಗೆ.
ಆತ್ಮಕ್ಕೆ ಶಾಂತಿ ಸಿಗಲಿ
ದಾಳಿಯಲ್ಲಿ ಹತರಾದ ಸಿಆರ್ ಪಿ ಎಫ್ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಮೃತಸರದಲ್ಲಿ ಮೊಂಬತ್ತಿ ಬೆಳಗಿ ಪ್ರಾರ್ಥಿಸಲಾಯಿತು.
ಇನ್ನೆಂದೂ ಇಂಥ ಘಟನೆ ನಡೆಯದಿರಲಿ...
ಇನ್ನೆಂದೂ ಇಂಥ ದಾಳಿ ನಡೆಯದಂತೆ ನೋಡಿಕೋ ದೇವರೇ... ಎಂದು ಮುರಾಬಾದಿನ ಪುಟ್ಟ ಪುಟ್ಟ ಮಕ್ಕಳು ಸಿಆರ್ ಪಿಎಫ್ ಯೋಧರ ಆತ್ಮಕ್ಕೆ ಶಾಂತಿಕೋರಿದ್ದು ಹೀಗೆ.