ಭಾರತ-ಕೆನಡಾ ನಡುವೆ ಜಗಳ ತಂದಿಕ್ಕಿದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಯಾರು? ಆತನ ಹಿನ್ನೆಲೆ ಏನು?
ನವದೆಹಲಿ, ಸೆಪ್ಟೆಂಬರ್ 19: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆ ಉಲ್ಬಣಗೊಂಡಿದೆ. ಜಸ್ಟಿನ್ ಟ್ರುಡೊ ನೇತೃತ್ವದ ಕೆನಡಾ ಸರ್ಕಾರವು ಉನ್ನತ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತದಲ್ಲಿರುವ ಕೆನಡಾ ರಾಜತಾಂತ್ರಿಕ ಅಧಿಕಾರಿಗೆ ಭಾರತ ಗೇಟ್ಪಾಸ್ ನೀಡಿದೆ.
ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಕೈವಾಡವಿರಬಹುದು ಎಂಬ ಶಂಕೆಯಿದೆ. ಈ ಕುರಿತು ಏಜೆನ್ಸಿಗಳು ತನಿಖೆ ನಡೆಸುತ್ತಿವೆ ಎಂದು ಟ್ರೂಡೊ ಕೆನಡಾದ ಸಂಸತ್ತಿಗೆ ತಿಳಿಸಿದ್ದರು.

ಹರ್ದೀಪ್ ಸಿಂಗ್ ನಿಜ್ಜರ್ ಯಾರು? ಹಿನ್ನೆಲೆ ಏನು?
ಖಲಿಸ್ತಾನಿ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥನಾಗಿ ಹರ್ದೀಪ್ ಸಿಂಗ್ ನಿಜ್ಜರ್ ಕಾರ್ಯನಿರ್ವಹಿಸುತ್ತಿದ್ದ. ಕೆನಡಾದ ಸರ್ರೆಯ ಗುರುದ್ವಾರದ ಹೊರಗೆ ಜೂನ್ 18 ರಂದು ಅಪರಿಚಿತ ದುಷ್ಕರ್ಮಿಗಳು ಆತನ ಹತ್ಯೆ ಮಾಡಿದ್ದಾರೆ. ಆತ ತನ್ನ ಕಾರಿನಲ್ಲಿ ಕುಳಿತಿದ್ದಾಗ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ.
ಗುರುನಾನಕ್ ಸಿಖ್ ಗುರುದ್ವಾರದ ಮುಖ್ಯಸ್ಥ ನಿಜ್ಜರ್ ಭಯೋತ್ಪಾದನೆಯ ಆರೋಪದ ಮೇಲೆ ಭಾರತೀಯ ತನಿಖಾ ಸಂಸ್ಥೆ - ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದನು.
ವರದಿಗಳ ಪ್ರಕಾರ, ವ್ಯಾಂಕೋವರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಖಲಿಸ್ತಾನಿ ಧ್ವಜವನ್ನು ಹಾರಿಸುವ ಕೃತ್ಯದಲ್ಲಿ ನಿಜ್ಜರ್ ಭಾಗಿಯಾಗಿದ್ದನು.

2013 ರಲ್ಲಿ ಪಾಕಿಸ್ತಾನದಲ್ಲಿ ಜಗತಾರ್ ಸಿಂಗ್ ತಾರಾ ಮತ್ತು ಐಎಸ್ಐ ಅನ್ನು ನಿಜ್ಜರ್ ಭೇಟಿಯಾಗಿದ್ದನು. ಬ್ರಿಟಿಷ್ ಕೊಲಂಬಿಯಾದಲ್ಲಿ ಉಗ್ರಗಾಮಿಗಳಿಗೆ ತರಬೇತಿ ಶಿಬಿರಗಳನ್ನು ಆಯೋಜಿಸುವಲ್ಲಿ ಈತ ನಿರ್ಣಾಯಕ ಪಾತ್ರ ವಹಿಸಿದ್ದನು.
ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಅನ್ನು ಪುನರುಜ್ಜೀವನಗೊಳಿಸಲು ನಿಜ್ಜರ್ ಹಲವಾರು ಪ್ರಯತ್ನಗಳನ್ನು ಮಾಡಿದ್ದನು.
ಅಕ್ಟೋಬರ್ 1977 ರಲ್ಲಿ ಪಂಜಾಬ್ನ ಜಲಂಧರ್ನಲ್ಲಿ ಜನಿಸಿದ ನಿಜ್ಜರ್ ಪ್ಲಂಬರ್ ಆಗಿ ಕೆಲಸ ಮಾಡಲು ಕೆನಡಾಗೆ ತೆರಳಿದ್ದನು. ಆ ಬಳಿಕ ಕೆನಡಾದ ಪೌರತ್ವವನ್ನು ಪಡೆದಿದ್ದನು.

2010 ರಲ್ಲಿ ಪಟಿಯಾಲದಲ್ಲಿ ನಡೆದ ಬಾಂಬ್ ಸ್ಫೋಟದ ಜೊತೆ ಆತನಿಗೆ ಸಂಬಂಧವಿದೆ ಎಂದು ಹೇಳಲಾಗಿದೆ. ಭಾರತೀಯ ಏಜೆನ್ಸಿಗಳು ನಿಜ್ಜರ್ ವಿರುದ್ಧ ಕ್ರಮವಾಗಿ 2015 ಮತ್ತು 2016ರಲ್ಲಿ ಲುಕ್ಔಟ್ ಸುತ್ತೋಲೆ ಮತ್ತು ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ದವು.
ಟ್ರೂಡೊ ಆರೋಪಕ್ಕೆ ಭಾರತ ಪ್ರತಿಕ್ರಿಯೆ
ಟ್ರೂಡೊ ಹೇಳಿಕೆಯನ್ನು ಅಸಂಬದ್ಧವೆಂದು ಎಂದು ಭಾರತ ಕರೆದಿದೆ. ಕೆನಡಾ ಸರ್ಕಾರವು ಇಂತಹ ಆಧಾರರಹಿತ ಆರೋಪಗಳ ಮೂಲಕ ಖಲಿಸ್ತಾನಿ ಭಯೋತ್ಪಾದಕರ ಸಮಸ್ಯೆಯನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವ ಖಲಿಸ್ತಾನಿ ಭಯೋತ್ಪಾದಕರಿಗೆ ಕೆನಡಾ ನೆಲೆಯಾಗಿದೆ ಎಂದು ಭಾರತ ಕಿಡಿಕಾರಿದೆ.
'ಕೊಲೆಗಳು, ಮಾನವ ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧಗಳಂತಹ ಹಲವಾರು ಕಾನೂನುಬಾಹಿರ ಚಟುವಟಿಕೆಗಳಿಗೆ ಕೆನಡಾದಲ್ಲಿ ಖಲಿಸ್ತಾನಿಗಳಿಗೆ ಜಾಗವನ್ನು ನೀಡಲಾಗಿದೆ' ಎಂದು ಭಾರತ ಆರೋಪಿಸಿದೆ.












Click it and Unblock the Notifications