ಮತದಾನಕ್ಕೆ 48 ಗಂಟೆಗಳಷ್ಟೆ ಬಾಕಿ; ಗೋವಾದಲ್ಲಿ ಗರಿಗೆದರಿದ ಲೆಕ್ಕಾಚಾರ
ಅಧಿಕಾರಕ್ಕೇರಲು ಹವಣಿಸುತ್ತಿರುವ ಕಾಂಗ್ರೆಸ್, ಅಧಿಕಾರ ಉಳಿಸಿಕೊಳ್ಳಲು ಒದ್ದಾಡುತ್ತಿರುವ ಬಿಜೆಪಿ, ರಾಜ್ಯಕ್ಕೆ ಭರ್ಜರಿ ಎಂಟ್ರಿ ಕೊಡಲು ಕಾತುರವಾಗಿರುವ ಎಎಪಿ ಗೋವಾ ಚುನಾವಣಾ ಕಣವನ್ನು ಈ ಬಾರಿ ರಂಗೇರಿಸಿವೆ.
ಪಣಜಿ, ಫೆಬ್ರವರಿ 2: ಮತದಾನಕ್ಕೆ ಇನ್ನೇನು 48 ಗಂಟೆಗಳಷ್ಟೆ ಬಾಕಿ ಇದ್ದು, ಪುಟ್ಟ ರಾಜ್ಯ ಗೋವಾದಲ್ಲಿ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ಅಧಿಕಾರಕ್ಕೇರಲು ಹವಣಿಸುತ್ತಿರುವ ಕಾಂಗ್ರೆಸ್, ಅಧಿಕಾರ ಉಳಿಸಿಕೊಳ್ಳಲು ಒದ್ದಾಡುತ್ತಿರುವ ಬಿಜೆಪಿ, ರಾಜ್ಯಕ್ಕೆ ಭರ್ಜರಿ ಎಂಟ್ರಿ ಕೊಡಲು ಕಾತುರವಾಗಿರುವ ಎಎಪಿ ಗೋವಾ ಚುನಾವಣಾ ಕಣವನ್ನು ಈ ಬಾರಿ ರಂಗೇರಿಸಿವೆ.
2012ರ ನಂತರ ರಾಜ್ಯದಲ್ಲಿ ವಿದ್ಯಮಾನಗಳು ಬದಲಾಗಿದ್ದು ಜನ ಹೊಸ ಸರಕಾರವನ್ನು ಅಧಿಕಾರಕ್ಕೇರಿಸಲು ಆಸಕ್ತರಾಗಿದ್ದಾರೆ. ರಾಜ್ಯ ಚುನಾವಣಾ ಕಣಕ್ಕೆ ಎಎಪಿ ಎಂಟ್ರಿ ಕೊಟ್ಟಿರುವುದು ರಾಜಕೀಯ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿದ್ದ ನೇರ ಹಣಾಹಣಿ ಈ ಬಾರಿ ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಇನ್ನೊಂದು ಸ್ಥಳೀಯ ಪಕ್ಷ 'ಗೋವಾ ಫಾರ್ವರ್ಡ್' ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಬಿಜೆಪಿಯ ಮತಗಳಿಕೆ ಕನ್ನ ಹಾಕಲು ಯೋಜಿಸಿದೆ. ಇದರ ಮಧ್ಯೆ ಎಎಪಿ ರಾಜ್ಯದಲ್ಲಿ ತೀವ್ರ ಸ್ಪರ್ಧೆ ನೀಡುತ್ತಿದೆ.[ಮನೋಹರ್ ಪರಿಕ್ಕರ್ ವಿರುದ್ದ ಚುನಾವಣಾ ಆಯೋಗಕ್ಕೆ ದೂರು]

ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ 21, ಕಾಂಗ್ರೆಸ್ 9, ಎಮ್.ಜಿ.ಪಿ 3, ಗೋವಾ ವಿಕಾಸ್ ಪಾರ್ಟಿ 2 ಹಾಗೂ ಇತರರು 5 ಸ್ಥಾನಗಳಲ್ಲಿ ಗೆದ್ದಿದ್ದರು. ಈ ಬಾರಿ ರಾಜ್ಯದಲ್ಲಿ ಎಎಪಿ ಅಲೆ ಜೋರಾಗಿದ್ದು ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.
ಜಾತಿವಾರು ಲೆಕ್ಕಾಚಾರ
ರಾಜ್ಯದಲ್ಲಿ 5.63 ಲಕ್ಷ ಪುರುಷ ಮತದಾರರು ಮತ್ತು 5.45 ಲಕ್ಷ ಮಹಿಳಾ ಮತದಾರರಿದ್ದಾರೆ. ಇನ್ನು ಜಾತಿವಾರು ಮತದಾರರನ್ನು ನೋಡುವುದಾದರೆ ಹಿಂದೂಗಳು ಶೇಕಡಾ 66.09, ಕ್ರಿಶ್ಚಿಯನ್ನರು ಶೇಕಡಾ 25.11ಮತ್ತು ಮುಸ್ಲಿಮರು ಶೇಕಡಾ 8.34 ರಷ್ಟಿದ್ದಾರೆ.[ಸಮೀಕ್ಷೆ: ಗೋವಾದಲ್ಲಿ ಬಿಜೆಪಿಯದ್ದೇ ಆಧಿಪತ್ಯ, ಲೆಕ್ಕಕಷ್ಟೆ ಎಎಪಿ]
ಗೋವಾದಲ್ಲಿ ಶೇಕಡಾ 87 ಜನ ವಿದ್ಯಾವಂತರಾಗಿದ್ದಾರೆ. ಆದರೆ ಪುರುಷರು ಮತ್ತು ಮಹಿಳೆಯರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಪುರುಷರು ಶೇಕಡಾ 92.8 ವಿದ್ಯಾವಂತರಿದ್ದರೆ, ಮಹಿಳೆಯರಲ್ಲಿ ಈ ಪ್ರಮಾಣ 81.8 ಇದೆ. ಹೀಗಾಗಿ ರಾಜ್ಯದಲ್ಲಿ ಮಹಿಳಾ ಶಿಕ್ಷಣದ ಅಗತ್ಯತೆಯ ಕೂಗು ಹಿಂದಿನಿಂದಲೂ ಇದೆ.
ಬೇಡಿಕೆಗಳು
ಪ್ರವಾಸೋದ್ಯಮಕ್ಕೆ ಹೆಸರಾಗಿರುವ ರಾಜ್ಯ ಗೋವಾ. ಹೀಗಾಗಿ ಎಲ್ಲಾ ಪಕ್ಷಗಳ ಪ್ರಣಾಳಿಕೆಯಲ್ಲೂ ಉದ್ಯೋಗ ಸೃಷ್ಠಿ ಮತ್ತು ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ. ಆದರೆ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಂಕಿ ಅಂಶಗಳನ್ನು ತೆಗೆದು ನೋಡಿದರೆ ರಾಜ್ಯಕ್ಕೆ ಬೇಕಾಗಿದ್ದು ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ ಎಂಬುದು ಅರ್ಥವಾಗುತ್ತದೆ. ರಾಜ್ಯದಲ್ಲಿ ಶೇಕಡಾ 88.6 ಜನರಷ್ಟೆ ನೀರಿನ ಸಂಪರ್ಕ ಪಡೆದಿದ್ದಾರೆ. ಉಳಿದವರಿಗೆ ಸರಿಯಾಗಿ ನೀರಿನ ಸಂಪರ್ಕ ಇವತ್ತಿನವರೆಗೂ ಸಿಕ್ಕಿಲ್ಲ.
ರಾಜ್ಯದ ಜನರಿಗೆ ಕುಡಿಯುವ ನೀರು ನೀಡುವುದು ಅತ್ಯಗತ್ಯವಾಗಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯದ ಬೇಡಿಕೆ ಹೆಚ್ಚಾಗಿದೆ.
ಪಣಜಿ ನದಿಯ ದಂಡೆಯಿಂದ ಜೂಜು ಕಟ್ಟೆಗಳಾದ ಕ್ಯಾಸಿನೋಗಳನ್ನು ಹೊರಗಟ್ಟಬೇಕು ಎಂಬ ಬೇಡಿಕೆಯೂ ಇಲ್ಲಿಯ ಜನರಲ್ಲಿದೆ. ಹೆಚ್ಚಿನ ಪಕ್ಷಗಳು ಕ್ಯಾಸಿನೋಗಳನ್ನು ರದ್ದು ಮಾಡುವುದಾಗಿ ಹೇಳಿವೆ. ಆದರೆ ಬಿಜೆಪಿ ಮಾತ್ರ ಇದೆಲ್ಲಾ ಸಾಧ್ಯವಿಲ್ಲ ಎಂದಿದೆ.
ಈ ಎಲ್ಲಾ ಅಂಶಗಳನ್ನಿಟ್ಟುಕೊಂಡು ಜನ ಮತದಾನ ಮಾಡಲಿದ್ದಾರೆ. ಯಾರಿಗೆ ಭಾಗ್ಯದ ಬಾಗಿಲು ತೆರೆದಿದೆಯೋ ಗೊತ್ತಿಲ್ಲ.(ಒನ್ ಇಂಡಿಯಾ ಸುದ್ದಿ)












Click it and Unblock the Notifications