The Kerala Story: ಭಾರಿ ಕೋಲಾಹಲಕ್ಕೆ ಕಾರಣವಾಗಿರುವ 'ದಿ ಕೇರಳ ಸ್ಟೋರಿ' ಚಿತ್ರ ವಿವಾದವೇನು ಗೊತ್ತೆ?
ನವದೆಹಲಿ, ಮೇ. 03: ಕೇರಳ ರಾಜ್ಯದಲ್ಲಿ ಮಹಿಳೆಯರ ಬಲವಂತದ ಮತಾಂತರ ಮತ್ತು ಮೂಲಭೂತೀಕರಣ ಮೇಲೆ ಬೆಳಕು ಚೆಲ್ಲುತ್ತದೆ ಎನ್ನಲಾಗಿರುವ 'ದಿ ಕೇರಳ ಸ್ಟೋರಿ' ದೇಶದಲ್ಲಿ ಭಾರಿ ಗದ್ದಲ ಎಬ್ಬಿಸಿದೆ. ಹಲವು ಪ್ರತಿಭಟನೆಗಳ ನಡುವೆಯೇ ಚಿತ್ರ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಸೆನ್ಸಾರ್ ಬೋರ್ಡ್ನಿಂದ ಅನುಮತಿ ಪಡೆದಿರುವ ಕಾರಣ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯ ನಿರಾಕರಿಸಿದೆ.
*10 ಅಂಶಗಳ ಮೂಲಕ ವಿವಾದದ ಕುರಿತು ತಿಳಿಯೋಣ*
1. ಸುದೀಪ್ತೋ ಸೇನ್ ನಿರ್ದೇಶನದ ಮತ್ತು ವಿಪುಲ್ ಅಮೃತಲಾಲ್ ಶಾ ಹಣ ಹೂಡಿರುವ 'ದಿ ಕೇರಳ ಸ್ಟೋರಿ' ಚಿತ್ರದಲ್ಲಿ ನಟಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ನಟಿಸಿದ್ದಾರೆ. ಈ ಚಿತ್ರ ಮೇ 5 ರಂದು ಬಿಡುಗಡೆಯಾಗಲಿದೆ.

2. ಚಿತ್ರವು ಬಲವಂತದ ಧಾರ್ಮಿಕ ಮತಾಂತರದ ಸುತ್ತ ಕೇಂದ್ರೀಕೃತವಾಗಿದೆ. ಸಿನಿಮಾ ವರದಿಯ ಪ್ರಕಾರ ಕೇರಳದಲ್ಲಿ ಸರಿಸುಮಾರು 32,000 ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ. ಭಯೋತ್ಪಾದಕ ಗುಂಪು ಅನೇಕರನ್ನು ಐಸಿಸ್ ಆಳ್ವಿಕೆಯ ಸಿರಿಯಾಕ್ಕೆ ಕರೆದುಕೊಂಡು ಹೋಗಿದೆ ಎಂದು ಸಿನಿಮಾ ಟ್ರೈಲರ್ ಮತ್ತು ಟೀಸರ್ನಲ್ಲಿ ಹೇಳಲಾಗಿದೆ.
3. ಚಿತ್ರದ ಟ್ರೇಲರ್ ಬಿಡುಗಡೆಯಾದ ನಂತರ, "ಕೆಟ್ಟ ದ್ವೇಷಪೂರಿತ ಭಾಷಣ" ಮತ್ತು "ಆಡಿಯೋ- ವಿಡಿಯೋ ಪ್ರಾಪಗಾಂಡ" ಆಧಾರದ ಮೇಲೆ ಅದರ ಬಿಡುಗಡೆಗೆ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಯಿತು.
4. ಮಂಗಳವಾರ ಸುಪ್ರೀಂ ಕೋರ್ಟ್ ಮನವಿಯನ್ನು ಪರಿಗಣಿಸಲು ನಿರಾಕರಿಸಿದೆ. ಸುಪ್ರೀಂ ಕೋರ್ಟ್ ಪೀಠವು "ದ್ವೇಷದ ಭಾಷಣಗಳಲ್ಲಿ ವೈವಿಧ್ಯಗಳಿವೆ. ಈ ಚಿತ್ರವು ಸೆನ್ಸಾರ್ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಜೊತೆಗೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದಿದೆ" ಎಂದು ಹೇಳಿದೆ.

5. "ಇದು ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ನಿಂತು ಭಾಷಣವನ್ನು ಪ್ರಾರಂಭಿಸುವಂತಲ್ಲ. ನೀವು ಚಲನಚಿತ್ರದ ಬಿಡುಗಡೆಗೆ ತಡೆ ಹಾಕಬೇಕಿದ್ದರೇ, ಅದಕ್ಕೆ ಸಾಕ್ಷಿ ಮತ್ತು ಸೂಕ್ತ ವೇದಿಕೆಯ ಮೂಲಕ ಚಾಲೆಂಜ್ ಮಾಡಬೇಕು" ಎಂದು ಸುಪ್ರೀಂ ಕೋರ್ಟ್ ಪೀಠ ತಿಳಿಸಿದೆ.
6. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಿತ್ರದ ನಿರ್ಮಾಪಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಿನಿಮಾ "ಸಂಘ ಪರಿವಾರದ ಸುಳ್ಳೂ ಕಾರ್ಖಾನೆಯ ಉತ್ಪನ್ನ" ಎಂದು ಆಕ್ರೋಶ ಹೊರಹಾಕಿದ್ದಾರೆ.
7. ಸಿನಿಮಾ ಟ್ರೇಲರ್ಗೆ ಬಂದ ಟೀಕೆಗಳ ನಂತರ, ಯೂಟ್ಯೂಬ್ನಲ್ಲಿ ಚಿತ್ರದ ಟೀಸರ್ ಆರಂಭದಲ್ಲಿ "ಕೇರಳದಲ್ಲಿ 32,000 ಹೆಣ್ಣುಮಕ್ಕಳ ಹೃದಯವಿದ್ರಾವಕ ಮತ್ತು ಕರುಳು ಹಿಂಡುವ ಕಥೆಗಳು..." ಎಂದು ಇದದ್ದು, ಈಗ "ಕೇರಳದ ಮೂವರು ಯುವತಿಯರ ನೈಜ ಕಥೆಗಳು" ಎಂದು ಬದಲಿಸಲಾಗಿದೆ.
8. ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಸಿನಿಮಾ ಬಗ್ಗೆ ಕಿಡಿ ಕಾರಿದ್ದು, "ಚಿತ್ರದ ನಿರ್ಮಾಪಕರು ರಾಜ್ಯದ ವಾಸ್ತವತೆಯನ್ನು ಉತ್ಪ್ರೇಕ್ಷೆ ಮತ್ತು ವಿರೂಪ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
9. ಕೇರಳದಲ್ಲಿ 32,000 ಮಹಿಳೆಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ ಎಂದು ಸಾಬೀತುಪಡಿಸುವ ಯಾರಿಗಾದರೂ 1 ಕೋಟಿ ರೂಪಾಯಿ ನೀಡುವುದಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ಸೋಮವಾರ ಟ್ವೀಟ್ ಮಾಡಿದ್ದಾರೆ.
10. ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಮತ್ತು ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ಅವರು 'ದಿ ಕೇರಳ ಸ್ಟೋರಿ' ನೈಜ ಘಟನೆಗಳನ್ನು ಆಧರಿಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications