ಪ್ರಯಾಣಿಕರ ಸುರಕ್ಷತೆಗೆ ರೈಲು ಇಲಾಖೆಯ ಹೊಸ ತಂತ್ರ
ಇತ್ತೀಚಿನ ವರ್ಷಗಳಲ್ಲಿ ಹಲವಾರು ರೈಲ್ವೆ ಸಚಿವರುಗಳನ್ನು ಭಾರತ ಕಂಡಿದೆ. ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ಉದ್ದದ ರೈಲು ಸಂಪರ್ಕ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಈ ಮಹತ್ವದ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಂತೆ ಕೇಂದ್ರ ಸಚಿವರಲ್ಲಿ ಮೂಡುವ ಮೊದಲ ಪ್ರಶ್ನೆಯೇನೆಂದರೆ, ಪ್ರಯಾಣಿಕರನ್ನು ಹೇಗೆ ಸುರಕ್ಷಿತವಾಗಿಡುವುದು?
ಕಳೆದ ಕೆಲ ವರ್ಷಗಳಿಂದ ನೋಡುತ್ತಿದ್ದರೆ, ಸಂಭವಿಸುತ್ತಿರುವ ರೈಲು ಅಪಘಾತಗಳಿಂದಲೇ ಹಲವಾರು ರೈಲು ಸಚಿವರು ತಮ್ಮ ಖಾತೆ ಕಳೆದುಕೊಂಡಿದ್ದಾರೆ ಅಥವಾ ಅವರಾಗಿಯೇ ರಾಜೀನಾಮೆ ನೀಡಿ ಹಿಂದೆ ಸರಿದಿದ್ದಾರೆ. ಹಿಂದಿನ ರೈಲು ಸಚಿವರಾದ ಸುರೇಶ್ ಪ್ರಭು ಕೂಡ ಇದಕ್ಕೆ ಹೊರತಲ್ಲ. ಇದೀಗ ಪಿಯೂಶ್ ಗೋಯೆಲ್ ಅವರ ಹೆಗಲಿಗೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ.
ರೈಲ್ವೆ ಸುರಕ್ಷತೆಗೆ ಸಚಿವ ಗೋಯೆಲ್ ಸುದೀರ್ಘ ಸಭೆ, ಐದು ಸೂಚನೆಗಳು
ಪ್ರಯಾಣಿಕರನ್ನು ಸುರಕ್ಷಿತವಾಗಿ ಗಮ್ಯ ತಲುಪಿಸುವುದು ಕೇಂದ್ರ ಸರಕಾರದ ಪರಮಪ್ರಾಶಸ್ತ್ಯ ಎಂದು ಪಿಯೂಶ್ ಗೋಯಲ್ ಅವರು ಕೋರಾದಲ್ಲಿ ಬರೆದುಕೊಂಡಿದ್ದಾರೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಪ್ರಪ್ರಥಮ ಆದ್ಯತೆ ಎಂದು ಅವರು ಸಾರಿದ್ದಾರೆ.
ಸುರಕ್ಷತೆಗೆ ಸಂಬಂಧಿಸಿದಂತೆ ರೈಲು ಇಲಾಖೆಯಲ್ಲಿ ಏನೇನು ಕುಂದುಕೊರತೆಗಳಿವೆ, ಎಂಥೆಂಥ ಸುರಕ್ಷತಾ ಕ್ರಮಗಳನ್ನು ಜರುಗಿಸಲಾಗಿದೆ ಎಂಬುದರ ಸ್ಥೂಪ ಪರಾಮರ್ಶೆಯನ್ನು ಅವರು ಮಾಡಿದ್ದು, ಸುರಕ್ಷತಾ ಸಿಬ್ಬಂದಿಯಿಲ್ಲದ ರೈಲು ಲೆವೆಲ್ ಕ್ರಾಸಿಂಗ್ ಮತ್ತು ರೈಲು ಹಳಿ ತಪ್ಪಿದಾಗ ಸಂಭವಿಸುತ್ತಿರುವ ಅಪಘಾತಗಳ ಬಗ್ಗೆ ಅವರು ಅಧ್ಯಯನವನ್ನು ಮಾಡಿದ್ದಾರೆ.
ಸಿಬ್ಬಂದಿಯಿಲ್ಲದ ರೈಲು ಕ್ರಾಸಿಂಗ್
2016-17ರಲ್ಲಿ ಶೇ.34ರಷ್ಟು ಅಪಘಾತಗಳು ಸಿಬ್ಬಂದಿಯಿಲ್ಲದ ರೈಲು ಕ್ರಾಸಿಂಗ್ ಗಳಲ್ಲಿ ಸಂಭವಿಸಿವೆ. ಇದನ್ನು ತಪ್ಪಿಸುವುದು ಮೊದಲ ಆದ್ಯತೆಗಳಲ್ಲಿ ಒಂದು. ಅಲ್ಲದೆ, ಹಳೆಯ ಕಂಬಿಗಳನ್ನು ಬದಲಿಸಿ ಹೊಸವನ್ನು ಅಳವಡಿಸುವುದು, ಅವಶ್ಯಕತೆಯಿದ್ದಲ್ಲಿ ಗೇಜ್ ಪರಿವರ್ತನೆ ಮಾಡುವುದಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು.
ದೋಷಯುಕ್ತವಾದ ರೈಲು ಕಂಬಿಗಳ ಬದಲಾವಣೆ
ರೈಲು ಇಲಾಖೆಯ ಅಭಿವೃದ್ಧಿಗೆ ಕುಂಠಿತವಾಗಿರುವ ಮತ್ತೊಂದು ಸಮಸ್ಯೆಯೆಂದರೆ, ದೋಷಯುಕ್ತವಾದ ರೈಲು ಕಂಬಿಗಳು. ಇದರಿಂದ ಕೂಡ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಇಂಜಿನಿಯರಿಂಗ್ ದೋಷವೂ ಆಗಿರಬಹುದು ಅಥವಾ ಸಿಬ್ಬಂದಿಯ ತಪ್ಪು ನಡೆಯೂ ಆಗಿರಬಹುದು. ಆದ್ದರಿಂದ ಇಂಥ ಸಮಸ್ಯೆಗಳಿರುವ ಪ್ರದೇಶಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವುದು.
ಹೊಸ ವಿನ್ಯಾಸದ ಕೋಚ್ ಗಳ ಅಳವಡಿಕೆ
ಕಳೆದ 50 ವರ್ಷಗಳಿಂದ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಐಸಿಎಫ್ (ಇಂಟಿಗ್ರಲ್ ಕೋಚ್ ಫ್ಯಾಕ್ಟರಿ) ಡಿಸೈನ್ ಕೋಚ್ ಗಳ ಬದಲಾಗಿ ಹೊಸ ವಿನ್ಯಾಸವಿರುವ, ಅತ್ಯಾಧುನಿಕ ಎಲ್ಎಚ್ಬಿ (ಲಿಂಕೆ ಹಾಫ್ಮನ್ ಬಸ್ಚ್) ಕೋಚ್ ಗಳನ್ನು ನಿರ್ಮಾಣ ಮಾಡುವುದು. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದಲೂ ಇದು ಮಹತ್ವದ ನಿರ್ಧಾರವಾಗಿದೆ.
ಎಲ್ಲಾ ರೈಲುಗಳಲ್ಲಿ ಆಕ್ಸಿಜನ್ ಸಿಲಿಂಡರ್ ಕಡ್ಡಾಯ : ಸುಪ್ರಿಂ ಕೋರ್ಟ್
ಉದ್ಯೋಗಿಗಳ ಕಾರ್ಯಕ್ಷಮತೆ ಹೊಸ ಮಂತ್ರ
ರೈಲು ಉದ್ಯೋಗಿಗಳ ಕಾರ್ಯಕ್ಷಮತೆಯಿಂದ ಪ್ರಯಾಣಿಕರು ಅತ್ಯಂತ ಸುರಕ್ಷಿತವಾಗಿ ಮತ್ತು ನೆಮ್ಮದಿಯಿಂದ ಪಯಣಿಸಬಹುದು ಎಂಬುದು ರೈಲು ಇಲಾಖೆಯ ಹೊಸ ಮಂತ್ರ. ಜೊತೆಗೆ, ಸಬರ್ಬನ್ ರೈಲು ನಿಲ್ದಾಣಗಳಲ್ಲಿ ಇರುವ ಫುಟ್ ಓವರ್ ಬ್ರಿಜ್ ಗಳನ್ನು ಅಗಲೀಕರಿಸುವುದು, ಎಲಿವೇಲೇಟರ್ ಗಳನ್ನು ಅಳವಡಿಸುವುದು, ಹೊಸ ಎಂಟ್ರಿ ಎಕ್ಸಿಟ್ ದ್ವಾರಗಳನ್ನು ಜಾರಿಗೆ ತರುವುದೂ ಆಗಿದೆ.
ಮುಂಬೈ ಮಾದರಿಯಲ್ಲಿ ಬೆಂಗಳೂರಿಗೆ ಸಬ್ ಅರ್ಬನ್ ರೈಲು: ಪಿಯೂಷ್ ಗೋಯಲ್
ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದು
ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಜನರಲ್ ಮ್ಯಾನೇಜರ್, ಡಿಆರ್ಎಂ ಮುಂತಾದ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದು. ಅವರಿಗೆ ಹೆಚ್ಚಿನ ಹಣಕಾಸಿನ ಸೌಲಭ್ಯವನ್ನೂ ಒದಗಿಸುವುದು. ಹೆಚ್ಚುವರಿ ವಿಭಾಗೀಯ ಮ್ಯಾನೇಜರುಗಳ ಸಂಖ್ಯೆಯನ್ನು ಹೆಚ್ಚಿಸುವುದು. ಇದರಿಂದ ತ್ವರಿತ ನಿರ್ಧಾರ ತೆಗೆದುಕೊಳ್ಳಲು ಮತ್ತು ಸರ್ವತೋಮುಖ ಕಾರ್ಯಕ್ಷಮತೆ ಹೆಚ್ಚಿಸುವುದು ಆದ್ಯತೆಗಳಲ್ಲಿ ಒಂದಾಗಿದೆ.
ರೈಲ್ವೆ ಇಲಾಖೆಯಲ್ಲಿನ್ನು ಅಧಿಕಾರಿಗಳ ಶಿಷ್ಟಾಚಾರಕ್ಕೆ ಕೊನೆ
ಸಿಬ್ಬಂದಿಗೆ ಮನೆಕೆಲಸದಿಂದ ಮುಕ್ತಿ
ಕೆಲವೊಂದು ಅಧಿಕಾರಿಗಳು ಕೆಳವರ್ಗದ ಸಿಬ್ಬಂದಿಗಳನ್ನು ತಮ್ಮ ಮನೆಯ ಚಾಕರಿಗೆ ಬಳಸಿಕೊಳ್ಳುತ್ತಿದ್ದುದನ್ನು ತಪ್ಪಿಸಿ ಅವರನ್ನು ಸುರಕ್ಷತಾ ವಿಭಾಗಗಳಿಗೆ ವರ್ಗಾಯಿಸಲಾಗಿದೆ. ಇಂಥ 8 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಸುರಕ್ಷತೆಗಾಗಿ ತೊಡಗಿಸಿಕೊಳ್ಳಲಾಗಿದೆ. ಅಲ್ಲದೆ, ಹೆಡ್ ಕ್ವಾರ್ಟರ್ ಗಳಲ್ಲಿ ಚಾಕರಿ ಮಾಡುತ್ತಿದ್ದ 200ಕ್ಕೂ ಹೆಚ್ಚು ಅಧಿಕಾರಿಗಳನ್ನು ಫೀಲ್ಡ್ ಕೆಲಸಕ್ಕೆ ನಿಯೋಜಿಸಲಾಗಿದೆ.