ಕಾಂಗ್ರೆಸ್ ಬುಡ ಅಲ್ಲಾಡಿಸುತ್ತಿರುವ ನ್ಯಾಷನಲ್ ಹೆರಾಲ್ಡ್
ಇದೇ ಬರುವ ಶನಿವಾರ (ಡಿ 19) ರಾಷ್ಟ್ರ ರಾಜಕಾರಣದಲ್ಲಿ ನಾಟಕೀಯ ಪ್ರಹಸನ ನಡೆಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಸೋನಿಯಾ ಜಿಂದಾಬಾದ್, ಮೋದಿ ಮುರ್ದಾಬಾದ್ ಎನ್ನುವ ಜೈಕಾರ, ಧಿಕ್ಕಾರದ ಲಕ್ಷಾರ್ಚನೆಯಾಗುವ ಸಾಧ್ಯತೆಯಿಲ್ಲದಿಲ್ಲ.
ಕಾಂಗ್ರೆಸ್ ಬುಡ ಅಲ್ಲಾಡಿಸುತ್ತಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆಗಾಗಿ ಪಟಿಯಾಲ ಕೋರ್ಟಿಗೆ ಅಮ್ಮ(ಸೋನಿಯಾ) ಮಗ (ರಾಹುಲ್) ಹಾಜರಾಗಬೇಕಾಗಿದೆ, ಜೊತೆಗೆ ಇನ್ನೈವರು ಕಾಂಗ್ರೆಸ್ ಮುಖಂಡರು. ಐವರಲ್ಲಿ ನಮ್ಮ ಆಸ್ಕರ್ ಫೆರ್ನಾಂಡಿಸ್ ಸಾಹೇಬ್ರೂ ಒಬ್ಬರು. (ಸೋನಿಯಾ, ರಾಹುಲ್ ಜೈಲಿಗೆ ಹೋಗಲು ಸಿದ್ದ)
ಬಹುತೇಕ ಖಚಿತ ಮಾಹಿತಿಯಂತೆ ಅಂದು ಕಾಂಗ್ರೆಸ್ ಎಂಡ್ ಕೋ 'ಭಯಂಕರ' ಶಕ್ತಿ ಪ್ರದರ್ಶನಕ್ಕೆ ಮುಂದಾಗುವ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕದ ಮಾಜಿ ಸಿಎಂ ಯಡಿಯೂರಪ್ಪ ಲೋಕಾಯುಕ್ತ ಪೊಲೀಸರಿಗೆ ಮೆರವಣಿಗೆಯ ಮೂಲಕ ಶರಣಾದಂತೆ, ದೆಹಲಿಯಲ್ಲಿ ಅಂದು ಅದೆಷ್ಟು ವಾಹನ ಚಾಲಕರು ಪರದಾಡಬೇಕಾಗಿದೆಯೋ? [ಹೆರಾಲ್ಡ್ : ಒಂದಿಷ್ಟು ತಮಾಷೆಯ, ಕೆಣಕುವ ಟ್ವೀಟುಗಳು]
ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ: ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಸಂಸ್ಥೆ 20.11.1937ರಲ್ಲಿ ಬಹಾದ್ದೂರ್ ಶಾ ಜಫರ್ ಮಾರ್ಗ್, ನವದೆಹಲಿ ನೊಂದಾಣಿ ವಿಳಾಸ ಮತ್ತು 5 ಲಕ್ಷ ರೂಪಾಯಿ ಬಂಡವಾಳದ ಮೂಲಕ ಅಸ್ತಿತ್ವಕ್ಕೆ ಬಂದಿತ್ತು. ಈ ಸಂಸ್ಥೆಯ ಮಾರ್ಗದರ್ಶಿ, ಮುಖ್ಯಸ್ಥ ಜವಾಹರ್ ಲಾಲ್ ನೆಹರೂ.
ಐದು ಸಾವಿರ ಸ್ವಾತಂತ್ರ್ಯ ಹೋರಾಟಗಾರರು ಈ ಸಂಸ್ಥೆಯ ಷೇರನ್ನು ಹೊಂದಿದ್ದರು, ಜೊತೆಗೆ ನೂರು ರೂಪಾಯಿ ಮುಖಬೆಲೆಯ 2000, 10 ರೂಪಾಯಿ ಮುಖಬೆಲೆಯ 30,000 ಇಕ್ವಿಟಿ ಷೇರನ್ನು ಇವರಿಗೆಲ್ಲಾ ಹಂಚಲಾಗಿತ್ತು.
ಈ ಕಂಪೆನಿ 1938ರ ಸೆಪ್ಟೆಂಬರ್ 9ರಂದು ಜವಾಹರಲಾಲ್ ನೆಹರೂ ಅವರ ನೇತೃತ್ವದಲ್ಲಿ ಲಖನೌದಲ್ಲಿ ಇಂಗ್ಲಿಷ್ ಆವೃತ್ತಿ 'ನ್ಯಾಷನಲ್ ಹೆರಾಲ್ಡ್' ಎನ್ನುವ ಹೆಸರಿನ ಮೂಲಕ ಪತ್ರಿಕೆ ಆರಂಭಿಸಿತು. (ನ್ಯಾಷನಲ್ ಹೆರಾಲ್ಡ್ ಕೇಸ್ ರೀ ಓಪನ್)
ಬಳಿಕ ಹಿಂದಿ ಆವೃತ್ತಿ ನವಜೀವನ್ ಮತ್ತು ಉರ್ದು ಆವೃತ್ತಿ ಕ್ವಾಮಿ ಆವಾಜ್ ಎನ್ನುವ ಪತ್ರಿಕೆಗಳನ್ನೂ ಆರಂಭಿಸಿತು. ಭಾರತಕ್ಕೆ ಸ್ವಾತಂತ್ರ್ಯ ಬಂದ ತರುವಾಯ ಅಂದಿನ ಪ್ರಧಾನಿ ನೆಹರೂ, ಸಂಸ್ಥೆಗೆ ನವದೆಹಲಿ, ಲಕ್ನೋ, ಭೋಪಾಲ್, ಮುಂಬೈ, ಇಂದೋರ್ ಸೇರಿದಂತೆ ಹಲವಡೆ ಭೂಮಿಯನ್ನು ಮಂಜೂರು ಮಾಡಿದ್ದರು. ನೆಹರೂ ಪ್ರಧಾನಿಯಾಗಿದ್ದ ವೇಳೆ ಈ ಸಂಸ್ಥೆಗೆ ದೇಣಿಗೆಯ ಮಹಾಪೂರವೇ ಹರಿದುಬಂದಿತ್ತು. ಮುಂದೆ ಓದಿ..
90.25 ಕೋಟಿ ರೂಪಾಯಿ ಸಾಲ
ಬರಬರುತ್ತಾ ಇತರ ಪತ್ರಿಕೆಗಳಿಗೆ ಪೈಪೋಟಿ ನೀಡಲಾಗದೇ, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿನ ವೈಫಲ್ಯತೆ ಮತ್ತು ಜಾಹೀರಾತು ಆದಾಯದ ಕೊರತೆಯಿಂದಾಗಿ 2008ರಲ್ಲಿ ಮೂರೂ ಆವೃತ್ತಿಯ ಪ್ರಕಟಣೆ ಸ್ಥಗಿತಗೊಳಿಸುತ್ತಿರುವುದಾಗಿ ಪತ್ರಿಕೆ ಘೋಷಿಸಿತು. 29.09.2010ರ ವೇಳೆಗೆ ಷೇರು ಹೋಲ್ಡರುಗಳ ಸಂಖ್ಯೆ 1057ಕ್ಕೆ ಇಳಿದಿತ್ತು. ಆ ಸಮಯದಲ್ಲಿ ಸಂಸ್ಥೆ 90.25 ಕೋಟಿ ರೂಪಾಯಿ ಸಾಲ ಹೊಂದಿತ್ತು.
ಯಂಗ್ ಇಂಡಿಯಾ ಲಿಮಿಟೆಡ್
ರಾಜೀವ್ ಗಾಂಧಿ ಕುಟುಂಬದ ಪ್ರಮುಖರ ಹೂಡಿಕೆಯ ಮೂಲಕ 2010ರಲ್ಲಿ ಯಂಗ್ ಇಂಡಿಯಾ ಲಿಮಿಟೆಡ್ (ವೈಐಎಲ್) ಎಂಬ ಕಂಪೆನಿ ಅಸ್ತಿತ್ವಕ್ಕೆ ಬಂತು. ಸೋನಿಯಾ ಮತ್ತು ರಾಹುಲ್ ಗಾಂಧಿ ತಲಾ ಶೇ 38ರಷ್ಟು ಷೇರನ್ನು ಹೊಂದಿದ್ದರೆ. ಗಾಂಧಿ ಕುಟುಂಬದ ಪರಮಾಪ್ತರಾದ ಆಸ್ಕರ್ ಫರ್ನಾಂಡಿಸ್ ಮತ್ತು ಮೋತಿಲಾಲ್ ವೋರಾ ತಲಾ ಶೇ 24ರಷ್ಟು ಷೇರುಗಳನ್ನು ಹೊಂದಿದ್ದಾರೆ.
ಹೆರಾಲ್ಡ್ ಸಂಸ್ಥೆಗೆ ಬಡ್ಡಿರಹಿತ ಸಾಲ
ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ವೈಐಎಲ್ 90.25 ಕೋಟಿ ರೂಪಾಯಿ ಬಡ್ಡಿರಹಿತ ಸಾಲ ನೀಡಿತ್ತು. ಇದರಲ್ಲಿ ಎಐಸಿಸಿ ಖಜಾನೆಯಿಂದ ಐವತ್ತು ಲಕ್ಷ ರೂಪಾಯಿ ನೇರವಾಗಿ ವರ್ಗಾವಣೆಯಾಗಿತ್ತು. ಅಲ್ಲದೇ, ಹೆರಾಲ್ಡ್ ಒಡೆತನದಲ್ಲಿದ್ದ 'ಹೆರಾಲ್ಡ್ ಹೌಸ್' ನವೀಕರಣಕ್ಕೆ ಒಂದು ಕೋಟಿ ರೂಪಾಯಿ ನೀಡಿತ್ತು. (ಚಿತ್ರ: ದಿ ಹಿಂದೂ)
ವೈಐಎಲ್ ಖರೀದಿ
ಇದಾದ ನಂತರ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯನ್ನು ವೈಐಎಲ್ ಖರೀದಿಸಿತ್ತು. ಎರಡು ಸಾವಿರ ಕೋಟಿ ರೂಪಾಯಿಗೂ ಮೇಲೆ ಆಸ್ತಿಪಾಸ್ತಿ ಹೊಂದಿರುವ ಈ ಸಂಸ್ಥೆಗೆ ವೈಐಎಲ್ 91.75 ಕೋಟಿ ರೂಪಾಯಿ ಸುರಿದಿದ್ದು ಬಿಟ್ಟರೆ ಮಿಕ್ಕಾವ ಆರ್ಥಿಕ ವಹಿವಾಟಿನ ಬಗ್ಗೆ ಎಲ್ಲೂ ದಾಖಲಾಗಿರಲಿಲ್ಲ. (ಚಿತ್ರ: ಐಬಿಎನ್)
ಸುಬ್ರಮಣಿಯನ್ ಸ್ವಾಮಿ
ಎಜೆಎಲ್ ಸಂಸ್ಥೆಯ ಖರೀದಿ ವ್ಯವಹಾರದಲ್ಲಿ ಭಾರಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ ಎಂದು ಅಂದಿನ ಜನತಾ ಪಕ್ಷದ ಮುಖಂಡ ಸುಬ್ರಮಣಿಯನ್ ಸ್ವಾಮಿ 2012ರ ಜೂನ್ ನಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದಾಯ ತೆರಿಗೆ ಕಾನೂನು 1961 ಪ್ರಕಾರ, ರಾಜಕೀಯ ಪಕ್ಷವೊಂದು ಮೂರನೇ ಕಂಪನಿಗೆ ಸಾಲ ಕೊಡುವಂತಿಲ್ಲ. ಎಜೆಎಲ್ ಮತ್ತು ವೈಎಎಲ್ ಮಧ್ಯೆ ಹಣದ ಅವ್ಯವಹಾರ ನಡೆದಿದೆ. ಎಜೆಎಲ್ ದೆಹಲಿ, ಮುಂಬೈ ಮುಂತಾದೆಡೆ ಆಸ್ತಿ ಹೊಂದಿದ್ದು ದೆಹಲಿಯ ಆಯಕಟ್ಟಿನ ಸ್ಥಳದಲ್ಲಿ ಕಟ್ಟಡವೂ ಇದೆ. ಇದರ ಇಂದಿನ ಮಾರುಕಟ್ಟೆ ಬೆಲೆ ಎರಡು ಸಾವಿರ ಕೋಟಿ ರೂಪಾಯಿಗೂ ಅಧಿಕ ಎನ್ನುವುದು ಸ್ವಾಮಿ ವಾದವಾಗಿತ್ತು.
ಜಾರಿ ನಿರ್ದೇಶನಾಲಯ
ಕೇಸಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ 26.06.2014ರಂದು ಸೋನಿಯಾ, ರಾಹುಲ್ ಸೇರಿದಂತೆ ಏಳು ಜನರಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಈ ಸಮನ್ಸಿಗೆ ದೆಹಲಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ತನಿಖೆಗೆ ತಡೆಯಾಜ್ಞೆ ಕೋರಿ 2015ರ ಜನವರಿಯಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ಬೇರೆ ಪೀಠಕ್ಕೆ ವರ್ಗಾಯಿಸಿದ್ದರು. ಈ ನಡುವೆ ಹೆರಾಲ್ಡ್ ಕೇಸಿನ ತನಿಖೆಯನ್ನು ನಡೆಸುತ್ತಿದ್ದ ಜಾರಿ ನಿರ್ದೇಶನಾಲಯ (ಇಡಿ) 18.09.2015ರಲ್ಲಿ ತನಿಖೆ ಮುಂದುವರಿಸುವುದಾಗಿ ಹೇಳುವ ಮೂಲಕ ಕಾಂಗ್ರೆಸ್ಸಿಗೆ ಶಾಕ್ ನೀಡಿತ್ತು.
ಕೋರ್ಟಿಗೆ ಖಡ್ಡಾಯ ಹಾಜರಾಗುವಂತೆ ಆದೇಶ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿಗೊಳಿಸದಂತೆ ಸೋನಿಯಾ ಹಾಗೂ ರಾಹುಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ 07.12.2015 ರಂದು ತಿರಸ್ಕರಿಸಿತ್ತು. ಹೆರಾಲ್ಡ್ ಖರೀದಿ ವ್ಯವಹಾರದಲ್ಲಿ ಅನೇಕ ಅಕ್ರಮ ನಡೆದಿರುವ ಬಗ್ಗೆ ಪ್ರಾಥಮಿಕ ಸಾಕ್ಷಿ ಮತ್ತು ದಾಖಲೆಗಳಿಂದ ಸಾಬೀತಾಗುತ್ತಿದೆ, ಡಿಸೆಂಬರ್ 19, 2015ರೊಳಗೆ ಪಟಿಯಾಲ ಕೋರ್ಟಿಗೆ ಖಡ್ಡಾಯ ಹಾಜರಾಗುವಂತೆ ಆದೇಶ ನೀಡುವ ಮೂಲಕ ಈ ಕೇಸ್ ಈಗ ಇಲ್ಲಿಗೆ ಬಂದು ನಿಂತಿದೆ.
ಹಂಸರಾಜ್ ಭಾರದ್ವಾಜ್
ಕೆಲವೊಂದು ಮೂಲಗಳ ಪ್ರಕಾರ ಕೇಸಿಗೆ ಸಂಬಂದಿಸಿದಂತೆ ಕೋರ್ಟ್ ಮೆಟ್ಟಲೇರಿರುವ ಸುಬ್ರಮಣಿಯನ್ ಸ್ವಾಮಿಗೆ ಅಗತ್ಯ ದಾಖಲೆ ಒದಗಿಸಿದ್ದು ಕಾಂಗ್ರೆಸ್ ಮುಖಂಡರಾಗಿದ್ದ, ಕರ್ನಾಟಕದ ಮಾಜಿ ರಾಜ್ಯಪಾಲರೂ ಆಗಿರುವ ಹಂಸರಾಜ್ ಭಾರದ್ವಾಜ್.
ಪ್ರಕರಣದ ಆರೋಪಿಗಳು
1.
ಸೋನಿಯಾ
ಗಾಂಧಿ
2.
ರಾಹುಲ್
ಗಾಂಧಿ
3.
ಕಾಂಗ್ರೆಸ್
ಮುಖಂಡ
ಮೋತಿ
ಲಾಲ್
ವೋರಾ
4.
ಕಾಂಗ್ರೆಸ್
ಮುಖಂಡ
ಆಸ್ಕರ್
ಫರ್ನಾಂಡಿಸ್
5.
ಪತ್ರಕರ್ತ
ಸುಮನ್
ದುಬೆ,
6.
ದೂರಸಂಪರ್ಕ
ಇಲಾಖೆಯ
ಇಂಜಿನಿಯರ್
ಸ್ಯಾಮ್
ಪಿತ್ರೋಡ
7.
ಯಂಗ್
ಇಂಡಿಯಾ
ಲಿಮಿಟೆಡ್
ಸಂಸ್ಥೆ