ನಿವೃತ್ತಿಯ ನಂತರ ಸೇನಾ ನಾಯಿಗಳನ್ನೇನು ಮಾಡುತ್ತಾರೆ?
ಬೆಂಗಳೂರು, ಜೂ. 04 : ರೇಸಿಂಗಲ್ಲಿ ನಾಗಾಲೋಟದಲ್ಲಿ ಓಡಿ ಮಾಲಿಕರಿಗೆ ಕೋಟ್ಯಂತರ ದುಡಿದು ಕೊಡುವ ಕುದುರೆ, ಮಳೆ ಚಳಿ ಬಿಸಿಲನ್ನು ಲೆಕ್ಕಿಸದೆ ಹೆಗಲಿಗೆ ನೊಗವನ್ನು ಹೊತ್ತು, ಗದ್ದೆಗಳಲ್ಲಿ ಬೆಳೆ ಬೆಳೆಯಲು ಸಹಾಯ ಮಾಡುವ ರೈತನ ಮಿತ್ರ ಎತ್ತು ಕಸುವನ್ನು ಕಳೆದುಕೊಂಡು ನಿವೃತ್ತಿಯ ಅಂಚಿಗೆ ತಲುಪಿದಾಗ ಅವುಗಳ ಗತಿ ಏನಾಗುತ್ತದೆ?
ಅವುಗಳ ಗತಿ ಏನಾಗುತ್ತದೆಂದು ಎಲ್ಲರಿಗೂ ತಿಳಿದ ಸಂಗತಿ. ಈಗ ಅದೇ ಗತಿ, ಭಾರತೀಯ ಸೇನೆಯಲ್ಲಿ ಯಜಮಾನ ಹೇಳಿದಂತೆ ಚಾಚೂತಪ್ಪದೆ ಕೇಳುತ್ತ ದೇಶ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಶ್ವಾನಗಳಿಗೂ ಆಗುತ್ತಿದೆ! ಇದು ನಂಬಲಸಾಧ್ಯವಾದ ಸಂಗತಿಯಾದರೂ ನಂಬಲೇಬೇಕಾದ ವಸ್ತುಸ್ಥಿತಿ. [ಡಿಕೆ ರವಿ ಮುದ್ದಿನ ರೋನಿ ರೋದನಕ್ಕಿಲ್ಲ ಉತ್ತರ]
ಬಾಂಬ್ ಗಳನ್ನು ಅತ್ಯಂತ ನಿಖರವಾಗಿ ಪತ್ತೆ ಹಚ್ಚುವ, ಅಪರಾಧಿಗಳನ್ನು ಮೂಸಿ ಹಿಡಿದುಕೊಡುವ ಸೇನೆಯ ನಾಯಿಗಳಿಗೂ ನಿವೃತ್ತಿ ಎಂಬುದಿದೆ. ಆದರೆ, ಅವೇನು ಪಿಂಚಣಿ ಪಡೆಯುತ್ತ ನಿವೃತ್ತಿಯ ನಂತರ ಸುಖಮಯ ಜೀವನವನ್ನು ಸಾಗಿಸುತ್ತವಾ? ಅಥವಾ ಪ್ರಾಣಿ ದಯಾ ಸಂಘದ ಸದಸ್ಯರಾಗುತ್ತವಾ? ಅವುಗಳನ್ನೇನು ಮಾಡುತ್ತಾರಂತ ಮುಂದೆ ಓದಿ.
ಅವುಗಳಿಗೆ ದಯಾಮರಣ ದಯಪಾಲಿಸಲಾಗುತ್ತದೆ! ಮಾಹಿತಿ ಹಕ್ಕು ಕಾರ್ಯಕರ್ತರ ಪ್ರಕಾರ, ನಿವೃತ್ತಿಯಾದ ನಾಯಿಗಳನ್ನು ಅಥವಾ ಒಂದು ತಿಂಗಳಿಗಿಂತ ಹೆಚ್ಚು ಅವುಗಳಿಂದ ಸೇವೆ ಪಡೆಯಲು ಸಾಧ್ಯವಿಲ್ಲ ಅಂತ ತಿಳಿದುಬಂದಾಗ ಅವುಗಳಿಗೆ ನೋವಿಲ್ಲದ ಸಾವನ್ನು ದಯಪಾಲಿಸಲಾಗುತ್ತದೆ. ಇದೆಂಥ ಮಾನವೀಯತೆ? [ರಾಮಣ್ಣನ ತಿಥಿ ಮಾಡಿದ ಗ್ರಾಮಸ್ಥರು!]
"ಸೇವೆ ನಿರ್ವಹಿಸುವಾಗ ನಾಯಿಯಾಗಲಿ, ಕುದುರೆಯಾಗಲಿ ದೈಹಿಕ ಸಾಮರ್ಥ್ಯ ಆಧರಿಸಿ ಅವುಗಳ ಮೌಲ್ಯವನ್ನು ಅಳೆಯಲಾಗುತ್ತದೆ. ಸಮರ್ಥವಾಗಿ ಸೇವೆ ನೀಡುವಲ್ಲಿ ಒಂದು ತಿಂಗಳು ಅಸಮರ್ಥವಾಗಿದ್ದರೆ ಅವುಗಳಿಗೆ ದಯಾಮರಣ ದಯಪಾಲಿಸಲಾಗುತ್ತದೆ" ಎಂದು ಸೇನೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದಕ್ಕೆ ಕಾರಣವನ್ನು ಹೀಗೆ ನೀಡಲಾಗಿದೆ. ಭಾರತೀಯ ಸೇನೆ ಲ್ಯಾಬ್ರೊಡಾರ್, ಜರ್ಮನ್ ಶೆಫರ್ಡ್ ಮತ್ತು ಬೆಲ್ಜಿಯನ್ ಶೆಫರ್ಡ್ ಜಾತಿಯ ನಾಯಿಗಳನ್ನು ಪಳಗಿಸುತ್ತದೆ. ಸೇವೆಯಲ್ಲಿದ್ದಾಗ ಅವುಗಳಿಗೆ ಅತ್ಯುತ್ತಮ ಸೌಕರ್ಯಗಳನ್ನು ಕೂಡ ನೀಡಲಾಗುತ್ತದೆ. ತರಬೇತಿಯಲ್ಲಿದ್ದಾಗ ಅವು ತುಂಬಾ ಸೂಕ್ಷ್ಮ ಮನಸ್ಸಿನದಾಗಿರುತ್ತವೆ. ನಿವೃತ್ತಿಯ ನಂತರ ಇತರರ ಕೈಗೆ ಅವುಗಳನ್ನು ನೀಡುವುದು ಅವುಗಳಿಗೂ ಸುರಕ್ಷಿತವಲ್ಲ.
ಕಾರಣಗಳೇನೇ ಇರಲಿ, ನಾಯಿಗಳು ಸಾಮರ್ಥ್ಯ ಕಳೆದುಕೊಂಡಿವೆ ಎಂದು ತಿಳಿದಾಗ ಅವನ್ನು ನಿರ್ದಯವಾಗಿ ಕೊಲ್ಲುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ. ಪ್ರಾಣಿದಯಾ ಸಂಘಗಳು ಕೂಡ ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ನಾಯಿಗಳನ್ನು ಪೋಷಿಸುತ್ತಾರೆ, ಆತ್ಮೀಯವಾಗಿ ನಡೆಸಿಕೊಳ್ಳುತ್ತಾರೆ, ಪಳಗಿಸುತ್ತಾರಾದರೂ ಅವುಗಳ ಜೀವ ತೆಗೆಯುವ ಹಕ್ಕು ಸೇನೆಗೆ ಇದೆಯಾ?