ನವದೆಹಲಿ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಆಪ್ ಮುಖಂಡ ಸಂದೀಪ್ ಭಾರದ್ವಾಜ್
ನವದೆಹಲಿ, ನವೆಂಬರ್ 25: ಆಮ್ ಆದ್ಮಿ ಪಕ್ಷದ ನಾಯಕ ಸಂದೀಪ್ ಭಾರದ್ವಾಜ್ ಎಂಬುವವರು ಪಶ್ಚಿಮ ದೆಹಲಿಯ ರಾಜೌರಿ ಗಾರ್ಡನ್ನಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅವರ ನಿಧನಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಬಿಜೆಪಿ ಈ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದೆ. 55 ವರ್ಷದ ಸಂದೀಪ್ ಭಾರದ್ವಾಜ್ ಎಂದು ಗುರುತಿಸಲಾದ ವ್ಯಕ್ತಿಯ ಶವವು ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈ ಮೋದಿ ಎಂದವರಿಗೆ ಕೇಜ್ರಿವಾಲ್ ನೀತಿಪಾಠ!
ರಾಜೌರಿ ಗಾರ್ಡನ್ನ ನಿವಾಸಿ ಭಾರದ್ವಾಜ್ ಅನ್ನು ಅವರ ನಿವಾಸದಿಂದ ಕರೆತರಲಾಗಿದೆ ಎಂದು ಪೊಲೀಸರು ಕುಕ್ರೇಜಾ ಆಸ್ಪತ್ರೆಯಿಂದ ಮಾಹಿತಿ ಪಡೆದರು ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ಘನಶ್ಯಾಮ್ ಬನ್ಸಾಲ್ ಹೇಳಿದ್ದಾರೆ. ಸ್ಥಳಕ್ಕೆ ಅಪರಾಧ ತಂಡವನ್ನು ಕರೆಸಲಾಯಿತು. ಈ ವ್ಯಕ್ತಿ ಭಾರದ್ವಾಜ್ ಮಾರ್ಬಲ್ಸ್ ಮಾಲೀಕನಾಗಿದ್ದು, ವಿಚ್ಛೇದನ ಪಡೆದಿದ್ದರು. ಅವರ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜನರನ್ನು ಬೆಚ್ಚಿ ಬೀಳಿಸಿದ ಘಟನೆ:
ಆಪ್ ನಾಯಕ ಸಂದೀಪ್ ಭಾರದ್ವಾಜ್ ಅವರ ಹಠಾತ್ ಆತ್ಮಹತ್ಯೆಯ ವರದಿಯು ದೆಹಲಿಯ ಜನರನ್ನು ವಿಶೇಷವಾಗಿ ಮೋತಿ ನಗರ ವಿಧಾನಸಭಾ ಕ್ಷೇತ್ರದ ಜನರನ್ನು ಬೆಚ್ಚಿಬೀಳಿಸಿದೆ ಎಂದು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಹೇಳಿದರು. ಕೆಲವು ದಿನಗಳವರೆಗೂ ತನ್ನ ವ್ಯವಹಾರವನ್ನು ಹೊರತುಪಡಿಸಿ ರಾಜಕೀಯ ಕೆಲಸಗಳನ್ನು ಸಕ್ರಿಯವಾಗಿ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ ಎಂದು ದೆಹಲಿಯ ಜನರು ತಿಳಿಯಲು ಬಯಸುತ್ತಾರೆ ಮತ್ತು ಆದ್ದರಿಂದ ಆತ್ಮಹತ್ಯೆಯ ಕಾರಣವನ್ನು ಹೊರತರಲು ಪೊಲೀಸರು ಸಂಪೂರ್ಣ ತನಿಖೆ ನಡೆಸಬೇಕು," ಎಂದು ಅವರು ಹೇಳಿದರು.
ಸಂಬಂಧಿಕರೊಂದಿಗೆ ನಿಲ್ಲುವುದು ಆಪ್ ಎಂದ ಕೇಜ್ರಿವಾಲ್:
ಈ ಸಮಯದಲ್ಲಿ ಇಡೀ ಪಕ್ಷವು ಅವರ ಸಂಬಂಧಿಕರೊಂದಿಗೆ ನಿಂತಿದೆ ಎಂದು ದೆಹಲಿ ಮುಖ್ಯಮಂತ್ರಿ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದರು. "ಎಎಪಿ ಕಾರ್ಯಕರ್ತ ಸಂದೀಪ್ ಭಾರದ್ವಾಜ್ ಅವರ ಅಕಾಲಿಕ ನಿಧನದ ಬಗ್ಗೆ ತುಂಬಾ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಈ ದುಃಖದ ಸಮಯದಲ್ಲಿ, ನಮ್ಮ ಸಂತಾಪಗಳು ಅವರೊಂದಿಗಿವೆ ಮತ್ತು ಇಡೀ ಪಕ್ಷವು ಅವರ ಸಂಬಂಧಿಕರೊಂದಿಗೆ ನಿಂತಿದೆ" ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.