ಸ್ಟ್ಯಾಂಪ್ ಪೇಪರ್ ನಲ್ಲಿ ಕಾಂಗ್ರೆಸ್ ಶಾಸಕರಿಂದ ಮುಚ್ಚಳಿಕೆ : ವಿಶ್ವಾಸದ ಕೊರತೆ?
ಐದು ರಾಜ್ಯಗಳ ಚುನಾವಣೆಯ ನಂತರ ಕಳೆಗುಂದಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಅಸೆಂಬ್ಲಿ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರ ಮೇಲೆ ನಂಬಿಕೆ ಕಮ್ಮಿಯಾಗುತ್ತಿದೆಯೇ ಎನ್ನುವ ವಿಚಾರ ಈಗ ಚರ್ಚೆಯ ವಿಷಯವಾಗಿದೆ.
ಇದಕ್ಕೆ ಕಾರಣ ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದ 44 ಶಾಸಕರಿಂದ ಕಾಂಗ್ರೆಸ್ ನೂರು ರೂಪಾಯಿ ಸ್ಟ್ಯಾಂಪ್ ಪೇಪರ್ ನಲ್ಲಿ ಮುಚ್ಚಳಿಕೆ ಬರೆಸಿಕೊಂಡಿರುವುದು. (ಹಗರಣಗಳ ನಡುವೆಯೂ ಗಹಗಹಿಸಿದ ಮಮತಾ ಬ್ಯಾನರ್ಜಿ)
'ಪಕ್ಷದ ಹೈಕಮಾಂಡ್ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿಗೆ ನನ್ನ ನಿಷ್ಠೆ ವ್ಯಕ್ತಪಡಿಸುತ್ತೇನೆ' ಎಂದು ಒಕ್ಕಣೆವಿರುವ, ಛಾಪಾ ಕಾಗದದಲ್ಲಿ ಮುದ್ರಿತವಾಗಿರುವ ಮುಚ್ಚಳಿಕೆ ಮಾಧ್ಯಮಗಳಿಗೆ ಸೋರಿಕೆಯಾಗಿದೆ.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷ, ಎಡಪಕ್ಷಗಳ ಜೊತೆ ಮೈತ್ರಿ ಕೊಂಡಿದ್ದರೂ ಅಧಿಕಾರದ ಹತ್ತಿರ ಬರಲು ಬಲುದೂರ ಉಳಿದುಕೊಂಡ ನಂತರ, ಆಯ್ಕೆಯಾದ ಉಳಿದ ಶಾಸಕರನ್ನಾದರೂ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ. (ಕಾಂಗ್ರೆಸ್ ಸೋಲಿಗೆ ರಾಹುಲ್ ಕಾರಣರಲ್ಲ)
ಪಶ್ಚಿಮ ಬಂಗಾಳ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಅಧೀರ್ ಚೌಧರಿ, ಸೋನಿಯಾ ಗಾಂಧಿ ಅವರಿಗೆ ನಿಷ್ಠರಾಗಿರುತ್ತೇವೆ ಎಂದು 100 ರೂಪಾಯಿ ಸ್ಟ್ಯಾಂಪ್ ಪೇಪರ್ ಮೇಲೆ ಪ್ರಮಾಣ ಮಾಡುವಂತೆ ಶಾಸಕರಿಗೆ ತಿಳಿಸಿದ್ದಾರೆಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ. ಮುಂದೆ ಓದಿ..

ಅಧೀರ್ ಚೌಧುರಿ
ಗೆದ್ದ 44 ಶಾಸಕರು, ಜಿಲ್ಲಾ ಘಟಕದ ಮುಖ್ಯಸ್ಥರು, ರಾಜ್ಯ ಮಟ್ಟದ ನಾಯಕರ ಜೊತೆ ಅಧೀರ್ ಚೌಧುರಿ ಮಾತುಕತೆ ನಡೆಸಿದ ನಂತರ, ಮುಚ್ಚಳಿಕೆ ಬರೆಸಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ. ಚೌಧುರಿಯವರ ನಿರ್ಧಾರಕ್ಕೆ ಶಾಸಕರು ಯಾವುದೇ ತಕರಾರು (ಸಭೆಯಲ್ಲಿ) ಎತ್ತಲಿಲ್ಲ ಎನ್ನಲಾಗುತ್ತಿದೆ. (ಚಿತ್ರದಲ್ಲಿ ಅಧೀರ್ ಚೌಧುರಿ)

ನಿರ್ಧಾರ ಸಮರ್ಥಿಸಿಕೊಂಡ ಕಾಂಗ್ರೆಸ್ ಮುಖಂಡ
ನಾವು ಯಾರ ಬಳಿಯೂ ಒತ್ತಾಯಪೂರ್ವಕವಾಗಿ ಸಹಿ ಹಾಕಿಸಿಕೊಳ್ಳುತ್ತಿಲ್ಲ. ಶಾಸಕನಾಗಿ ಯಾವುದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಮಗ್ನನಾಗುವುದಿಲ್ಲ, ಪಕ್ಷದ ವಿರುದ್ದ ಹೇಳಿಕೆ ನೀಡುವುದಿಲ್ಲ ಎಂದು ಶಾಸಕರಿಂದ ಬರೆಸಿಕೊಳ್ಳಲಾಗಿದೆ ಎಂದು ಅಧೀರ್ ಚೌಧುರಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಪಕ್ಷದ ನಿರ್ಧಾರಕ್ಕೆ ಬದ್ದ
ಪಕ್ಷ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಕ್ಕೆ ಬದ್ದನಾಗಿರುತ್ತೇನೆ. ಅಸೆಂಬ್ಲಿಯಲ್ಲಿ ಪಕ್ಷದ ಮುಖಂಡರು ನೀಡುವ ವಿಪ್ ಅನ್ನು ಉಲ್ಲಂಘಿಸುವುದಿಲ್ಲ. ಒಂದು ವೇಳೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ರುಜುವಾತಾದರೆ ರಾಜೀನಾಮೆ ನೀಡುತ್ತೇನೆಂದು ಬರೆಸಿಕೊಳ್ಳಲಾಗಿದೆ.

ಆಗಲೇ ಕೆಲ ಶಾಸಕರ ಅಸಮಾಧಾನ
ಸಭೆಯಿಂದ ಹೊರಬಂದ ಕೆಲವು ಶಾಸಕರು ಪಕ್ಷದ ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಸಂವಿಧಾನದ ಹಕ್ಕಿಗೆ ತಡೆಯೊಡ್ಡುವ ನಿರ್ಧಾರ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆಂದು ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿಯಾಗಿದೆ.

ಉತ್ತರಾಖಂಡ ಭಯ
ಉತ್ತರಾಖಾಂಡ್ ನಲ್ಲಿ ಒಂಬತ್ತು ಶಾಸಕರ ಪಕ್ಷ ವಿರೋಧಿ ಚಟುವಟಿಕೆಯಿಂದ ಕಾಂಗ್ರೆಸ್ ಈ ನಿರ್ಧಾರಕ್ಕೆ ಬಂದಿರಬಹುದು ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಪಕ್ಷದ ಈ ನಿರ್ಧಾರದಿಂದ ಕಾಂಗ್ರೆಸ್ ನಗೆಪಾಟಲಿಗೆ ಗುರಿಯಾಗುವುದಂತೂ ಹೌದು.












Click it and Unblock the Notifications