Weather News: ದೆಹಲಿ, ಯುಪಿ ಸೇರಿದಂತೆ ಹಲವೆಡೆ ಮುಂದಿನ ಮೂರು ದಿನ ಗಾಳಿಯೊಂದಿಗೆ ಮಳೆ
ದೆಹಲಿ ಮೇ 11: ದೇಶದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ವಾತಾವರಣ ತಂಪಾಗಿದೆ. ಕಳೆದ ದಿನ ತೀವ್ರ ಗಾಳಿಯೊಂದಿಗೆ ಮಳೆಯಾಗಿದ್ದು ದೆಹಲಿ ಸೇರಿದಂತೆ ಇತರ ರಾಜ್ಯಗಳು ಇಂದು ಸಮಸ್ಯೆಯನ್ನು ಎದುರಿಸುವಂತಾಗಿದೆ. ಬೃಹತ್ ಮರ ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ಶುಕ್ರವಾರ ತಡರಾತ್ರಿ ದೆಹಲಿಯಲ್ಲಿ ಧೂಳಿನ ಗಾಳಿಯೊಂದಿಗೆ ಲಘು ಮಳೆಯಾಗಿದ್ದು ಮೇ ತಿಂಗಳ ಶಾಖದಿಂದ ಸ್ವಲ್ಪ ಪರಿಹಾರವನ್ನು ನೀಡಿದೆ. ನಗರದ ಕೆಲವೆಡೆ ಗಂಟೆಗೆ 77 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ. ಕೆಲವೆಡೆ ಲಘು ಮಳೆಯಾಗಿದ್ದು, ಕೆಲವೆಡೆ ಆಲಿಕಲ್ಲು ಮಳೆಯಾಗಿದೆ.

ಇದರಿಂದಾಗಿ ಶುಕ್ರವಾರ ಸಂಜೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಐಜಿಐ) ಕನಿಷ್ಠ 9 ವಿಮಾನಗಳನ್ನು ಜೈಪುರಕ್ಕೆ ತಿರುಗಿಸಲಾಗಿದೆ. ಅಲ್ಲದೆ ಇಂದೂ ಕೂಡ ಇದೇ ಪರಿಸ್ಥಿತಿ ಮುಂದುವರೆಯಲಿದ್ದು ಭಾರತೀಯ ಹವಾಮಾನ ಇಲಾಖೆ (IMD) ಧೂಳಿನ ಚಂಡಮಾರುತದ ಎಚ್ಚರಿಕೆಯನ್ನು ನೀಡಿದೆ. ಜನರು ಮನೆಯೊಳಗೆ ಇರಲು ಮತ್ತು ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಸಲಹೆ ನೀಡಿದೆ.
ಚಂಡಮಾರುತದ ಮುನ್ಸೂಚನೆ ನೀಡಿದ IMD
ಕಳೆದ ದಿನ ರಾತ್ರಿ 10 ಗಂಟೆಗೆ ಗಾಳಿಯ ವೇಗ ಉಜ್ವಾದಲ್ಲಿ ಗಂಟೆಗೆ 77 ಕಿಮೀ, ಪ್ರಗತಿ ಮೈದಾನದಲ್ಲಿ ಗಂಟೆಗೆ 63 ಕಿಮೀ ಮತ್ತು ಲೋಧಿ ರಸ್ತೆಯಲ್ಲಿ ಗಂಟೆಗೆ 61 ಕಿಮೀ ವೇಗದಲ್ಲಿ ಬೀಸಿದೆ. ಇದರಿಂದಾಗಿ ಮನೆಯೊಳಗೆ ಇರಿ, ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿ ಮತ್ತು ಸಾಧ್ಯವಾದರೆ ಪ್ರಯಾಣವನ್ನು ತಪ್ಪಿಸಿ ಎಂದು IMD ಸಲಹೆಯಲ್ಲಿ ತಿಳಿಸಿತ್ತು. ಮೇ 14ರವರೆಗೆ ಭಾಗಶಃ ಇದೇ ರೀತಿ ಗಾಳೀಯೊಂದಿಗೆ ಮೋಡ ಕವಿದ ವಾತಾವರಣವಿರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಚಂಡಮಾರುತದಿಂದಾಗಿ ದೆಹಲಿಯಲ್ಲಿ ಸಂಚಾರ ಸ್ಥಗಿತ
ಚಂಡಮಾರುತ ಸಂದರ್ಭದಲ್ಲಿ ಸುರಕ್ಷಿತ ಆಶ್ರಯವನ್ನು ಕಂಡುಕೊಳ್ಳಲು ಮತ್ತು ಮರಗಳ ಕೆಳಗೆ ಅಡಗಿಕೊಳ್ಳುವುದನ್ನು ತಪ್ಪಿಸಲು IMD ಜನರಿಗೆ ಸಲಹೆ ನೀಡಿದೆ. ಕಳೆದ ತೀವ್ರ ಗಾಳಿಗೆ ಲೋನಿ ದೇಹತ್, ಹಿಂಡನ್ ಏರ್ ಫೋರ್ಸ್ ಸ್ಟೇಷನ್, ಗಾಜಿಯಾಬಾದ್, ಇಂದಿರಾಪುರಂ, ಛಪ್ರೌಲಾ, ನೋಯ್ಡಾ, ದಾದ್ರಿ, ಗ್ರೇಟರ್ ನೋಯ್ಡಾ, ಗುರುಗ್ರಾಮ್, ಫರಿದಾಬಾದ್, ಮನೇಸರ್, ಬಲ್ಲಭಗಢ್, ಹಾಗೆಯೇ ಹರಿಯಾಣದ ಗೋಹಾನಾ, ಗನೌರ್, ಸೋನಿಪತ್, ರೋಹ್ಟಕ್ ಮತ್ತು ಖಾರ್ಖೋಡಾ ಪ್ರದೇಶಗಳು ತೀವ್ರ ಹಾನಿಗೊಳಗಾಗಿವೆ.
ಇಂದು ದೆಹಲಿಯಲ್ಲಿ ಹವಾಮಾನ ಹೇಗಿರುತ್ತದೆ?
ದೆಹಲಿಯಲ್ಲಿ ಕೆಲವು ದಿನಗಳವರೆಗೆ ತುಂತುರು ಮತ್ತು ಬಲವಾದ ಗಾಳಿ ಮುಂದುವರಿಯುತ್ತದೆ. IMDಯ ಮುನ್ಸೂಚನೆಯ ಪ್ರಕಾರ, ಮೇ 13ರವರೆಗೆ ದೆಹಲಿಯಲ್ಲಿ ಮಳೆ, ಬಲವಾದ ಗಾಳಿ ಮತ್ತು ಕೆಲವೊಮ್ಮೆ ಚಂಡಮಾರುತದ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಕನಿಷ್ಠ ತಾಪಮಾನ 27 ರಿಂದ 29 ರ ನಡುವೆ ಮತ್ತು ಗರಿಷ್ಠ ತಾಪಮಾನವು 37 ರಿಂದ 39 ರ ನಡುವೆ ಉಳಿಯಬಹುದು.
ಯುಪಿಯಲ್ಲಿ ಮಳೆ ಮತ್ತು ಆಲಿಕಲ್ಲು ಮಳೆ ಎಚ್ಚರಿಕೆ
ಈ ಚಂಡಮಾರುತದ ನಡುವೆ ಉತ್ತರ ಪ್ರದೇಶದ ಜನರು ಶಾಖದ ಅಲೆಯಿಂದ ಸಾಕಷ್ಟು ಪರಿಹಾರವನ್ನು ಪಡೆದಿದ್ದಾರೆ. ಆದರೆ ತೀವ್ರ ಗಾಳಿಯಿಂದ ರೈತರ ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದೆ. ಹವಾಮಾನ ಇಲಾಖೆ ಯುಪಿಯಲ್ಲಿ ಹಳದಿ ಎಚ್ಚರಿಕೆಯನ್ನು ನೀಡಿದೆ. 3 ದಿನಗಳ ಕಾಲ ಮಳೆ, ಬಿರುಗಾಳಿ ಮತ್ತು ಧೂಳಿನ ಬಿರುಗಾಳಿಯ ಸಾಧ್ಯತೆಗಳಿವೆ. ಮೇ 13 ರವರೆಗೆ ಮಳೆ ಮತ್ತು ಆಲಿಕಲ್ಲು ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ.
ಇಲ್ಲಿನ ಇತರೆ ರಾಜ್ಯಗಳ ಸ್ಥಿತಿ ಏನು ಗೊತ್ತಾ?
*ಮೇ 10 ರಿಂದ 12: ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರ, ಜಾರ್ಖಂಡ್, ಒಡಿಶಾದಲ್ಲಿ ಮಳೆ, ಗುಡುಗು ಸಹಿತ ಮಳೆ ಎಚ್ಚರಿಕೆ ನೀಡಲಾಗಿದೆ.
*ಮೇ 10: ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾದಲ್ಲಿ ಭಾರಿ ಮಳೆಯಾಗಲಿದೆ.
*ಮೇ 11: ಮಧ್ಯಪ್ರದೇಶದಲ್ಲಿ ಆಲಿಕಲ್ಲು ಮಳೆ ನಿರೀಕ್ಷೆಯಿದೆ.
*ಮೇ 12ರವರೆಗೆ: ರಾಜಸ್ಥಾನದಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ.
*ಮೇ 13 ರವರೆಗೆ: ಮಹಾರಾಷ್ಟ್ರ, ಛತ್ತೀಸ್ಗಢ, ತಮಿಳುನಾಡು, ಪುದುಚೇರಿ, ಕಾರೈಕಲ್, ಕರಾವಳಿ ಆಂಧ್ರಪ್ರದೇಶ, ಯಾನಂ, ರಾಯಲಸೀಮಾ, ತೆಲಂಗಾಣ, ಉತ್ತರ ಆಂತರಿಕ ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಹರಿಯಾಣ, ಚಂಡೀಗಢ, ಪಂಜಾಬ್ನಲ್ಲಿ ಗುಡುಗು ಸಹಿತ ಮಳೆ , ಚಂಡಮಾರುತದೊಂದಿಗೆ ಮಳೆಯಾಗುವ ಸಾಧ್ಯತೆಗಳಿವೆ.












Click it and Unblock the Notifications