'ಪಾಕಿಸ್ತಾನವನ್ನು ಎಫ್ಎಟಿಎಫ್ನಲ್ಲಿ ಕಪ್ಪುಪಟ್ಟಿಗೆ ಸೇರಿಸಲು ಈ ಹೇಳಿಕೆಯನ್ನು ಬಳಸಿಕೊಳ್ಳಬಹುದು'
ನವದೆಹಲಿ, ಅಕ್ಟೋಬರ್ 30: ಪುಲ್ವಾಮಾ ಉಗ್ರರ ದಾಳಿಯಲ್ಲಿ ಇಮ್ರಾನ್ ಖಾನ್ ಸರ್ಕಾರದ ಪಾತ್ರದ ಬಗ್ಗೆ ಪಾಕಿಸ್ತಾನದ ಸಚಿವ ಫವಾದ್ ಚೌಧರಿ ಒಪ್ಪಿಕೊಂಡಿರುವುದಕ್ಕೆ ಧನ್ಯವಾದ ಸಲ್ಲಿಸಿರುವ ಕೇಂದ್ರ ಸಚಿವ ವಿ.ಕೆ. ಸಿಂಗ್, ಪಾಕಿಸ್ತಾನವನ್ನು ಎಫ್ಎಟಿಎಫ್ನಿಂದ ಕಪ್ಪುಪಟ್ಟಿಗೆ ಸೇರಿಸುವ ಪ್ರಯತ್ನಕ್ಕೆ ಈ ಹೇಳಿಕೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಸರ್ಕಾರಕ್ಕೆ ಕೋರಿದ್ದಾರೆ.
'40 ಯೋಧರ ಸಾವಿಗೆ ಕಾರಣವಾದ ಪುಲ್ವಾಮಾ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಇದೆ ಎಂಬ ಭಾರತದ ನಿಲುವನ್ನು ಪಾಕ್ ಸಚಿವ ಫವಾದ್ ಚೌಧರಿ ಅವರ ಒಪ್ಪಿಗೆ ಅನುಮೋದಿಸಿದೆ. ಪುಲ್ವಾಮಾ ದಾಳಿಗೆ ಸಂಬಂಧಿಸಿದ ಸತ್ಯವನ್ನುಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು. ಈ ಘಟನೆಯ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ನಾವು ಆರಂಭದಿಂದಲೂ ಹೇಳುತ್ತಾ ಬಂದಿದ್ದೆವು. ಹಾಗಾಗಿ ಭಾರತ ಸರ್ಕಾರವು ಪಾಕಿಸ್ತಾನದಲ್ಲಿ ನೆಲೆಯೂರಿದ್ದ ಉಗ್ರರ ವಿರುದ್ಧ ಕ್ರಮ ತೆಗೆದುಕೊಂಡಿತ್ತು' ಎಂದು ವಿಕೆ ಸಿಂಗ್ ಹೇಳಿದ್ದಾರೆ.
'ನಮ್ಮ ಸರ್ಕಾರವು ಪಾಕಿಸ್ತಾನವು ಒಪ್ಪಿಕೊಂಡಿರುವ ಈ ಸಂಗತಿಯನ್ನು ಬಳಸಿಕೊಂಡು ಪಾಕಿಸ್ತಾನವನ್ನು ಎಫ್ಎಟಿಎಫ್ ನಿಂದ ಕಪ್ಪುಪಟ್ಟಿಗೆ ಸೇರಿಸುವ ಅಗತ್ಯ ಹಾಗೂ ಯಾರೂ ಪಾಕಿಸ್ತಾನಕ್ಕೆ ನೆರವು ನೀಡಬಾರದು ಎಂಬುದನ್ನು ಜಗತ್ತಿಗೆ ತಿಳಿಸಲಿದೆ ಎನ್ನುವ ಖಾತರಿಯಿದೆ' ಎಂದು ತಿಳಿಸಿದ್ದಾರೆ.

ಪುಲ್ವಾಮಾ ಭಯೋತ್ಪಾದನಾ ದಾಳಿ ಬಳಿಕ ಭಾರತ ಸರ್ಕಾರವನ್ನು ಪ್ರಶ್ನಿಸಿದ್ದ ವಿರೋಧಪಕ್ಷದ ಮುಖಂಡರ ವಿರುದ್ಧ ವಿಕೆ ಸಿಂಗ್ ಹರಿಹಾಯ್ದಿದ್ದಾರೆ.
'ವಿರೋಧಪಕ್ಷಗಳಿಗೆ ಸಂಬಂಧಿಸಿದಂತೆ ಅವರಿಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕಿದೆ. ಆದರೆ ನಿಮ್ಮ ದೇಶದಲ್ಲಿ ಭಯೋತ್ಪಾದನೆ ಪ್ರಾಯೋಜಿಸುತ್ತಿರುವ ದೇಶದೆಡೆಗೆ ಅವರು ಪ್ರೀತಿ ತೋರಿಸಲು ಆರಂಭಿಸಿದಾಗ ಅಂತಹ ವ್ಯಕ್ತಿಗಳನ್ನು ಹೇಗೆ ನೀವು ವರ್ಗೀಕರಿಸುತ್ತೀರಿ? ನಾನು ಅವರನ್ನು ಭಾರತ ವಿರೋಧಿಗಳೆಂದು ವರ್ಗೀಕರಿಸುತ್ತೇನೆ' ಎಂದು ಕಿಡಿಕಾರಿದ್ದಾರೆ.












Click it and Unblock the Notifications