ಸದನದಿಂದ ನರೇಂದ್ರ ಮೋದಿ ಹೊರನಡೆದಿದ್ದು ಏಕೆ?
ಚೆನ್ನೈ, ಡಿಸೆಂಬರ್, 02: ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಕಲಾಪದಿಂದ ಎದ್ದು ನಡೆದ ಘಟನೆಗೆ ಸಂಸತ್ ಭವನ ಬುಧವಾರ ಸಾಕ್ಷಿಯಾಯಿತು. ಕೇಂದ್ರ ಸಚಿವ ವಿ.ಕೆ.ಸಿಂಗ್ ರಾಜೀನಾಮೆ ಒತ್ತಾಯಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದವು. ಸ್ಪೀಕರ್ ಮಾತನ್ನೂ ಆಲಿಸದೇ ಗೊಂದಲದ ವಾತಾವರಣ ನಿರ್ಮಾಣವಾದಾಗ ಮನನೊಂದ ಪ್ರಧಾನಿ ಕಲಾಪದಿಂದ ಹೊರ ನಡೆದರು.
ಸುಮಾರು 40 ನಿಮಿಷಗಳ ಗಲಾಟೆ ನಡೆಯಿತು. ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರತಿಭಟನೆ ನಡೆಸುತ್ತಿದ್ದ ಸಂಸದರಿಗೆ ಸುಮ್ಮನಿರುವಂತೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ.[ದೇಶಭಕ್ತಿ ಮನದೊಳಗಿರಲಿ, ಪ್ರದರ್ಶನ ಬೇಕಿಲ್ಲ: ಮೋದಿ]
ದಲಿತರ ವಿರುದ್ಧ 'ಅವಹೇಳನಕಾರಿ ಹೇಳಿಕೆ' ನೀಡಿರುವ ಸಚಿವ .ವಿ.ಕೆ. ಸಿಂಗ್ ರಾಜೀನಾಮೆ ನೀಡಬೇಕೆಂದು ಒಂದೇ ಸಮನೆ ಒತ್ತಾಯಿಸಿದರು 'ಸಿಂಗ್ ರಾಜೀನಾಮೆ ನೀಡಲಿ' ಎಂದು ವಿಪಕ್ಷದ ನಾಯಕರು ಆಗ್ರಹಿಸುತ್ತಲೇ ಇದ್ದರು. ನಂತರ ಪ್ರತಿಭಟನಾನಿರತ ಸಂಸದರು ಸದನದಿಂದ ಹೊರಕ್ಕೆ ಹೋದರು. ಇದೆಲ್ಲವನ್ನು ಕಂಡು ಮನನೊಂದ ಪ್ರಧಾನಿ ಸಹ ಕಲಾಪದಿಂದ ಹೊರಕ್ಕೆ ನಡೆದರು.
ವಿಕೆ ಸಿಂಗ್ ನೀಡಿದ್ದ ಹೇಳಿಕೆ ಏನು?
ಕಳೆದ ತಿಂಗಳು ಹರ್ಯಾಣದಲ್ಲಿ ನಡೆದ ದಲಿತ ಮಕ್ಕಳ ಹತ್ಯೆ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ವಿ.ಕೆ.ಸಿಂಗ್, ಎಲ್ಲೋ ನಾಯಿಗೆ ಕಲ್ಲು ಹೊಡೆದರೆ ಕೇಂದ್ರವನ್ನು ದೂಷಿಸುವುದು ಸರಿಯಲ್ಲ ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಮನವೊಲಿಕೆಗೆ ನಾಯ್ಡು ಯತ್ನ
ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಸಹ ಸಂಸದರ ಮನವೊಲಿಕೆಗೆ ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ. ಸಂಸದರ ಗಲಾಟೆ ವಿಕೋಪಕ್ಕೆ ತಿರುಗಿ ಯಾವ ಚರ್ಚೆಯೂ ನಡೆಯಲು ಸಾಧ್ಯವಾಗಲಿಲ್ಲ. ಸದನವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಪ್ಯಾರಿಸ್ ನಿಂದ ಬಂದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್ ಪ್ರಯಾಣವನ್ನು ಮುಗಿಸಿ ನನೇರವಾಗಿ ಸಂಸತ್ ಕಲಾಪಕ್ಕೆ ಆಗಮಿಸಿದ್ದರು. ಪರಿಸರ ಸಂರಕ್ಷಣೆ ಮತ್ತು ದೇಶಭಕ್ತಿಯ ಕುರಿತು ಮಂಗಳವಾರ ಮಾತನಾಡಿದ್ದರು.
ಕಾಂಗ್ರೆಸ್ ಬಿಜೆಪಿ ಜಟಾಪಟಿ
ಬುಧವಾರ ಸಹ ಕಲಾಪವನ್ನು ಅಸಹಿಷ್ಣುತೆ, ವಿಕೆ ಸಿಂಗ್ ಪ್ರಕರಣ ನುಂಗಿಹಾಕಿತು. ಸರ್ಕಾರದ ಪರವಾಗಿ ಶಾಸನ ಮಂಡಿಸಲು ಮಾಡಿಕೊಂಡ ಸಿದ್ಧತೆಗಳು ಗೊಂದಲಗಳ ಕಾರಣದಿಂದ ವ್ಯರ್ಥವಾದವು.
ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಸ್ವರಾಜ್
ಸರ್ಕಾರದ ಉನ್ನತ ಮೂಲಗಳು ಹೇಳಿರುವ ಪ್ರಕಾರ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮುಂದಿನ ವಾರ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಮೋದಿ ಮತ್ತು ನವಾಜ್ ಷರೀಫ್ ಪ್ಯಾರಿಸ್ ನಲ್ಲಿ ಭೇಟಿಯಾದ ನಂತರ ಈ ಬೆಳವಣಿಗೆ ನಡೆದಿದೆ.