ಯೋಗಿಯಿಂದಾಗಿ ಗ್ರಾಮಸ್ಥರಿಗೆ ಸೋಪು ಶಾಂಪೂ ಭಾಗ್ಯ!
ಖುಷಿನಗರ್ (ಉತ್ತರಪ್ರದೇಶ), ಮೇ 27 : ಹಳ್ಳಿಗೆ ಮುಖ್ಯಮಂತ್ರಿ ಬರುತ್ತಾರೆಂದರೆ ಊರು ಇದ್ದಕ್ಕಿದ್ದಂತೆ ಶುಭ್ರವಾಗುತ್ತದೆ. ರಸ್ತೆಗಳಿಗೆ ಡಾಂಬರು ಬಳಿಯಲಾಗುತ್ತದೆ, ಕಿತ್ತುಹೋದ ಗೋಡೆಗಳು ಬಣ್ಣ ಕಾಣುತ್ತವೆ. ಆದರೆ, ಅವರನ್ನು ಭೇಟಿಯಾಗಲು ಬರುವ ಜನರು ಸ್ವಚ್ಛವಾಗಿರಲೆಂದು ಸೋಪು, ಶಾಂಪೂ ನೀಡಿದ್ದನ್ನು ಎಲ್ಲಾದರೂ ಕೇಳಿದ್ದೀರಾ?
ಹೌದು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬರುವ ಮುನ್ನ, ಅವರನ್ನು ಭೇಟಿಯಾಗುವ ಜನರು ಸ್ವಚ್ಛವಾಗಿರಲೆಂದು ಮತ್ತು ಗಬ್ಬು ನಾರದಿರಲೆಂದು ಅವರಿಗೆಲ್ಲ ಸೋಪು ಮತ್ತು ಶಾಂಪೂ ಜಿಲ್ಲಾಡಳಿತ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಮುಸಾಹರ್ ಜನಾಂಗದವರ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅವರು ಹಳ್ಳಿಗೆ ಆಗಮಿಸುವ ಮೊದಲೇ ರಸ್ತೆಗಳು ಮಟ್ಟಸವಾದವು, ಶೌಚಾಲಯಗಳು ಲಕಲಕ ಅಂದವು, ಬೀದಿಗಳು ಝಗಮಗ ಅಂದವು. ಜೊತೆಗೆ ಅವರನ್ನು ಭೇಟಿಯಾಗುವ ಜನರೂ ಘಮಘಮಿಸುವಂತಾದರು.
ಹೀಗೆ ಮಾಡಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಗ್ರಾಮಸ್ಥರಿಗೆ ಸೋಪು, ಶಾಂಪೂ ನೀಡಿದ್ದಕ್ಕೆ ವಿವಾದದ ಬಣ್ಣ ಹಚ್ಚುತ್ತಿದ್ದಾರೆ. ಆದರೆ, ಯೋಗಿ ಬೆಂಬಲಿಗರು, ಇದರಲ್ಲಿ ತಪ್ಪೇನು, ಹಳ್ಳಿಗರು ಸ್ವಚ್ಛವಾಗಿ ಕಂಡರೆ ಯಾಕೆ ವಿವಾದ ಎಬ್ಬಿಸಬೇಕು ಎಂದು ವಿವಾದವನ್ನು ತಣ್ಣಗಾಗಿಸಲು ಯತ್ನಿಸುತ್ತಿದ್ದಾರೆ.
ಒಟ್ಟಿನಲ್ಲಿ ಯೋಗಿ ಏನು ಮಾಡಿದರೂ ಸುದ್ದಿಯೇ. ರೋಡ್ ರೋಮಿಯೋಗಳನ್ನು ಅಟ್ಟಿಸಿದರೂ ಸುದ್ದಿ, ಗೋಹತ್ಯೆ ನಿಲ್ಲಿಸಿದರೂ ಸುದ್ದಿ, ರೈತರ ಸಾಲ ಮನ್ನಾ ಮಾಡಿದರೂ ಸುದ್ದಿ, ಕರ್ನಾಟಕಕ್ಕೆ ಬರುತ್ತಾರೆಂದರೂ ಸುದ್ದಿಯೆ. ಇತ್ತೀಚೆಗೆ ಹತನಾದ ಬಿಎಸ್ಎಫ್ ಯೋಧನ ಮನೆಗೆ ಹೋದಾಗ ಆ ಮನೆಗೆ ಸೋಫಾ ತರಿಸಿದ್ದು ಕೂಡ ಭಾರೀ ಸುದ್ದಿಯಾಗಿತ್ತು.












Click it and Unblock the Notifications