ಸಾಲ ಮಾಡಿ ತುಪ್ಪ ತಿಂದ ಮಲ್ಯಗೆ ಬಂಧನ ಭೀತಿ
ಬೆಂಗಳೂರು, ಮಾರ್ಚ್, 05: ಮೈ ತುಂಬಾ ಸಾಲ ಮಾಡಿಕೊಂಡಿರುವ ವಿಜಯ್ ಮಲ್ಯ ನಿಧಾನವಾಗಿ ಕಾನೂನಿನ ಕುಣಿಕೆಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಬ್ಯಾಂಕ್ ಗಳ ಮನವಿ ಹಿನ್ನೆಲೆಯಲ್ಲಿ ವಿಜಯ್ ಮಲ್ಯ ಅವರಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇದರಿಂದ ಮಲ್ಯಗೆ ಬಂಧನ ಭೀತಿಯೂ ಎದುರಾಗಿದೆ.
ಮಲ್ಯ ಮಾಲೀಕತ್ವದ ಕಿಂಗ್ಫಿಷರ್ ಏರ್ಲೈನ್ಸ್ ಮತ್ತು ಯುನೆಟೆಡ್ ಬ್ರೇವರೀಸ್ ಹೋಲ್ಡಿಂಗ್ ಸಂಸ್ಥೆಗಳಿಗೆ ಸಾಲ ನೀಡಿದ್ದ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ 13 ಬ್ಯಾಂಕ್ಗಳು ಸಲ್ಲಿಕೆ ಮಾಡಿರುವ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.['ಅರುವತ್ತಕ್ಕೆ ಅರಳು ಮರಳು, ಅಡ್ವಾಣಿಯಂತಾದ ಮಲ್ಯ!']
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಕಿಂಗ್ಫಿಷರ್ ಏರ್ಲೈನ್ಸ್ ಲಿಮಿಟೆಡ್, ಯುನೆಟೈಟ್ ಬ್ರೇವರೀಸ್ (ಹೋಲ್ಡಿಂಗ್ಸ್) ಲಿಮಿಟೆಡ್, ಡಾ.ವಿಜಯ್ ಮಲ್ಯ ಮತ್ತು ಕಿಂಗ್ಫಿಶರ್ ಫೈನೆಸ್ಟ್ (ಇಂಡಿಯಾ) ಲಿಮಿಟೆಡ್ಗೆ ನೋಟಿಸ್ ಜಾರಿ ಮಾಡಿದೆ. ಹಾಗಾಗಿ ವಿದೇಶಕ್ಕೆ ಹಾರಿ ನೆಲೆಸಬೇಕು ಎಂದುಕೊಂಡಿದ್ದ ಮಲ್ಯ ಆಸೆಗೆ ತಣ್ಣೀರು ಎರಚಿದಂತಾಗಿದೆ.
ಲಂಡನ್ ಗೆ ಹಾರಲಿದ್ದ ಮಲ್ಯ
ಲಂಡನ್ ಗೆ ತೆರಳಲು ಮುಂದಾಗಿರುವ ಮಲ್ಯ ಅವರ ಪಾಸ್ ಪೋರ್ಟ್ ವಶ ಪಡಿಸಿಕೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೋರಿತ್ತು. ಅಲ್ಲದೇ ಸಾಲ ನೀಡಿದ ಇತರ ಬ್ಯಾಂಕ್ ಗಳು ಒಕ್ಕೂಟ ಮಾಡಿಕೊಂಡಿದ್ದವು.
ರಾಜೀನಾಮೆ ನೀಡಿದ್ದ ಮಲ್ಯ
ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ನ ಚೇರ್ಮನ್ ಹುದ್ದೆಗೆ ರಾಜೀನಾಮೆ ನೀಡಿದ್ದ ಮಲ್ಯ ಇಂಗ್ಲೆಂಡ್ ತೆರಳಿ ಮಕ್ಕಳೊಂದಿಗೆ ವಾಸ ಮಾಡಲಿದ್ದೇನೆ ಎಂದು ಹೇಳಿದ್ದೇ ಇಂದು ಅವರಿಗೆ ಮುಳುವಾಗಿದೆ.
7,800 ಸಾವಿರ ಕೋಟಿ ರು. ಸಾಲ
ಒಟ್ಟು 13 ಬ್ಯಾಂಕ್ಗಳಿಗೆ 7,800 ಸಾವಿರ ಕೋಟಿ ರು. ಸಾಲ ಪಡೆದಿದ್ದಾರೆ. ಈ ಎಲ್ಲ ಬ್ಯಾಂಕುಗಳಿಗೆ ಮರುಪಾವತಿ ಮಾಡಬೇಕಿದ್ದು ಅವರ ಪಾಸ್ ಪೋರ್ಟ್ ಮತ್ತು ವೀಸಾಕ್ಕೂ ಕುತ್ತು ಎದುರಾಗಿದೆ.
ಮುಂಬೈ ಮನೆ ಹರಾಜು
ಎಸ್ಬಿಐ ಒಕ್ಕೂಟ ಮುಂಬೈನಲ್ಲಿರುವ ಕಿಂಗ್ ಫಿಷರ್ ಹೌಸನ್ನು ಹರಾಜು ಹಾಕಲು ನಿರ್ಧರಿಸಿದೆ. ಮುಂಬೈ ಮಹಾನಗರದ ಈ ಕಟ್ಟಡ 150೦ ಕೋಟಿ ರು. ಬೆಲೆಬಾಳಲಿದೆ. ನಿಗದಿಯಂತೆ ಮಾರ್ಚ್ 17ರಂದು ಮುಂಬೈನ ಕಿಂಗ್ ಫಿಷರ್ ಹೌಸ್ ನ್ನು ಹರಾಜು ಮಾಡಲು ನಿರ್ಧರಿಸಲಾಗಿದೆ.
ಮುಂದೇನು?
ಮಲ್ಯ ಅವರಿಗೆ ವಿದೇಶಕ್ಕೆ ತೆರಳಲು ಅವಕಾಶ ಸಿಗಲ್ಲ. ಮಾಡಿಕೊಂಡಿರುವ ಸಾಲ ಅವರ ಇತರೇ ಕಂಪನಿಗಳ ಆಸ್ತಿಯ ಮೇಲೂ ಪರಿಣಾಮ ಬೀರಲಿದೆ.