ರಾಮಮಂದಿರ ನಿರ್ಮಾಣಕ್ಕೆ ಗಡುವು ಹಾಕಿದ ವಿಎಚ್ಪಿ
ನವದೆಹಲಿ, ಮೇ 11: ಶ್ರೀರಾಮಚಂದ್ರ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವಿಶ್ವ ಹಿಂದೂ ಪರಿಷತ್ ಗಡುವು ಹಾಕಿಕೊಂಡಿದೆ. ಡಿಸೆಂಬರ್ 31, 2016 ರೊಳಗೆ ನಿರ್ಮಾಣ ಕಾರ್ಯ ಕೈಗೊಳ್ಳಲು ಹಿಂದೂ ಸಂಘಟನೆ ಮುಖಂಡರು ನಿರ್ಧರಿಸಿದ್ದಾರೆ.
ಡಿ. 31ಕ್ಕೆ ಮುನ್ನವೇ ನಿರ್ಮಾಣ ಆರಂಭಿಸಲಾಗುವುದು. ಸುಪ್ರೀಂಕೋರ್ಟ್ ತೀರ್ಪಿಗೆ ಕಾಯುವುದರಲ್ಲಿ ಅರ್ಥವಿಲ್ಲ. ಡಿಸೆಂಬರ್ ಅಂತ್ಯಕ್ಕೆ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದು ಉಜ್ಜಯಿನಿಯ ಸಿಂಹಸ್ತ ಮಹಾಕುಂಭಮೇಳದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ)ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಘೋಷಿಸಿದ್ದಾರೆ. [ಬಿಜೆಪಿ ಅಧಿಕಾರ ಅವಧಿಯಲ್ಲೇ ರಾಮಮಂದಿರ ನಿರ್ಮಾಣ]

ಉಜ್ಜಯಿನಿಯಲ್ಲಿ ನಡೆದಿರುವ ಕುಂಭಮೇಳಕ್ಕೆ ದೇಶದೆಲ್ಲೆಡೆಯಿಂದ ಸಾಧು, ಸನ್ಯಾಸಿಗಳು ಹಾಗೂ ಭಕ್ತಾದಿಗಳು ಆಗಮಿಸಿದ್ದು, ಬೃಹತ್ ಸಭೆಯನ್ನುದ್ದೇಶಿಸಿ ಚಂಪತ್ರಾಯ್ ಅವರು ಮಾತನಾಡಿದರು.
ಮಂದಿರದ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಶೇ.90ರಷ್ಟು ಕೆಲಸಗಳು ಪೂರ್ಣಗೊಂಡಿದ್ದು ಇನ್ನು ಉಳಿದಿರುವ ಶೇ.10ರಷ್ಟು ಕೆಲಸವನ್ನು ಸಾಧು ಸಂತರನ್ನು ಬಳಸಿಕೊಂಡು ಮಾಡಲಾಗುವುದು ಎಂದರು.
ಉಜ್ಜಯಿನಿಯಲ್ಲಿ ನಡೆಯುವ ವೈಚಾರಿಕ ಮಹಾಕುಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುವುದಕ್ಕೂ ಮುಂಚಿತವಾಗಿ ಈ ಹೇಳಿಕೆ ನೀಡಿರುವುದು ಗಮನಾರ್ಹ.
ಮೋದಿ ಸರ್ಕಾರದ ಅವಧಿಯಲ್ಲೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಹೊಸ ವರ್ಷದ ಆರಂಭದಲ್ಲಿ ನೀಲಿನಕ್ಷೆ ಪ್ರಕಟಿಸಿದ್ದ ಸುಬ್ರಮಣಿಯನ್ ಸ್ವಾಮಿ ಅವರು ನಂತರ ಪ್ಯಾಕೇಜ್ ಡೀಲ್ ಬಗ್ಗೆ ಮಾತನಾಡಿದ್ದರು. ಹಿಂದುಗಳಾದ ನಾವು ಮುಸ್ಲಿಮರಿಗೆ ಕೃಷ್ಣ ದೇವರ ಹೆಸರಿನಲ್ಲಿ ಪ್ಯಾಕೆಜ್ ನೀಡುತ್ತಿದ್ದು, ಮೂರು ದೇವಾಲಯಗಳನ್ನು ನಮಗೆ ನೀಡಿ ಮತ್ತು 39, 997 ಮಸೀದಿಗಳನ್ನು ಇಟ್ಟುಕೊಳ್ಳಿ ಎಂದು ಆಫರ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications