Vande Bharat Express: ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ- ಈ ವರೆಗೆ ಎಷ್ಟು ಕೋಟಿ ನಷ್ಟ ಗೊತ್ತೇ? ಇಲ್ಲಿದೆ ಮಾಹಿತಿ
ನವದೆಹಲಿ, ಜುಲೈ 28: ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದ ಪ್ರಕರಣಗಳ ವರದಿಯಾಗುತ್ತಲೇ ಇವೆ. ಈ ರೈಲುಗಳು ಶುರುವಾದಾಗಿನಿಂದ ದೇಶದಾದ್ಯಂತ ಕಲ್ಲು ತೂರಾಟದಂತಹ ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಈ ಘಟನೆಗಳಿಂದ ಭಾರತೀಯ ರೈಲ್ವೆಗೆ ಎಷ್ಟು ನಷ್ಟವಾಗಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಿದೆ.
2019 ರಿಂದ ನಡೆದ ಕಲ್ಲು ತೂರಾಟದ ಘಟನೆಗಳಲ್ಲಿ ವಂದೇ ಭಾರತ್ ರೈಲುಗಳಿಗೆ ಅರ್ಧ ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದಿಂದಾಗಿ ಭಾರತೀಯ ರೈಲ್ವೆಗೆ 55.60 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ವಾರ ಲೋಕಸಭೆಗೆ ತಿಳಿಸಿದ್ದಾರೆ.
'2019, 2020, 2021, 2022 ಮತ್ತು 2023 (ಜೂನ್ ವರೆಗೆ) ರಲ್ಲಿ ವಂದೇ ಭಾರತ್ ರೈಲುಗಳಿಗೆ ಕಲ್ಲು ಹೊಡೆಯಲಾಗಿದೆ. ಈ ಘಟನೆಗಳಲ್ಲಿ ಉಂಟಾದ ಹಾನಿಯಿಂದಾಗಿ ಭಾರತೀಯ ರೈಲ್ವೇಯು 55.60 ಲಕ್ಷ ರೂಪಾಯಿ ನಷ್ಟವನ್ನು ಅನುಭವಿಸಿದೆ' ಎಂದು ಸಚಿವರು ಹೇಳಿದ್ದಾರೆ.
ಈ ಕಲ್ಲು ತೂರಾಟ ಪ್ರಕರಣಗಳಲ್ಲಿ ಭಾಗಿಯಾಗಿರುವ ಒಟ್ಟು 151 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.

'ಕಲ್ಲು ತೂರಾಟದಲ್ಲಿ ಯಾವುದೆ ಪ್ರಯಾಣಿಕರ ಪ್ರಾಣಕ್ಕೆ ಹಾನಿ ಆಗಿಲ್ಲ. ಕಳ್ಳತನ ಹಾಗೂ ಪ್ರಯಾಣಿಕರ ಸಾಮಾನುಗಳಿಗೆ ಹಾನಿಯಾಗಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ' ಎಂದು ಜುಲೈ 26 ರಂದು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಸೇರಿದಂತೆ 2020, 2021 ಮತ್ತು 2022 ರ ಅವಧಿಯಲ್ಲಿ ರೈಲುಗಳ ಮೇಲೆ 4,233 ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ ಎಂದು ಸಚಿವಾಲಯವು ರಾಜ್ಯಸಭೆಗೆ ತಿಳಿಸಿದೆ. ವಂದೇ ಭಾರತ್ ಸೇರಿದಂತೆ ಎಲ್ಲಾ ರೈಲುಗಳಲ್ಲಿ ಈ ಘಟನೆಗಳು ನಡೆದಿವೆ ಎಂದು ಹೇಳಿದೆ.
ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2022 ರಲ್ಲಿ, ಚಲಿಸುವ ರೈಲುಗಳ ಮೇಲೆ ಕಲ್ಲು ತೂರಾಟದ ಕನಿಷ್ಠ 1,503 ಪ್ರಕರಣಗಳನ್ನು ರೈಲ್ವೆ ರಕ್ಷಣಾ ಪಡೆ ದಾಖಲಿಸಿದೆ. ಈ ಘಟನೆಗಳಿಗೆ ಸಂಬಂಧಿಸಿದಂತೆ ಈ ವರೆಗೆ 488 ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಅದೇ ಅವಧಿಯಲ್ಲಿ ನಡೆದ ಪ್ರತಿಭಟನೆಗಳಿಂದಾಗಿ ರೈಲ್ವೆ ಆಸ್ತಿಗೆ ಹಾನಿಯಾಗಿದೆ. ಇದರಿಂದಾಗಿ ಭಾರತೀಯ ರೈಲ್ವೇ ಸುಮಾರು 262 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ ಎಂದು ಸಚಿವಾಲಯ ಹೇಳಿದೆ. 2020ರಲ್ಲಿ ಈ ನಷ್ಟ 1.78 ಕೋಟಿ ರೂ. ಆಗಿದೆ. 2021ರಲ್ಲಿ 0.68 ಕೋಟಿ ಹಾಗೂ 2022ರಲ್ಲಿ ಗರಿಷ್ಠ 259.44 ಕೋಟಿ ರೂ. ಆಗಿದೆ ಎಂದು ತಿಳಿದುಬಂದಿದೆ.
ಕಲ್ಲು ತೂರಾಟದ ಭೀತಿ ಮತ್ತು ಅದರ ಪರಿಣಾಮಗಳ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದ್ದೇವೆ. ರೈಲ್ವೆ ಇಲಾಖೆಯು ಹಳಿಯ ಪಕ್ಕದ ಜನವಸತಿ ಪ್ರದೇಶಗಳಲ್ಲಿ ಆಪರೇಷನ್ ಸಾಥಿ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸುತ್ತಿದೆ ಎಂದು ಸರ್ಕಾರ ಹೇಳಿದೆ.
ತಕ್ಷಣದ ಸಹಾಯಕ್ಕಾಗಿ ಪ್ರಯಾಣಿಕರು ರೈಲ್ ಮದದ್ ಪೋರ್ಟಲ್ನಲ್ಲಿ ನೇರವಾಗಿ ಅಥವಾ ಸಹಾಯವಾಣಿ ಸಂಖ್ಯೆ 139 ಮೂಲಕ ದೂರುಗಳನ್ನು ನೀಡಬಹುದು ಎಂದು ರೈಲ್ವೆ ಇಲಾಖೆ ಹೇಳಿದೆ.

ರೈಲ್ವೆಯು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪ್ರಯಾಣಿಕರೊಂದಿಗೆ ನಿಯಮಿತ ಸಂಪರ್ಕದಲ್ಲಿದೆ. ಟ್ವಿಟರ್, ಫೇಸ್ಬುಕ್, ಕೂ ಇತ್ಯಾದಿಗಳನ್ನು ಬಳಸಲಾಗುತ್ತಿದೆ ಎಂದು ತಿಳಿಸಿದೆ.












Click it and Unblock the Notifications