ಶಿಕ್ಷಕರ ದಿನಾಚರಣೆಯೊಳಗೆ ಎಲ್ಲಾ ಶಿಕ್ಷಕರಿಗೆ ಲಸಿಕೆ ನೀಡಿ; ಆರೋಗ್ಯ ಸಚಿವ
ನವದೆಹಲಿ, ಆಗಸ್ಟ್ 25: ಶಿಕ್ಷಕರ ದಿನಾಚರಣೆಯೊಳಗೆ ದೇಶದ ಎಲ್ಲಾ ಶಿಕ್ಷಕರಿಗೆ ಕೊರೊನಾ ಲಸಿಕೆ ನೀಡಿ ಎಂದು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ.
ಈ ತಿಂಗಳಿನಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಎರಡು ಕೋಟಿ ಹೆಚ್ಚುವರಿ ಡೋಸ್ಗಳ ಕೊರೊನಾ ಲಸಿಕೆಯನ್ನು ವಿತರಣೆ ಮಾಡುತ್ತಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಬುಧವಾರ ತಿಳಿಸಿದ್ದಾರೆ.
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಾಸಿಕ ಡೋಸ್ ನೀಡುವ ಕೇಂದ್ರದ ಪ್ರಸ್ತುತ ಯೋಜನೆಯಲ್ಲಿ ಹೆಚ್ಚುವರಿ ಲಸಿಕೆಗಳನ್ನು ನೀಡಲಾಗುತ್ತಿದೆ ಎಂದು ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಈ ದಿನದೊಳಗೆ ದೇಶದ ಎಲ್ಲಾ ಶಿಕ್ಷಕರಿಗೆ ಆದ್ಯತೆಯಲ್ಲಿ ಕೊರೊನಾ ಲಸಿಕೆಗಳನ್ನು ನೀಡಿ ಎಂದು ರಾಜ್ಯಗಳಿಗೆ ಸೂಚಿಸಿದ್ದಾರೆ.
ಕೊರೊನಾ ಸೋಂಕಿನ ಆರ್ಭಟದ ಕಾರಣವಾಗಿ ಕಳೆದ ಮಾರ್ಚ್ನಲ್ಲಿ ಲಾಕ್ಡೌನ್ ಘೋಷಣೆ ಮಾಡಿದಾಗಿನಿಂದಲೂ ದೇಶಾದ್ಯಂತ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು. ಆನಂತರ ಮಕ್ಕಳಿಗೆ ಆನ್ಲೈನ್ ಮುಖಾಂತರವೇ ಪಾಠ ಮಾಡಲಾಗುತ್ತಿತ್ತು.
ನಂತರ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಶಾಲೆಗಳನ್ನು ತೆರೆಯುವಂತೆ ಕೇಂದ್ರ ಅನುಮತಿ ನೀಡಿತ್ತು. ಆದರೆ ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ಪುನರಾರಂಭ ಮಾಡುವ ಹೊತ್ತಿಗೆ ಏಪ್ರಿಲ್ನಲ್ಲಿ ಮತ್ತೆ ಎರಡನೇ ಅಲೆ ಕಾಣಿಸಿಕೊಂಡು ದೇಶದಲ್ಲಿ ಭೀಕರ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಐದು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಶಾಲಾರಂಭ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್!
ಇದೀಗ ಜೂನ್-ಜುಲೈ ತಿಂಗಳಿನಿಂದ ಮತ್ತೆ ಕೊರೊನಾ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಶಾಲೆಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದೆ. ಬಹುಪಾಲು ರಾಜ್ಯಗಳು ಶಾಲೆಗಳನ್ನು ಹಂತಹಂತವಾಗಿ ಪುನರಾರಂಭ ಮಾಡಿವೆ. ಕೊರೊನಾ ನಿಯಮಗಳ ಪಾಲನೆಯೊಂದಿಗೆ ಶಾಲೆಗಳನ್ನು ಪುನರಾರಂಭ ಮಾಡಲು ರಾಜ್ಯಗಳು ಆದ್ಯತೆ ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಕೂಡ ಸಲಹೆ ನೀಡಿದ್ದರು.
ಶಾಲೆ ತೆರೆಯುವ ಮುನ್ನ ಎಲ್ಲಾ ಶಿಕ್ಷಕರು ಹಾಗೂ ಭೋದಕೇತರ ಸಿಬ್ಬಂದಿಗೂ ಲಸಿಕೆ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೂ ಆದ್ಯತೆಯಲ್ಲಿ ಲಸಿಕೆ ನೀಡಲಾಗಿದೆ.
ಇದಾಗ್ಯೂ ಹಲವು ರಾಜ್ಯಗಳಲ್ಲಿ ಶಿಕ್ಷಕರಿಗೆ ಲಸಿಕೆ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಶಿಕ್ಷಕರಿಗೆ ಸಂಪೂರ್ಣ ಲಸಿಕೆ ನೀಡುವಂತೆ ಸಚಿವ ಮನ್ಸುಖ್ ಮಾಂಡವಿಯಾ ಕರೆ ನೀಡಿದ್ದಾರೆ.
ಕರ್ನಾಟಕದಲ್ಲಿ ಶಿಕ್ಷಕರಿಗೆ ಲಸಿಕೆ ಕಾರ್ಯ: ರಾಜ್ಯದಲ್ಲಿ ಕೋವಿಡ್ ಸೋಂಕು ಕಡಿಮೆಯಾಗಿದೆ. ಟಾಸ್ಕ್ ಫೋರ್ಸ್ ಸಮಿತಿ ಹಾಗೂ ತಜ್ಞರ ಸಲಹೆ ಮೇರೆಗೆ ನೇರ ತರಗತಿಗಳನ್ನು ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಣಯ ತೆಗೆದು ಕೊಂಡಿದ್ದು, ಆಗಸ್ಟ್ 23ರಿಂದ ಮೊದಲಿಗೆ 9, 10, 11 ಹಾಗೂ 12ನೇ ತರಗತಿಯನ್ನು ಪ್ರಾರಂಭಿಸಲಾಗಿದೆ. "ಕೋವಿಡ್ ಲಸಿಕೆ ಪಡೆಯಲು ಶಿಕ್ಷಕರಿಗಾಗಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿಯಂತೆ ಶೇಕಡಾ 95ಕ್ಕಿಂತ ಹೆಚ್ಚಿನ ಶಿಕ್ಷಕರು ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆಯದ ಶಿಕ್ಷಕರು ತಪ್ಪದೇ ಲಸಿಕೆಯನ್ನು ಪಡೆಯಬೇಕೆಂದು ಸೂಚಿಸಲಾಗಿದೆ" ರಾಜ್ಯ ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.
ಕೊರೊನಾ ಮೂರನೇ ಅಲೆ ಆತಂಕವಿದ್ದರೂ ಶಾಲೆಗಳನ್ನು ಆರಂಭಿಸುತ್ತಿರುವುದು ಯಾಕೆ?
ಭೌತಿಕ ತರಗತಿ ಆರಂಭ ಹಿನ್ನೆಲೆಯಲ್ಲಿ ಶಿಕ್ಷಕರು ಕಡ್ಡಾಯವಾಗಿ ಒಂದು ಡೋಸ್ ಲಸಿಕೆ ಪಡೆದುಕೊಂಡಿರಬೇಕು. ವಿದ್ಯಾರ್ಥಿಗಳು ಆವರಣದಲ್ಲಿ ಬೆರೆಯದಂತೆ ನೋಡಿಕೊಳ್ಳಬೇಕು. ಶಾಲಾ ಕೊಠಡಿಗಳನ್ನು ನಿರಂತರವಾಗಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳು ಪೆನ್ ಪುಸ್ತಕ, ಊಟ ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಾಪಾಡಬೇಕು ಎಂಬ ನಿಯಮಗಳನ್ನು ವಿಧಿಸಲಾಗಿದೆ.