ಉತ್ತರಾಖಂಡ: ವಿದ್ಯಾರ್ಥಿಗಳಿಗೆ ಕಾಡುತ್ತಿರುವ ಸಮೂಹ ಸನ್ನಿ ಸಮಸ್ಯೆ
ಉತ್ತರಾಖಂಡ ಜುಲೈ 29: ಉತ್ತರಾಖಂಡ ರಾಜ್ಯದ ಭಾಗೇಶ್ವರ ಗ್ರಾಮದಲ್ಲಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮೂಹ ಸನ್ನಿ (ಮಾಸ್ ಹೈಸ್ಟೇರಿಯಾ) ಸಮಸ್ಯೆ ಕಾಡುತ್ತಿದೆ. ವಿಷಯ ಗೊತ್ತಾಗುತ್ತಿದ್ದಂತೆ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಸಮೂಹ ಸನ್ನಿ ಸಮಸ್ಯೆ ಗೆ ಒಳಗಾದ ಮಕ್ಕಳು ಶಾಲೆಯಲ್ಲೇ ಮನಬಂದಂತೆ, ಸಾಮಾನ್ಯ ಮಕ್ಕಳಂತಲ್ಲದ ರೀತಿಯಲ್ಲಿ ವರ್ತಿಸುತ್ತಿರುವುದು ಶಾಲೆಯ ಶಿಕ್ಷಕರು ಹಾಗೂ ಪೋಷಕರನ್ನು ಆತಂಕಕ್ಕೆ ತಳ್ಳಿದೆ. ಸಮೂಹ ಸನ್ನಿಗೆ ಒಳಗಾದ ಮಕ್ಕಳು ಇದ್ದಕ್ಕಿದ್ದಂತೆ ಕೂದಲು ಕೆದರಿಕೊಂಡು ಜೋರಾಗಿ ಕೂಗಾಡಿದ್ದಾರೆ. ಕೆಲವರು ಅತ್ತು ಕಿರುಚಾಡಿದರೆ, ಇನ್ನು ಕೆಲವು ವಿದ್ಯಾರ್ಥಿಗಳು ಎಲ್ಲೆಂದರಲ್ಲೂ ಕೂತು ತಲೆಯನ್ನು ನೆಲಕ್ಕೆ ತಾಗಿಸಿ ಗೋಗರೆದಿದ್ದಾರೆ. ನೆಲದ ಮೇಲೆಯೇ ಬಿದ್ದು ಹೊರಳಾಡಿದ್ದಾರೆ. ವಿದ್ಯಾರ್ಥಿಗಳ ಈ ವಿಚಿತ್ರ ವರ್ತನೆಗಳು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಅಜಾದಿ ಕಾ ಅಮೃತ ಮಹೋತ್ಸವ; ಶಾಲೆ, ಮದರಸಾ ಮೇಲೆ ರಾಷ್ಟ್ರಧ್ವಜ ಹಾರಾಟ
ಭಾಗೇಶ್ವರ ಗ್ರಾಮದಲ್ಲಿನ ಸರ್ಕಾರಿ ವಿದ್ಯಾರ್ಥಿಗಳ ಈ ವಿಚಿತ್ರ ವರ್ತನೆ ಕಂಡು ಸ್ಥಳೀಯ ಆರೋಗ್ಯ ಅಧಿಕಾರಿಗಳು ಕೂಡಲೇ ಶಾಲೆಗೆ ಭೇಟಿ ನೀಡಿದ್ದಾರೆ. ಮಕ್ಕಳು ಆರೋಗ್ಯ ಕುರಿತು ಶಾಲಾ ಸಿಬ್ಬಂದಿ ಬಳಿ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.
ನಾಲ್ಕು ದಿನದ ಹಿಂದಷ್ಟೇ ಇಬ್ಬರು ವಿದ್ಯಾರ್ಥಿಗಳಿಗೆ ಸಮಸ್ಯೆ
ನಾಲ್ಕೈದು ದಿನಗಳ ಹಿಂದೆಯಷ್ಟೇ ಅದೇ ಶಾಲೆಯಲ್ಲಿ ಒಂದಿಬ್ಬರು ಮಕ್ಕಳು ವಿಚಿತ್ರವಾಗಿ ವರ್ತಿಸುವುದು ಕಂಡು ಬಂದಿತ್ತು. ಆ ಮಕ್ಕಳು ಜೋರಾಗಿ ಕೂಗಾಡಿದ್ದರು. ಅದಕ್ಕೂ ಮುನ್ನ ಸಾಕಷ್ಟು ಬೆವತಿದ್ದರು. ಶಾಲೆ ಕೊಠಡಿ, ಆವರಣ ಎಲ್ಲೆಂದರಲ್ಲಿ ಬಿದ್ದು ಹೊರಳಾಡಿದ್ದರು. ಆ ಮಕ್ಕಳ ಆರೋಗ್ಯ ಸರಿ ಇಲ್ಲ ಎಂದು ಭಾವಿಸಿ ಕೂಡಲೇ ಪೋಷಕರಿಗೆ ವಿಷಯ ತಿಳಿಸಲಾಗಿತ್ತು. ಪೋಷಕರು ಬಂದು ಮಕ್ಕಳನ್ನು ಕರೆದೊಯ್ದಿದ್ದರು.
ನಂತರ ಶಾಲೆಯ ಬಹುತೇಕ ವಿದ್ಯಾರ್ಥಿಗಳು ಇದೇ ರೀತಿ ಚಿತ್ರವಿಚಿತ್ರವಾಗಿ ವರ್ತಿಸಲು ಆರಂಭಿಸಿದರು. ಈ ವೇಳೆ ವಿದ್ಯಾರ್ಥಿಗಳಲ್ಲಿ ಉನ್ಮಾದವಿತ್ತು. ಯಾವುದೋ ರೀತಿಯ ಸಂಕಟ ತೋಡಿಕೊಂಡಂತೆ ಇತರರ ಪರಿವೇ ಇಲ್ಲದೆ ಅಳುತ್ತಿದ್ದರು. ಈ ದೃಶ್ಯದಿಂದ ಭಯಗೊಂಡು ನಾವು ಅಧಿಕಾರಿಗಳಿಗೆ ತಿಳಿಸಿದೆವು ಎಂದು ಅಲ್ಲಿನ ಸಿಬ್ಬಂದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇತರ ಜಿಲ್ಲೆಗಳ ವಿದ್ಯಾರ್ಥಿಗಳಲ್ಲೂ ಈ ಸಮಸ್ಯೆ
ಈ ಹಿಂದೆ ಭಾಗೇಶ್ವರದ ಪಕ್ಕದ ಜಿಲ್ಲೆಯಾಗದ ಅಲ್ಮೋರ, ಪಿತೊರಗಢ ಹಾಗೂ ಚಮೋಲಿಯಾ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲೂ ವಿದ್ಯಾರ್ಥಿಗಳು ಇಂತದ್ದೆ ಮಾನಸಿಕ ಸಮಸ್ಯೆಗೆ ತುತ್ತಾಗಿದ್ದರು. ಅವರು ಕೂಡ ಸಮೂಹ ಸನ್ನಿ ಕಾರಣದಿಂದ ಬಿದ್ದು ಹೊರಳಾಡಿ ಅರಚುತ್ತಿದ್ದರು. ಉತ್ತರಾಖಂಡ ರಾಜ್ಯದಲ್ಲಿ ಇಂತಹ ಘಟನೆ ಬಗ್ಗೆ ವರದಿಗಳು ಆಗಿವೆ.
ಸಮೂಹ ಸನ್ನಿಗೆ ಚಿಕಿತ್ಸೆ ಇಲ್ಲ?
ಸಮೂಹ ಸನ್ನಿ ಇದೊಂದು ರೀತಿಯ ಮಾನಸಿಕ, ಭಾವನಾತ್ಮಕ ಸಮಸ್ಯೆ ಆಗಿದ್ದರಿಂದ ಇದಕ್ಕೆ ನಿಗದಿತ ಸೂಕ್ತ ಚಿಕಿತ್ಸೆಗಳು ಇಲ್ಲ ಎನ್ನಲಾಗಿದೆ. ಸಮಸ್ಯೆ ಗೊತ್ತಾದ ಮೇಲೆ ಶಾಲೆಗೆ ಬಂದ ಶಿಕ್ಷಣ ಅಧಿಕಾರಿಗಳಿಗೆ ಪೋಷಕರ ಮಕ್ಕಳು ಪೂಜೆ, ಹೋಮ ಮಾಡುವಂತೆ ಸೂಚಿಸಿದ್ದಾರೆ. ಆದರೆ ಇದಕ್ಕೆ ಅಧಿಕಾರಿಗಳು ಒಪ್ಪದೇ ವೈದ್ಯರನ್ನು ಶಾಲೆಗೆ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದು ಎಂದು ಭರವಸೆ ನೀಡಿದ್ದಾರೆ. ಕೆಲವು ತಂದೆ ತಾಯಂದಿರು ತಮ್ಮ ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬಂದ ಹಿನ್ನೆಲೆ ಮಂತ್ರವಾದಿಗಳಿಂದ ಮಂತ್ರಿ ಹಾಕಿಸಿದ್ದಾರೆ ಎನ್ನಲಾಗಿದೆ.
ಏನಿದೆ ಸಮೂಹ ಸನ್ನಿ (Mass Hysteria) ಸಮಸ್ಯೆ?:
ಸಮೂಹ ಸನ್ನಿ ಇದೊಂದು ಸಹಜರೀತಿಯಲ್ಲದ ವರ್ತನೆ, ಆಲೋಚನೆ ಒಳಗೊಂಡ ವಿಚಿತ್ರ ಭಾವನೆ ವ್ಯಕ್ತಪಡಿಸುವುದಾಗಿದೆ. ಇದನ್ನು ತಾತ್ಕಲಿಕ ಮಾನಸಿಕ ಸಮಸ್ಯೆ ಎಂದೂ ಕರೆಯುತ್ತಾರೆ. ಈ ಸಮೂಹ ಸನ್ನಿಗೆ ಒಳಗಾದವರು ಸಹಜ ಪ್ರಜ್ಞೆ ಇಲ್ಲದವರಂತೆ ಅಸಾಧಾರಣವಾಗಿ ವರ್ತಿಸುತ್ತಾರೆ. ಇದು ತಮ್ಮೊಳಗಿನ ಯಾವದೋ ಭಾವನೆಗಳನ್ನು ಹೊರಹಾಕುತ್ತಿದ್ದಾರೆ ಎಂಬಂತೆ ಇತರರಿಗೆ ಬಿಂಬಿತವಾಗುತ್ತಿರುತ್ತದೆ. ಒಬ್ಬರು ಈ ವರ್ತಿಸಿದಾಗ ಅದು ಇತರರ ಮೇಲೂ ಪ್ರಭಾವ ಭೀರುವ ಸಾಧ್ಯತೆ ಇರುತ್ತದೆ. ಅವರು ಕೂಡ ಅದೇ ರೀತಿಯ ಪ್ರಭಾವಕ್ಕೆ ಒಳಗಾಗುತ್ತಾರೆ. ಇಂತಹ ಸಮಸ್ಯೆ ಮನುಷ್ಯ ಭಾವನಾತ್ಮಕ ಮತ್ತು ಮಾನಸಿಕ ಒತ್ತಡದಿಂದ ಪ್ರೇರೇಪಿತವಾಗಿರುತ್ತದೆ. ಮುಂದೆ ಅದೊಂದು ರೀತಿಯ ದೈಹಿಕ ಸಮಸ್ಯೆಯಾಗಿಯೂ ಪರಿವರ್ತನೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.
Recommended Video