ದ್ವೇಷ ಭಾಷಣ; ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿಗೆ ಜಾಮೀನು
ನವದೆಹಲಿ, ಮೇ 17; ದ್ವೇಷ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಉತ್ತರ ಪ್ರದೇಶದ ಶಿಯಾ ವಕ್ಫ್ ಬೋರ್ಡ್ನ ಮಾಜಿ ಮುಖ್ಯಸ್ಥ ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿಗೆ ಸುಪ್ರೀಂಕೋರ್ಟ್ ಮೂರು ತಿಂಗಳ ಮಧ್ಯಂತರ ಜಾಮೀನು ನೀಡಿದೆ.
ಈ ಹಿಂದೆ ವಾಸೀಂ ರಿಜ್ವಿ ಆಗಿದ್ದ ಇವರು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷದ ಡಿಸೆಂಬರ್ನಲ್ಲಿ ನಡೆದ ಹರಿದ್ವಾರ ಧರ್ಮ ಸಂಸತ್ನಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಪೊಲೀಸರು ತ್ಯಾಗಿ ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ವಿಭಾಗೀಯ ಪೀಠ, ಅನಾರೋಗ್ಯದ ಹಿನ್ನಲೆಯಲ್ಲಿ ತ್ಯಾಗಿಗೆ ಮೂರು ತಿಂಗಳ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ. ಅಲ್ಲದೇ ದ್ವೇಷದ ಭಾಷಣ ಮಾಡದಂತೆ ಹಾಗೂ ಟಿವಿ, ಡಿಜಿಟಲ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡದಂತೆ ಸೂಚಿಸಿದೆ.
ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ತಮ್ಮ ಕಕ್ಷಿದಾರರು ಯಾವುದೇ ಕಾರಣಕ್ಕೂ ದ್ವೇಷದ ಭಾಷಣ ಮಾಡದಂತೆ ಸಲಹೆ ನೀಡುವಂತೆ ತ್ಯಾಗಿ ಪರ ವಕೀಲರಿಗೆ ಪೀಠ ಸೂಚಿಸಿದೆ. "ತ್ಯಾಗಿ ಅವರ ಪ್ರಕರಣದಲ್ಲಿ ಗರಿಷ್ಟ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ'' ಎಂದು ಉತ್ತರಾಖಂಡದ ಸರಕಾರಿ ವಕೀಲರು ತಿಳಿಸಿದ್ದಾರೆ.
"ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿರುವುದು ಎಲ್ಲರ ಜವಾಬ್ದಾರಿಯಾಗಿದೆ. ತ್ಯಾಗಿ ಅವರು ಪುನಃ ದ್ವೇಷ ಭಾಷಣ ಮಾಡಿದರೆ ಯಾವುದೇ ನೋಟಿಸ್ ನೀಡದೇ ಜಾಮೀನನ್ನು ರದ್ದುಗೊಳಿಸಬೇಕು. ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆಯಲ್ಲಿ ಜಾಮೀನು ನೀಡಲು ಯಾವುದೇ ತಕರಾರಿಲ್ಲ'' ಎಂದು ಉತ್ತರಾಖಂಡದ ಸರಕಾರಿ ವಕೀಲರು ವಾದ ಮಂಡಿಸಿದರು.
"ಈ ರೀತಿಯ ಭಾಷಗಳಿಂದ ಇಡೀ ವಾತಾವರಣವನ್ನು ಕಲುಷಿತಗೊಳಿಸಲಾಗುತ್ತಿದೆ. ಇತರರು ಸಂವೇದನಾಶೀಲರಾಗಬೇಕೆಂದು ಹೇಳುವ ಮೊದಲು ಅವರು ಸಂವೇದನಾಶೀಲರಾಗಬೇಕಿದೆ. ಇದು ಸಮಾಜದ ಸಾಮರಸ್ಯವನ್ನು ಹಾಳು ಮಾಡುವ ಸಂಗತಿಯಾಗಿದೆ'' ಎಂದು ವಿವಾದಾತ್ಮಕ ಹರಿದ್ವಾರದ ಧರ್ಮ ಸಂಸದ್ ಕಾರ್ಯಕ್ರಮ ಉಲ್ಲೇಖಿಸಿ ಪೀಠ ಹೇಳಿಕೆ ನೀಡಿತು.
ಜಾಮೀನು ತಿರಸ್ಕರಿಸಿದ ಉತ್ತರಾಖಂಡ ಹೈಕೋರ್ಟ್ ಆದೇಶದ ವಿರುದ್ಧ ತ್ಯಾಗಿ ಮೇಲ್ಮನವಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಕಳೆದ ವಾರ ಉತ್ತರಾಖಂಡ ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು.
ದ್ವೇಷ ಭಾಷಣ ಆರೋಪದಲ್ಲಿ ತ್ಯಾಗಿಯನ್ನು ಈ ವರ್ಷದ ಜನವರಿ 13ರಂದು ಉತ್ತರಾಖಂಡ ಪೊಲೀಸರು ಬಂಧಿಸಿದ್ದರು. ಉತ್ತರಾಖಂಡ ಹೈಕೋರ್ಟ್ ಮಾರ್ಚ್ 8ರ ತನ್ನ ತೀರ್ಪಿನಲ್ಲಿ ತ್ಯಾಗಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.