ಹಿಮಪಾತದ ನಂತರ IMDಯಿಂದ ಮಹತ್ವದ ಹವಾಮಾನ ಮುನ್ಸೂಚನೆ
ಚಮೋಲಿ, ಫೆಬ್ರವರಿ 7: ಚಮೋಲಿ ಜಿಲ್ಲೆಯ ಹಿಮಪರ್ವತಗಳಲ್ಲಿ ಭಾನುವಾರ ಉಂಟಾದ ಭಾರಿ ಹಿಮಪಾತದಿಂದ ದೇವ ಭೂಮಿ ಉತ್ತರಾಖಂಡ್ ಬೆಚ್ಚಿದೆ. ಈ ಪ್ರದೇಶದಲ್ಲಿ ಹರಿಯುವ ನದಿಗಳಲ್ಲಿ ನೀರಿನ ಮಟ್ಟ ತ್ವರಿತಗತಿಯಲ್ಲಿ ಏರಿಕೆ ಕಂಡು ಪ್ರವಾಹ ಭೀತಿ ಎದುರಾಗಿದೆ. ದೌಲಿಗಂಗಾ ನದಿ ನೀರಿನ ಮಟ್ಟದ ಅಪಾಯದ ಮೀರಿ ಹರಿಯುತ್ತಿದ್ದು, ನದಿಪಾತ್ರದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸೇರಿಸಲಾಗಿದೆ. ಈ ನಡುವೆ ಹಿಮಪಾತದ ನಂತರ ಭಾರತೀಯ ಹವಾಮಾನ ಇಲಾಖೆಯಿಂದ ಮಹತ್ವದ ಹವಾಮಾನ ಮುನ್ಸೂಚನೆ ಸಿಕ್ಕಿದೆ.
ಭಾರಿ ಹಿಮಪಾತ, ನದಿಪ್ರವಾಹದಿಂದ ಋಷಿಗಂಗಾ ಹೈಡ್ರೋಪವರ್ ಯೋಜನೆಗಾಗಿ ನಿರ್ಮಿಸಿದ್ದ ಬ್ಯಾರೇಜ್ ಧ್ವಂಸಗೊಂಡಿದೆ. ತಪೋವನ್ ಪ್ರದೇಶದ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಆದರೆ, ಮುಂದಿನ ಎರಡು ದಿನಗಳ ಕಾಲ ಚಮೋಲಿ, ತಪೋವನ್ ಹಾಗೂ ಜೋಶಿಮಠ ಪ್ರದೇಶದಲ್ಲಿ ಒಣ ಹವೆ ಇರಲಿದ್ದು, ಯಾವುದೇ ಭಾರಿ ಪ್ರಮಾಣದ ಹಿಮ ಪಾತ, ಹಿಮನದಿಯ ಪ್ರವಾಹ ಸಾಧ್ಯತೆಯಿಲ್ಲ ಎಂದು ಐಎಂಡಿಯ ಹೆಚ್ಚುವರಿ ನಿರ್ದೇಶಕ ಜನರಲ್ ಆನಂದ್ ಶರ್ಮ ಹೇಳಿದ್ದಾರೆ.
''ಫೆಬ್ರವರಿ 7 ಹಾಗೂ 8ರಂದು ಹಿಮಪಾತ ಅಥವಾ ಭಾರಿ ಮಳೆ ಸಾಧ್ಯತೆ ಇಲ್ಲ'' ಎಂದು ಮುನ್ಸೂಚನೆ ನೀಡಿದ್ದಾರೆ. ಆದರೆ, ಫೆಬ್ರವರಿ 9 ಹಾಗೂ 10ರಂದು ಅಲ್ಪ ಪ್ರಮಾಣದಲ್ಲಿ ಮಳೆ ಹಾಗೂ ಹಿಮ ಪಾತ ನಿರೀಕ್ಷಿಸಬಹುದು ಆದರೆ, ಭಾನುವಾರ ಕಂಡು ಬಂದ ತ್ವರಿತ ಪ್ರವಾಹ ಸಾಧ್ಯತೆಯಿಲ್ಲ. ಚಮೋಲಿ ಜಿಲ್ಲೆಯ ಉತ್ತರ ಭಾಗದಲ್ಲಿ ಎರಡು ದಿನ ಬಿಟ್ಟು ಮಳೆ ಸುರಿಯಲಿದೆ'' ಎಂದು ಹವಾಮಾನ ಇಲಾಖೆ ಹೇಳಿದೆ.
ಚಮೋಲಿಯ ಜೋಶಿಮಠ ಸಮೀಪದ ನಂದಾದೇವಿ ಹಿಮಪರ್ವತದ ಭಾಗ ಕುಸಿತವಾಗಿದ್ದರಿಂದ ದೌಲಿಗಂಗಾ, ಅಲಕಾನಂದ ನದಿಯಲ್ಲಿ ತ್ವರಿತ ಪ್ರವಾಹ ಪರಿಸ್ಥಿತಿ ಉಂಟಾಯಿತು. ತಪೋವನ್-ರೇನಿ ಭಾಗದಲ್ಲಿ ಋಷಿಗಂಗಾ ಹೈಡ್ರೋ ಪವರ್ ಯೋಜನೆಯಲ್ಲಿ ಕಾರ್ಯ ನಿರತ 150ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಸಮೀಪದ ಸುರಂಗದಲ್ಲಿ ಸಿಲುಕಿದ್ದ 50ಕ್ಕೂ ಅಧಿಕ ಕಾರ್ಮಿಕರ ರಕ್ಷಣೆ ಕಾರ್ಯವನ್ನು ಐಟಿಬಿಪಿ ಮುಂದುವರೆಸಿದೆ.
ಘಟನಾ ಸ್ಥಳಕ್ಕೆ ಕೇದರಾನಾಥ್ ಕಡೆಯಿಂದ ಮಿಲಿಟರಿ ಪಡೆ ರವಾನೆಯಾಗಿದ್ದು, ಎನ್ ಡಿ ಆರ್ ಎಫ್ ಜೊತೆ ಕೈಜೋಡಿಸಿ ರಕ್ಷಣಾ ಕಾರ್ಯ, ವೈದ್ಯಕೀಯ ನೆರವು ಕಾರ್ಯದಲ್ಲಿ ತೊಡಗಿಕೊಂಡಿದೆ. ನಂದಾದೇವಿ ಹಿಮನದಿಯಲ್ಲಿ ಹಿಮ ಪಾತದ ಪರಿಣಾಮ ಉಂಟಾಗಿರುವ ಪ್ರವಾಹ ಭೀತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 1070 or 9557444486ಕ್ಕೆ ಕರೆ ಮಾಡಬಹುದು.