ಯೋಗಿ ವಿರುದ್ಧ ಉತ್ತರ ಪ್ರದೇಶದಲ್ಲಿ ಮಾಂಸ ಮಾರಾಟಗಾರರ ಮುಷ್ಕರ
ನೂತನ ಸಿಎಂ ಯೋಗಿ ಆದಿತ್ಯನಾಥ್ ಅವರು ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಿಸಿರುವ ಹಿನ್ನೆಲೆಯಲ್ಲಿ ಅನಿಷ್ಟಾವಧಿ ಮುಷ್ಕರ ನಡೆಸಲು ಅಲ್ಲಿನ ಮಾಂಸ ಮಾರಾಟಗಾರರು ನಿರ್ಧರಿಸಿದ್ದಾರೆ.
ಲಕ್ನೋ, ಮಾರ್ಚ್ 27: ಯೋಗಿ ಆದಿತ್ಯಾನಾಥ್ ಅವರು ಮುಖ್ಯಮಂತ್ರಿಯಾದ ಮೇಲೆ ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಂಸ ಮಾರಾಟಗಾರರು ಸೋಮವಾರದಿಂದ (ಮಾರ್ಚ್ 27) ಅನಿರ್ದಿಷ್ಟಾವಧಿವರೆಗೆ ಮುಷ್ಕರ ನಡೆಸುವುದಾಗಿ ತಿಳಿಸಿದ್ದಾರೆ.
ಈ ಎಲ್ಲಾ ಮಾಂಸ ಮಾರಾಟಗಾರರು, ಹೊಸದಾಗಿ ಬಂದಿರುವ ಬಿಜೆಪಿ ಸರ್ಕಾರವು ತಮ್ಮನ್ನು ಗುರಿಯಾಗಿಸಿ ತಮ್ಮ ಮೇಲೆ ದರ್ಪ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ್ದಾರೆ.[ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಮ್ಮ ಗುರಿ: ಯೋಗಿ ಆದಿತ್ಯನಾಥ್]
ಮುಷ್ಕರದ ಬಗ್ಗೆ ವಿವರಣೆ ನೀಡಿರುವ 'ಲಕ್ನೋ ಬಕ್ರಾ ಗೋಷ್ ವ್ಯಾಪಾರ್ ಮಂಡಲ್'ನ ಮುಖ್ಯಸ್ಥ ಮುಬೀನ್ ಖುರೇಷಿ, ''ಕೆಲ ಅಂಗಡಿಗಳನ್ನು ಮುಚ್ಚಿಸಿರುವುದು ಬಡವರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಈ ಹಿನ್ನೆಲೆಯಲ್ಲಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ನಮ್ಮ ಜತೆಗೆ ಮೀನು ಮಾರಾಟಗಾರರೂ ಕೈ ಜೋಡಿಸಲಿದ್ದಾರೆ'' ಎಂದು ತಿಳಿಸಿದರು.[ಸಂಪಾದಕೀಯದಲ್ಲಿ ಯೋಗಿ ಆಯ್ಕೆ ಪ್ರಶ್ನೆ: 'ಟೈಮ್ಸ್' ಗೆ ಕೇಂದ್ರದ ನೋಟಿಸ್]
ಅನಧಿಕೃತ ಮಾಂಸ ಮಾರಾಟಗಾರರ ಈ ನಿರ್ಧಾರಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೊಪ್ಪು ಹಾಕಲಾರರು ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ, ಕೆಲ ದಿನಗಳ ಹಿಂದೆಯೇ ತಮ್ಮ ಕ್ರಮವನ್ನು ಸ್ಪಷ್ಟಪಡಿಸಿದ್ದ ಅವರು, ''ತಮ್ಮ ಯುದ್ದ ಕೇವಲ ಅಕ್ರಮ ಮಾಂಸ ಮಾರಾಟದ ಅಂಗಡಿಗಳ ವಿರುದ್ಧವೇ ಹೊರತು, ಪರವಾನಗಿ ಪಡೆದಿರುವ ಮಾಂಸದಂಗಡಿಗಳಿಗೆ ಯಾವುದೇ ತೊಂದರೆಯಿಲ್ಲ'' ಎಂದು ತಿಳಿಸಿದ್ದರು.