ಉಸೇನ್ ಬೋಲ್ಟ್ ಚಿನ್ನ ಗೆದ್ದಿದ್ದು ಬೀಫ್ ತಿಂದಿದ್ದರಿಂದ, ಬಿಜೆಪಿ ಎಂಪಿ!
ನವದೆಹಲಿ, ಆಗಸ್ಟ್ 29 (ಪಿಟಿಐ) : ವಾಯುವ್ಯ ದೆಹಲಿ ಕ್ಷೇತ್ರದ ಬಿಜೆಪಿ ಸಂಸದ ಮತ್ತು ದಲಿತ ಮುಖಂಡ ಉದಿತ್ ರಾಜ್ ಎಲ್ಲರೂ ಹುಬ್ಬೇರುವಂತಹ ಹೇಳಿಕೆಯನ್ನು ನೀಡಿದ್ದಾರೆ.
ಜಮೈಕಾದ ಅಥ್ಲೀಟ್, ರಿಯೋ ಒಲಿಂಪಿಕ್ಸ್ ನಲ್ಲಿ ಮೂರು ಚಿನ್ನದ ಪದಕ ಗೆದ್ದ ಉಸೇನ್ ಬೋಲ್ಟ್ ದಿನಕ್ಕೆ ಎರಡು ಬಾರಿ ಬೀಫ್ ತಿನ್ನುತ್ತಿದ್ದರು, ಹೀಗಾಗಿ ಅವರು ಇದುವರೆಗೆ ಒಲಿಂಪಿಕ್ಸ್ ನಲ್ಲಿ ಒಂಬತ್ತು ಚಿನ್ನದ ಪದಕ ಗೆಲ್ಲಲು ಸಾಧ್ಯವಾಯಿತು ಎಂದು ಉದಿತ್ ರಾಜ್ ಹೇಳಿದ್ದಾರೆ. (ಉಸೇನ್ ಬೋಲ್ಟ್ ಕೊರಳಿಗೆ ಮೂರನೇ ಚಿನ್ನ)
ಕಳೆದ ಎರಡು ಒಲಿಂಪಿಕ್ಸ್ ನಲ್ಲಿ ಬಡರಾಷ್ಟ್ರ ಜಮೈಕಾ ಮೂಲದ ಉಸೇನ್ ಬೋಲ್ಟ್ ಗೆ ಅವರ ಕೋಚ್ ದಿನಕ್ಕೆ ಎರಡು ಬಾರಿ ಬೀಫ್ ತಿನ್ನುವಂತೆ ಸೂಚಿಸಿದ್ದರು ಎಂದು ಉದಿತ್ ರಾಜ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬೀಫ್ ನಿಷೇಧಿಸಿ ಕಟ್ಟುನಿಟ್ಟಿನ ಕಾನೂನು ರೂಪುಗೊಳ್ಳುತ್ತಿರುವ ಬೆನ್ನಲ್ಲೇ, ಉದಿತ್ ರಾಜ್ ಹೇಳಿಕೆ ಪಕ್ಷವನ್ನು ಮುಜುಗರಕ್ಕೀಡಾಗುವಂತೆ ಮಾಡಿದೆ.
ಇದಾದ ನಂತರ ತನ್ನ ಹೇಳಿಕೆ ವಿವಾದ ಹುಟ್ಟುಹಾಕಬಹುದೆಂದರಿತ ಉದಿತ್ ರಾಜ್ ಮತ್ತೆ ಟ್ವೀಟ್ ಮಾಡಿ, ನಾನು ಉಸೇನ್ ಬೋಲ್ಟ್ ಕೋಚ್ ನೀಡಿದ್ದ ಹೇಳಿಕೆಯನ್ನು ಟ್ವೀಟ್ ಮಾಡಿದ್ದೇನೆ ಎಂದಿದ್ದಾರೆ.
ಕ್ರೀಡಾಪಟುಗಳಿಗೆ ಉತ್ತಮ ಸಾಧನೆ ತೋರಲು ಹಲವು ದಾರಿಗಳಿವೆ. ಕಳಪೆ ಸಾಧನೆಗೆ ಮೂಲಸೌಕರ್ಯವನ್ನು ಮಾತ್ರ ದೂಷಿಸುವುದು ಸರಿಯಲ್ಲ. ಕ್ರೀಡಾಪಟುಗಳಿಗೆ ಉಸೇನ್ ಬೋಲ್ಟ್ ನಂತೆ ಏಕಾಗ್ರತೆ ಮತ್ತು ಛಲ ಇರಬೇಕೆಂದು ಉದಿತ್ ರಾಜ್ ಹೇಳಿದ್ದಾರೆ.