ತೆಲಂಗಾಣಕ್ಕೆ ಕ್ಯಾಬಿನೆಟ್ ಅಸ್ತು, ಹೈದರಾಬಾದ್ ರಾಜಧಾನಿ
ನವದೆಹಲಿ, ಫೆ.7 ; ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆ ಮಸೂದೆಗೆ ಯುಪಿಎ ಸಚಿವ ಸಂಪುಟ ಅಸ್ತು ಎಂದಿದೆ. ಕೇಂದ್ರ ಸಚಿವರ ಸಮೂಹ(GoM) ನೀಡಿರುವ ಶಿಫಾರಸ್ಸಿನಂತೆ ಹೊಸ ರಾಜ್ಯ ಸ್ಥಾಪನೆ ಮಸೂದೆಗೆ ಕೇಂದ್ರ ವಿಶೇಷ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಹೈದರಾಬಾದ್ ನಗರವನ್ನು ಎರಡು ರಾಜ್ಯಗಳಿಗೆ ಜಂಟಿ ರಾಜಧಾನಿಯಾಗಲಿದೆ.
ನಗರದ ಕಾನೂನು, ಸುವ್ಯವಸ್ಥೆ ಜವಾಬ್ದಾರಿ ರಾಜ್ಯಪಾಲರಿಗೆ ವಹಿಸಲಾಗಿದ್ದು, ಹೈದರಾಬಾದ್ ನಗರವನ್ನು ಕೇಂದ್ರಾಡಳಿತ ಪ್ರದೇಶ ಮಾಡುವುದಿಲ್ಲ ಎಂದು ಸ್ಪಷ್ಟವಾದ ನಿರ್ಧಾರ ಕೈಗೊಳ್ಳಲಾಗಿದೆ. ಸಂಸತ್ತಿನಲ್ಲಿ ಮುಂದಿನ ವಾರ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಸೂದೆ ಮಂಡನೆ ಸಾಧ್ಯತೆಯಿದೆ. ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿರುವುದರಿಂದ ನೇರವಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಂಕಿತಕ್ಕಾಗಿ ಕಾಯಲಾಗುತ್ತಿದೆ. ಈಗಾಗಲೇ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಮಸೂದೆ ತಿರಸ್ಕೃತಗೊಂಡಿರುವುದನ್ನು ಸ್ಮರಿಸಬಹುದು. ಆಂಧ್ರ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ತಲೆದಂಡ ಖಾತ್ರಿ ಎನ್ನಬಹುದು.[ಆಂಧ್ರ ವಿಭಜನೆ, ಕರ್ನಾಟಕ ದೊಡ್ಡಣ್ಣ, ಲಾಭ ಏನಣ್ಣ?]
ಚರ್ಚೆಯಿಲ್ಲದೆ ಮಸೂದೆ ಮಂಡನೆ? : ಜನಲೋಕಪಾಲ, ಕೋಮುಹಿಂಸೆ ತಡೆ, ತೆಲಂಗಾಣ ರಾಜ್ಯ ರಚನೆ ಸೇರಿದಂತೆ ನಿಗದಿತ ಶೇ.17ರಷ್ಟು ವಿಧೇಯಕಗಳಿಗೆ (20 ವಿಧೇಯಕ) ಐದು ನಿಮಿಷಗಳಿಂದ ಕಡಿಮೆ ಅವಧಿಯ ಚರ್ಚೆ ನಡೆಸಿ 15ನೇ ಲೋಕಸಭೆ ಅನುಮೋದನೆ ನೀಡಿದೆ ಎಂದು ಪಿಆರ್ಎಸ್ ಲೆಜಿಸ್ಲೇಟಿವ್ ರೀಸರ್ಚ್ ಸಂಸ್ಥೆ ನಡೆಸಿದ ವಿಶ್ಲೇಷಣೆ ಹೇಳಿದೆ.
ಮಸೂದೆ ತಡೆ ಸುಪ್ರೀಂ ನಕಾರ: ಪ್ರತ್ಯೇಕ ತೆಲಂಗಾನ ರಾಜ್ಯ ರಚನೆ ವಿರೋಧಿಸಿ ಸುಪ್ರೀಂಕೋರ್ಟ್ ನಲ್ಲಿ ಹಾಕಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಶುಕ್ರವಾರ ಎಚ್ ಎಲ್ ದತ್ತು ಹಾಗೂ ಎಸ್ ಎ ಬೊದ್ಡೆ ಅವರಿದ್ದ ನ್ಯಾಯಪೀಠ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿ ಸುಮಾರು 9 ರಿಟ್ ಅರ್ಜಿಗಳನ್ನು ತಿರಸ್ಕರಿಸಿದೀ. ಈ ಮೂಲಕ ನವೆಂಬರ್ 18,2013ರ ಆದೇಶವನ್ನು ಎತ್ತಿ ಹಿಡಿದು, ಈ ಸಂದರ್ಭದಲ್ಲಿ ಮಸೂದೆಗೆ ತಡೆಯೊಡ್ದುವುದು ಸೂಕ್ತವಲ್ಲ ಎಂದಿದೆ.
ತೆಲಂಗಾಣ ರಚನೆ ವಿರೋಧಿಸಿ ಧರಣಿ ನಡೆಸಿದ್ದ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಸಚಿವ ಸಂಪುಟದ ನಿರ್ಣಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸಮೈಕ್ಯಾಂದ್ರಕ್ಕಾಗಿ ಹೋರಾಟ ಮುಂದುವರೆಸುತ್ತೇನೆ. ಮುಖ್ಯಮಂತ್ರಿ ಸ್ಥಾನ ಹೋದರೂ ಚಿಂತೆಯಿಲ್ಲ, ರಾಜಕೀಯ ಬೇಕಾದರೂ ತೊರೆಯುತ್ತೇನೆ ಎಂದಿದ್ದಾರೆ.