ಯುಪಿ ಚುನಾವಣೆಯಲ್ಲಿ ಬಿಜೆಪಿಗೆ ಉಲ್ಟಾ ಹೊಡೆಯುತ್ತಾ ನೋಟು ರದ್ದು?
ಉತ್ತರ ಪ್ರದೇಶ ಚುನಾವಣೆ ಇನ್ನೇನು ಕಣ್ಣೆದುರಿಗಿದೆ. ಆದರೆ ಅಲ್ಲಿನ ಜನಕ್ಕೆ ಅಪನದೀಕರಣ ನಿರ್ಧಾರ ಸಿಟ್ಟು ತರಿಸುತ್ತದೆ. ಇದಕ್ಕೆ ಅಲ್ಲಿನ ಬ್ಯಾಂಕಿಂಗ್ ವ್ಯವಸ್ಥೆಯ ಲೋಪಗಳೂ ಕಾರಣ ಎಂಬುದು ಬೇರೆ ಮಾತು. ಅದರೆ ಸಿಟ್ಟಂತೂ ಬಿಜೆಪಿ ಮೇಲೆ ತಿರುಗಿದೆ.
ಲಖನೌ, ಡಿಸೆಂಬರ್ 9: ಉತ್ತರಪ್ರದೇಶದಲ್ಲಿರುವುದು ಒಟ್ಟು 19,143 ಎಟಿಎಂಗಳು. -ಇದು ದೆಹಲಿಯಲ್ಲಿರುವ ಎಟಿಎಂಗಳಿಗಿಂತ ಎರಡು ಪಟ್ಟು ಹೆಚ್ಚು. ಆದರೆ ದೆಹಲಿಗಿಂತ ಯುಪಿಯಲ್ಲಿ ಇಪ್ಪತ್ತು ಪಟ್ಟು ಹೆಚ್ಚು ಜನಸಂಖ್ಯೆ ಇದೆ. ಅಪನಗದೀಕರಣದ ಹೊಡೆತ ಅತಿ ಹೆಚ್ಚು ಬಿದ್ದಿರುವುದು ಉತ್ತರಪ್ರದೇಶಕ್ಕೆ. ಬಿಜೆಪಿಗೆ ದೊಡ್ಡ ಗಂಡಾಂತರವಾಗಿ ಎದುರಿಗಿರುವುದು ಇದೇ ಸಂಗತಿ.
2017ರಲ್ಲಿ ಉತ್ತರಪ್ರದೇಶ ಚುನಾವಣೆ ಇದೆ. ಹೊಸ ವರ್ಷದವರೆಗೆ ಈ ನೋಟು ಸಮಸ್ಯೆ ಮುಂದುವರಿದರೆ ಪರಿಸ್ಥಿತಿ ಬಿನ್ನವಾಗುತ್ತದೆ. ಹಲವು ರಾಜಕೀಯ ನೇತಾರರು, ಉನ್ನತ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಎಲ್ಲರ ಮಾತನ್ನು ಒಟ್ಟು ಮಾಡಿ ಹೇಳುವುದಾದರೆ, ನೋಟು ರದ್ದು ಆರಂಭದಲ್ಲಿದ್ದ ಸಂಭ್ರಮದ ವಾತಾವರಣ ಈಗಿಲ್ಲ.[ನಗದು ಬದಲು ಕಾರ್ಡ್ ಬಳಸುವವರಿಗೆ ಭರ್ಜರಿ ರಿಯಾಯಿತಿ]
ದೊಡ್ಡ ಸರತಿ ಕರಗುತ್ತಿಲ್ಲ. ಅದು ಸಿಟ್ಟಾಗಿ, ಆಕ್ರೋಶವಾಗಿ ಪರಿವರ್ತನೆ ಆಗುತ್ತಿದೆ. "ಲಖನೌ ಜನ ಆರಾಮವಾಗಿ ಇರೋರು. ಅಂಥವರನ್ನು ಹೀಗೆ ಸಾಲಲ್ಲಿ ಇನ್ನೂ ಕೆಲ ವಾರ ನಿಲ್ಲಿಸಿದರೆ, ಮುಂದಿನ ಚುನಾವಣೆಯಲ್ಲಿ ಆರಾಮವಾಗಿ ಮನೇಲಿ ಕೂತುಕೊಳ್ತಾರೆ ವಿನಾ ಬಿಜೆಪಿಗೆ ಮತ ಹಾಕೋದಿಲ್ಲ' ಎಂದು ಹಿರಿಯ ರಾಜಕಾರಣಿಗಳು ಅಭಿಪ್ರಾಯ ಪಡುತ್ತಾರೆ.
ಸರಕಾರಕ್ಕೆ ಗುಪ್ತಚರ ಇಲಾಖೆ ವರದಿ ಬಂದಿದ್ದು, "ಆರ್ ಎಸ್ ಎಸ್ ಕಾರ್ಯಕರ್ತರೇ ಸಾಲಿನಲ್ಲಿ ನಿಂತು, ನೋಟು ರದ್ದು ನಿರ್ಧಾರವನ್ನು ಟೀಕಿಸಬೇಡಿ, ವಿರೋಧಿಸಬೇಡಿ ಎಂದು ಮನವೊಲಿಸುತ್ತಿದ್ದರೂ ಜನರ ತಾಳ್ಮೆ ಮುಗಿಯುತ್ತಿದೆ" ಎಂದು ರಾಜಕಾರಣಿಯೊಬ್ಬರು ಹೇಳಿದ್ದಾರೆ. ಅರಂಭದ ಸಂಭ್ರಮ ಈಗ ಉಳಿದಿಲ್ಲ ಎಂಬುದು ಅವರ ಮಾತು.[ಡಿ.10ರಿಂದ ಬಸ್, ರೈಲು ಟಿಕೆಟ್ ಖರೀದಿಗೂ ಹಳೆ 500, 1000 ನಡೆಯಲ್ಲ!]

ಬ್ಯಾಂಕಿಂಗ್ ವ್ಯವಸ್ಥೆಯೇ ಬಲಹೀನ
ಉತ್ತರಪ್ರದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯೇ ಬಲಹೀನವಾಗಿದೆ. ಇಪ್ಪತ್ತು ಕೋಟಿ ಜನಸಂಖ್ಯೆ ಇರುವ ದೊಡ್ಡ ರಾಜ್ಯದಲ್ಲಿ ಇರೋದು ಹದಿನೆಂಟು ಸಾವಿರ ಪ್ಲಸ್ ಬ್ಯಾಂಕ್ ಶಾಖೆಗಳು, 19,143 ಎಟಿಎಂಗಳು. ಅದೇ ದೆಹಲಿಯಲ್ಲಿ 1.2 ಕೋಟಿ ಜನಸಂಖ್ಯೆಗೆ 9,070 ಎಟಿಎಂಗಳಿವೆ. ಇನ್ನು ಹನ್ನೊಂದು ಕೋಟಿ ಜನಸಂಖ್ಯೆಯಿರುವ ಮಹಾರಾಷ್ಟ್ರದಲ್ಲಿ 25 ಸಾವಿರದಷ್ಟು ಎಟಿಎಂಗಳಿವೆ.

ಸಾಲಿನಲ್ಲಿ ನಿಲ್ಲಿಸಿದವರ ಶಿಕ್ಷಿಸಿ
ಉತ್ತರ ಪ್ರದೇಶದ ಚುನಾವಣೆ ಮುಂದಿಟ್ಟುಕೊಂಡು, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಎರಡೂ ಜನರ ಕೋಪವನ್ನು ಗ್ರಹಿಸಿ, ಬಿಜೆಪಿ ನಿರ್ನಾಮಕ್ಕೆ ಸಿದ್ಧವಾಗುತ್ತಿವೆ. ಲಖನೌದ ಸಮಾವೇಶವೊಂದರಲ್ಲಿ ಮಾತನಾಡಿದ ಮಾಯಾವತಿ, ನಿಮ್ಮನ್ನು ಇಂಥ ಸಾಲಿನಲ್ಲಿ ನಿಲ್ಲಿಸಿದ್ದ ಬಿಜೆಪಿಯಾಗಿ ಸರಿಯಾದ ಶಿಕ್ಷೆ ನೀಡಿ ಎಂದಿದ್ದಾರೆ.

ಎರಡು ಲಕ್ಷ ಪರಿಹಾರ
ಇನ್ನು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಸಹ, ಜನರು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ನೋಟು ಬದಲಾವಣೆಗೆ ನಿಂತಾಗ ಮೃತಪಟ್ಟ ಪ್ರಕರಣಗಳಲ್ಲಿ ಮೊದಲಿಗೆ ಎರಡು ಲಕ್ಷ ರುಪಾಯಿ ಪರಿಹಾರ ಘೋಷಣೆ ಮಾಡಿದ್ದು ಉತ್ತರಪ್ರದೇಶ ಸರಕಾರ.

ಮೂವರ ಸಾವು ದೃಢ
ಇನ್ನೂ ಖಾತ್ರಿಯಾಗದ ವರದಿ ಆಧರಿಸಿ ಹೇಳುವುದಾದರೆ ಅಪನಗದೀಕರಣಕ್ಕೆ ತಳಕು ಹಾಕಿಕೊಂಡಂತೆ ಉತ್ತರ ಪ್ರದೇಶದಲ್ಲಿ ಮೂವತ್ತು ಮಂದಿ ಮೃತಪಟ್ಟಿದ್ದಾರೆ. ಇಡೀ ದೇಶದಲ್ಲಿ ಎಂಬತ್ತೈದು ಸಾವುಗಳಾಗಿವೆ. ಈವರೆಗೆ ಯುಪಿಯಲ್ಲಿ ಮೂರು ಪ್ರಕರಣಗಳು ಸಾಬೀತಾಗಿವೆ.

ಬಿತ್ತನೆಗೆ ತೊಂದರೆ, ಮದುವೆಗೆ ಹಣ ಸಿಗದ ಸಿಟ್ಟು
ಉತ್ತರ ಪ್ರದೇಶದ ಗ್ರಾಮೀಣ ಭಾಗದಲ್ಲಿ ಈ ಸಿಟ್ಟು ಇನ್ನೂ ಹೆಚ್ಚಾಗಿದೆ. ಅಕ್ಷರ ಜ್ಞಾನ ಇಲ್ಲದ ಅವರಿಗೆ ಡೆಬಿಟ್ ಕಾರ್ಡ್ ಬಳಕೆ ಬಗ್ಗೆ ಗೊತ್ತಿಲ್ಲ. ನೋಟು ಬದಲಾವಣೆ ಮಾಡಿಕೊಳ್ಳುವಾಗ ವಂಚನೆಗೊಳಗಾಗುವ ಸಾಧ್ಯತೆಯಿದೆ. ಜತೆಗೆ ಅಲ್ಲಿ ಬಿತ್ತನೆ ಮೇಲೆ ನೋಟು ರದ್ದು ಪರಿಣಾಮ ಬೀರಿದೆ. ಮದುವೆಗೆ ಎರಡೂವರೆ ಲಕ್ಷ ರುಪಾಯಿ ಮಾತ್ರ ಡ್ರಾ ಮಾಡಬಹುದು ಎಂಬ ನಿಯಮ ಇನ್ನೂ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications