ಶಿಯಾ, ಸುನ್ನಿ ವಕ್ಫ್ ಬೋರ್ಡ್ ವಿಸರ್ಜನೆಗೊಳಿಸಿ ಸರಕಾರದ ಆದೇಶ
ಬ್ರಹಾಂಡ ಭ್ರಷ್ಟಾಚಾರ ಕೇಳಿ ಬಂದ ಹಿನ್ನಲೆಯಲ್ಲಿ, ಶಿಯಾ ಮತ್ತು ಸುನ್ನಿ ವಕ್ಫ್ ಬೋರ್ಡ್ ಅನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಸರ್ಜನೆಗೊಳಿಸಿ ಉತ್ತರಪ್ರದೇಶ ಸರಕಾರ ಆದೇಶ ಹೊರಡಿಸಿದೆ.
ಲಕ್ನೋ, ಜೂ 16 (ಪಿಟಿಐ) : ಪವಿತ್ರ ರಂಜಾನ್ ಮಾಸದಲ್ಲಿ ಶಿಯಾ ಮತ್ತು ಸುನ್ನಿ ವಕ್ಫ್ ಬೋರ್ಡ್ ಅನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಸರ್ಜನೆಗೊಳಿಸಿ ಉತ್ತರಪ್ರದೇಶ ಸರಕಾರ ಆದೇಶ ಹೊರಡಿಸಿದೆ.
ಶಿಯಾ ಮತ್ತು ಸುನ್ನಿ ವಕ್ಫ್ ಬೋರ್ಡ್ ನಲ್ಲಿ ಬ್ರಹಾಂಡ ಭ್ರಷ್ಟಾಚಾರ ಕೇಳಿ ಬಂದ ಹಿನ್ನಲೆಯಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಈ ಆದೇಶ ಹೊರಡಿಸಿದೆ. ವಕ್ಫ್ ಕೌನ್ಸಿಲ್ ಆಫ್ ಇಂಡಿಯಾ ನಡೆಸಿದ ವಿಚಾರಣೆಯ ನಂತರ ಯೋಗಿ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಶಿಯಾ ವಕ್ಫ್ ಬೋರ್ಡ್ ಚೇರ್ಮೆನ್ ವಾಸಿಂ ರಿಜ್ವಿ, ಮಾಜಿ ಸಚಿವ ಮತ್ತು ಸಮಾಜವಾದಿ ಪಕ್ಷದ ಮುಖಂಡ 'ಎಮ್ಮೆ' ಖ್ಯಾತಿಯ ಅಜಂ ಖಾನ್, ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನಲೆಯಲ್ಲಿ ಸರಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಉತ್ತರಪ್ರದೇಶದ ವಕ್ಫ್ ಖಾತೆಯ ಸಚಿವ ಮೊಹ್ಸಿನ್ ರಾಜಾ ಹೇಳಿದ್ದಾರೆ.

ಉತ್ತರಪ್ರದೇಶ ವಕ್ಫ್ ಬೋರ್ಡ್ ನಲ್ಲಿ ಭ್ರಷ್ಟಾಚಾರ ನಡೆದ ಬಗ್ಗೆ ವಕ್ಫ್ ಕೌನ್ಸಿಲ್ ಆಫ್ ಇಂಡಿಯಾ ವಿಚಾರಣೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿ ಆಧರಿಸಿ ಯೋಗಿ ಸರಕಾರ 'ಪವಿತ್ರ ರಂಜಾನ್' ಮಾಸ ನಡೆಯುತ್ತಿರುವ ವೇಳೆಯೇ ವಿವಾದಕ್ಕೆ ಎಡೆಮಾಡಿಕೊಡುವ ನಿರ್ಧಾರವನ್ನು ಪ್ರಕಟಿಸಿದೆ.
ಸಯ್ಯದ್ ಇಜಾಜ್ ಅಬ್ಬಾಸ್ ನಕ್ವಿ ನೇತೃತ್ವದ ಸತ್ಯ ಸಂಶೋಧನಾ ಸಮಿತಿ ಉತ್ತರಪ್ರದೇಶ ಮತ್ತು ಜಾರ್ಖಂಡ್ ವಕ್ಫ್ ಬೋರ್ಡಿನಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಎರಡೂ ಸರಕಾರಕ್ಕೆ ವರದಿ ನೀಡಿತ್ತು.
ಪ್ರಮುಖವಾಗಿ ಅಖಿಲೇಶ್ ಯಾದವ್ ಸರಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಅಜಂಖಾನ್, ವಕ್ಫ್ ಬೋರ್ಡಿನ ಕೋಟ್ಯಾಂತರ ರೂಪಾಯಿ ಮೌಲ್ಯದ ಅಸ್ತಿಯನ್ನು ಕಬಳಿಸಿದ್ದಾರೆಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ.
ಮೌಲಾನಾ ಜೋಹರ್ ಆಲಿ ಫೌಂಡೇಶನ್ ಟ್ರಸ್ಟ್ ಎನ್ನುವ ಹೆಸರಿನಲ್ಲಿ ಟ್ರಸ್ಟ್ ಹುಟ್ಟುಹಾಕಿ, ವಕ್ಫ್ ಬೋರ್ಡಿನ ಆಸ್ತಿಪಾಸ್ತಿಗಳನ್ನು ತನ್ನ ಒಡೆತನದ ಟ್ರಸ್ಟಿಗೆ ವರ್ಗಾಯಿಸಿಕೊಂಡಿದ್ದಾರೆ ಎನ್ನುವ ಆರೋಪ ಅಜಂಖಾನ್ ಅವರ ಮೇಲಿದೆ.












Click it and Unblock the Notifications