ಕಾಂಗ್ರೆಸ್-ಬಿಜೆಪಿ ಬಿಸಿ ಬಿಸಿ ರೆಸಿಪಿ ಪಾಲಿಟಿಕ್ಸ್! ಯೋಗಿ-ಸಿದ್ದು ಜಿದ್ದಾಜಿದ್ದಿ!
ಲಕ್ನೋ, ಜನವರಿ 13: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಿನ ವಾಕ್ಸಮರ ಇನ್ನೂ ನಿಂತಂತಿಲ್ಲ.
ಯೋಗಿ ಆದಿತ್ಯನಾಥ್ ಅವರು ಕರ್ನಾಟಕಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಬೀಸಿದ ಮಾತಿನ ಛಾಟಿ, ನಂತರ ಅದಕ್ಕೆ ಪ್ರತ್ಯುತ್ತರ ನೀಡಿದ ಯೋಗಿ ಆದಿತ್ಯನಾಥ್... ಒಂದೆರಡು ದಿನದ ನಂತರ ಎಲ್ಲವೂ ತಣ್ಣಗಾಯಿತು ಎಂದುಕೊಂಡರೆ, ಅದು ಈಗಷ್ಟೇ ಆರಂಭ ಎನ್ನುತ್ತಿದ್ದಾರೆ ಉಭಯ ಮುಖ್ಯಮಂತ್ರಿಗಳು!
ಹಿಂದುತ್ವ: ಸಿದ್ದರಾಮಯ್ಯ Vs ಯೋಗಿ ಆದಿತ್ಯನಾಥ್: ಬಿಜೆಪಿ ಮೇಲುಗೈ?
'ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಗಾಗಿ ಈ ರೆಸಿಪಿ ಎಂದು ಎಂದು ಯೋಗಿಯವರನ್ನು ಲೇವಡಿ ಮಾಡಿ ವಿಡಿಯೋವೊಂದನ್ನು ಕಾಂಗ್ರೆಸ್ ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಜ.11 ರಂದು ಟ್ವೀಟ್ ಮಾಡಲಾಗಿತ್ತು. ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಇಂದು ಮತ್ತೊಂದು ರೆಸೆಪಿ ತಯಾರಿಸಿದ್ದಾರೆ ಯೋಗಿ ಆದಿತ್ಯನಾಥ್!
ಏನಿದು ಟ್ವಿಟ್ಟರ್ ವಾರ್, ಏನಿದು ರೆಸಿಪಿ ಪಾಲಿಟಿಕ್ಸ್... ಇಲ್ಲಿದೆ ಮಾಹಿತಿ!
|
ಯೋಗಿಗಾಗಿ ಕಾಂಗ್ರೆಸ್ ರೆಸಿಪಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಾಗಿ ಕಾಂಗ್ರೆಸ್ ತಯಾರಿಸಿದ ರೆಸಿಪಿಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಅದರಲ್ಲಿ ರೆಸಿಪಿ ಮಾಡುವ ವಿಧಾನವನ್ನು ಸವಿವರವಾಗಿ ನೀಡಲಾಗಿತ್ತು! ಕ್ರಿಮಿನಲ್ ಕೇಸುಗಳು 1 ಕೆಜಿ(ಯೋಗಿ ವಿರುದ್ಧ ದಾಖಲಾದ ಅಪರಾಧ ಪ್ರಕರಣಗಳ ವಿವರ), ಕೇಸರಿ ಬಣ್ಣ(1 ಲೀ.), ಮೊಸಳೆ ಕಣ್ಣೀರು ಅರ್ಧ ಕಪ್.... ಹೀಗೇ ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸಿ, ಮತ್ತು ಯೋಗಿ ಆದಿತ್ಯನಾಥ್ ಅವರನ್ನು ಕೋಮುವಾದಿ ಎಂದು ದೂರಿ ವಿಡಿಯೋ ತಯಾರಿಸಲಾಗಿತ್ತು!
|
ಸಿದ್ದುಗಾಗಿ ಬಿಜೆಪಿ ರೆಸಿಪಿ!
ಈ ರೆಸಿಪಿ ತಯಾರಿಸಿ, ತಿಂದು, ಉಂಡು ಮುಗಿಯಿತು ಅಂದ್ಕೊಂಡ್ರಾ? ಖಂಡಿತಾ ಇಲ್ಲ. ಬಿಜೆಪಿಗೆ ಅಷ್ಟೆಲ್ಲ ರುಚಿ ರುಚಿ ರೆಸಿಪಿ ಮಾಡಿಕೊಟ್ಟ ಕಾಂಗ್ರೆಸ್ ಗೆ ಪ್ರತಿಯಾಗಿ ಏನನ್ನಾದರೂ ಕೊಡದೆ ಇದ್ದರೆ ಆದೀತೆ? ಅದಕ್ಕೆಂದೇ ಮತ್ತಷ್ಟು ರುಚಿ, ರುಚಿ ರೆಸಿಪಿ ತಯಾರಿಸಲು ಬಿಜೆಪಿ ಮುಂದಾಗಿದೆ. ಈ ರೆಸಿಪಿ ರಾಜಕೀಯದಲ್ಲಿ ಕರ್ನಾಟಕದಲ್ಲಿ ಒಂದು ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ 1002 ರೈತರು, ಸಿದ್ದರಾಮಯ್ಯ ಅವರ ವಿರುದ್ಧ ದಾಖಲಾದ ಪ್ರಕರಣಗಳು, ಹಿಂದುಪರ ಸಂಘಟನೆಯ ಕಾರ್ಯಕರ್ತರ ಅವ್ಯಾಹತ ಹತ್ಯೆ... ಈ ಎಲ್ಲವನ್ನೂ ಸೇರಿಸಿ ಈ ವಿಡಿಯೋ ತಯಾರಾಗಿದೆ!
ಯೋಗಿ ಎಂದಾದ್ರೂ ದನ ಸಾಕಿದ್ರಾ,ಸೆಗಣಿ ಬಾಚಿದ್ರಾ? ಸಿದ್ದು ಟ್ವೀಟಾಸ್ತ್ರ!
ಬೆಂಗಳೂರಿನಲ್ಲೂ ಸಿದ್ದುಗೆ ಗುದ್ದಿದ್ದ ಯೋಗಿ!
ಬಿಜೆಪಿಯ ಪರಿವರ್ತನಾ ಯಾತ್ರೆ ಬೆಂಗಳೂರಿನಲ್ಲಿದ್ದ ಸಮಯದಲ್ಲಿ ಇಲ್ಲಿಗೆ ಆಗಮಿಸಿದ್ದ ಯೋಗಿ ಆದಿತ್ಯನಾಥ್ ಸಿದ್ದರಾಮಯ್ಯನವರು ಮತಗಳ ನಡುವೆ ಕಂದಕ ಸೃಷ್ಟಿಸಿ ಆಳ್ವಿಕೆ ನಡೆಸುತ್ತಿದ್ದಾರೆ, ಅಲ್ಲದೆ ಮತ ಮತ್ತು ರಾಜಕೀಯ ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡುತ್ತಿದ್ದಾರೆ ಎಂದು ದೂರಿದ್ದರು. ಅಲ್ಲದೆ ಗೋಮಾಂಸ ಭಕ್ಷಣೆ, ಹಿಂದುಪರ ಸಂಘಟನೆಯ ಕಾರ್ಯಕರ್ತರ ಮಾರಣ ಹೋಮದ ಕುರಿತೂ ಸಿದ್ದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಯೋಗಿಯನ್ನು ಮಾತಲ್ಲೇ ತಿವಿದ ಸಿದ್ದು!
ಯೋಗಿಯವರ ಬೆಂಗಳೂರು ಭಾಷಣಕ್ಕೆ ಪ್ರತಿಯಾಗಿ ಮಾತಿನಲ್ಲೇ ತಿವಿದ ಸಿದ್ದರಾಮಯ್ಯ, ಬೇರೆಯವರ ಆಹಾರ ಪದ್ಧತಿಯನ್ನು ಪ್ರಶ್ನಿಸುವುದಕ್ಕೆ ಯೋಗಿ ಯಾರು? ಉತ್ತರ ಪ್ರದೇಶದಲ್ಲಿ ದಿನ ದಿನವೂ ಜನರು ಹಸಿವಿನಿಂದ ಸಾಯುವ ಪ್ರಕರಣಗಳು ಸುದ್ದಿಯಾಗುತ್ತಿವೆ. ಮೊದಲು ಅವುಗಳ ಬಗ್ಗೆ ಗಮನ ಹರಿಸಲಿ, ನಂತರ ನಮಗೆ ಸಲಹೆ ನೀಡಲಿ ಎಂದು ಖಾರವಾಗಿ ನುಡಿದಿದ್ದರು.