ಕೇಂದ್ರ ಸಚಿವ ಅಶ್ವಿನಿ ಚೌಬೆ ಬೆಂಗಾವಲಿನ ವಾಹನ ಅಪಘಾತ: ಇಬ್ಬರಿಗೆ ತೀವ್ರ ಗಾಯ
ಪಾಟ್ನಾ, ಜನವರಿ 16: ಕೇಂದ್ರ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾದ ಘಟನೆ ಭಾನುವಾರ ಸಂಭವಿಸಿದ್ದು, ಈ ವೇಳೆ ಹಲವು ಪೊಲೀಸರು ಗಾಯಗೊಂಡಿದ್ದಾರೆ.
ಕೇಂದ್ರ ಸಚಿವರು ಅಶ್ವಿನಿ ಚೌಬೆ ಅವರು ಭಾನುವಾರ ಬೆಳಗ್ಗೆ ಬಕ್ಸರ್ ನಿಂದ ಪಾಟ್ನಾಗೆ ರಸ್ತೆ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಬೆಂಗಾವಲು ವಾಹನ ಪಲ್ಟಿಯಾಗಿ ಈ ಅವಘಡ ಸಂಭವಿಸಿದೆ. ಈ ಕುರಿತ ವಿಡಿಯೋವನ್ನು ಸಚಿವರು ಟ್ವೀಟ್ ಮಾಡಿದ್ದಾರೆ.
ಈ ಕುರಿತು ಹೇಳಿಕೊಂಡಿರುವ ಅವರು, ಬಕ್ಸರ್ನಿಂದ ಪಾಟ್ನಾಕ್ಕೆ ತೆರಳುವ ಮಾರ್ಗ ಮಧ್ಯದ ಕಾರ್ಕೇಡ್ನಲ್ಲಿದ್ದ ಕೊರಂಸಾರೈ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬೆಂಗಾವಲಿನ ಕಾರು ಮಥಿಲ-ನಾರಾಯಣಪುರ ರಸ್ತೆಯಲ್ಲಿರುವ ಸೇತುವೆಯ ಬಳಿ ಅಪಘಾತಕ್ಕೀಡಾಗಿದೆ. ಕಾರು ಪಲ್ಟಿಯಾಗಿದೆ.
ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಎಲ್ಲರೂ ಕ್ಷೇಮವಾಗಿದ್ದಾರೆ. ಎಲ್ಲರ ಮೇಲೆ ಭಗವಾನ್ ಶ್ರೀರಾಮನ ಕೃಪೆ ಇದೆ. ಗಾಯಗೊಂಡ ಪೊಲೀಸರು ಮತ್ತು ಕಾರಿನ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಲಾಗಿತ್ತು. ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದರು.
ಬೆಂಗಾವಲು ಕಾರಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ದುಮ್ರಾವ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಪೊಲೀಸರಿಗೆ ಮಾತ್ರ ಹೆಚ್ಚಿನ ಗಾಯಗಳಾಗಿವೆ. ಅವರನ್ನು ಹೆಚ್ಚಿನ ಚಿಕಿತ್ಸಗಾಗಿ ಪಾಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಶ್ವಿನಿ ಚೌಬೆ ಅವರು ಕೇಂದ್ರದ ಬಿಹಾರ ರಾಜ್ಯದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವರಾಗಿದ್ದಾರೆ. ಕೆಲಸದ ನಿಮಿತ್ತ ಪಾಟ್ನಾದತ್ತ ತೆರಳುತ್ತಿದ್ದಾಗ, ಅವರ ಬೆಂಗಾವಲಿನ ವಾಹನದ ನಿಯಂತ್ರಣ ತಪ್ಪಿದ್ದರಿಂದ ಈ ಅಪಘಾತ ಸಂಭವಿಸಿದೆ.