ಮುಜಾಫರ್ ಪುರ್ ಕೇಸ್ : ಬಿಹಾರ ಸರ್ಕಾರಕ್ಕೆ ಸುಪ್ರೀಂನಿಂದ ಛೀಮಾರಿ
ನವದೆಹಲಿ, ನವೆಂಬರ್ 27: ಮುಜಾಫರ್ ಪುರದ ಆಶ್ರಮ ತಾಣಗಳಲ್ಲಿ ನಡೆದಿರುವ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಿತೀಶ್ ಕುಮಾರ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರದಂದು ಮತ್ತೊಮ್ಮೆ ಕೈಗೆತ್ತಿಕೊಳ್ಳಲಿದೆ.
ಈ ಪ್ರಕರಣದಲ್ಲಿ ಎಫ್ಐಆರ್ ಹಾಕುವುದರಿಂದ ಹಿಡಿದು ಸೆಕ್ಷನ್ 377 ಸೇರಿಸುವ ತನಕ ಹಾಗೂ ಪೋಸ್ಕೋ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸುವ ತನಕ ಎಲ್ಲದರಲ್ಲೂ ವಿಳಂಬ ನೀತಿ ಅನುಸರಿಸಲಾಗಿರುವುದೇಕೆ ಎಂದು ಸರ್ಕಾರವನ್ನು ಕೋರ್ಟ್ ಪ್ರಶ್ನಿಸಿದೆ.
'ಮುಜಾಫರ್ಪುರ ಆಶ್ರಯ ನಿವಾಸದಲ್ಲಿನ ಪ್ರಕರಣದ ಗಂಭೀರತೆ ನಿಮಗೆ ತಿಳಿದಿದೆಯಾ..? ಸರ್ಕಾರ ಏನು ಮಾಡುತ್ತಿದೆ..? ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ, ಅಮಾನವೀಯ. ಅತ್ಯಂತ ಗಂಭೀರವಾಗಿ ಪ್ರಕರಣವನ್ನು ತನಿಖೆ ನಡೆಸಬೇಕು' ಎಂದು ಜಸ್ಟೀಸ್ ದೀಪಕ್ ಗುಪ್ತಾ ಅವರು ಪ್ರಶ್ನಿಸಿದ್ದಾರೆ.
ನಿತೀಶ್ ಕುಮಾರ್ ಅವರ ಕ್ಯಾಬಿನೆಟ್ ನಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವೆಯಾಗಿದ್ದ ಮಂಜು ವರ್ಮಾ ಅವರು ಈ ಪ್ರಮುಖದ ಆರೋಪಿಯಾಗಿದ್ದರು. ಮಂಜು ಅವರು ತಮ್ಮ ಮೇಲೆ ಆರೋಪ ಕೇಳಿ ಬಂದ ಬಳಿಕ, ರಾಜೀನಾಮೆ ನೀಡಿ ನಾಪತ್ತೆಯಾಗಿದ್ದರು.
ಮುಜಾಫರ್ ಪುರ್ ರೇಪ್ ಕೇಸ್ : ಮಾಜಿ ಸಚಿವೆ ಮಂಜು ಶರಣಾಗತಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವೆ ಮಂಜು ವರ್ಮಾ ಅವರನ್ನು ಇನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದ ಸುಪ್ರೀಂಕೋರ್ಟ್, ಬಿಹಾರದ ಟಾಪ್ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಇದಾದ ಬಳಿಕ ಮಂಜು ವರ್ಮಾ ಅವರು ಇತ್ತೀಚೆಗೆ ಕೋರ್ಟಿಗೆ ಶರಣಾಗಿದ್ದಾರೆ.
ಮಂಜು ವರ್ಮಾ ಅವರ ಪತ್ನಿ ಚಂದ್ರಶೇಖರ್ ಅವರು ಕಳೆದ ತಿಂಗಳು, ಮಂಜುಹಾಲ್ ಜಿಲ್ಲಾ ನ್ಯಾಯಾಲಯದ ಮುಂದೆ ಶರಣಾಗಿದ್ದರು. ಮುಜಾಫರ್ ಪುರದ ಆಶ್ರಯ ಕೇಂದ್ರಗಳಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳಗಳು ನಡೆದಿದ್ದು, ಬ್ರಜೇಶ್ ಠಾಕೂರ್ ಎಂಬ ವ್ಯಕ್ತಿ ಮುಖ್ಯ ಆರೋಪಿಯಾಗಿದ್ದಾನೆ ಬ್ರಜೇಶ್ ಜತೆಗೆ ಚಂದ್ರಶೇಖರ್ ವರ್ಮಾ ಅವರು ಅನೇಕ ಬಾರಿ ಫೋನ್ ಕರೆ ಮೂಲಕ ಮಾತನಾಡಿರುವುದು ಪತ್ತೆಯಾಗಿದೆ.