ಇಡಿ ನಿರ್ದೇಶಕರಿಂದ ಡಿಕೆಶಿಗೆ ಫೋನ್ ಕಾಲ್, ದೆಹಲಿ ಪೊಲೀಸರಿಂದ ತನಿಖೆ
Recommended Video
ನವದೆಹಲಿ, ಸೆಪ್ಟೆಂಬರ್ 14: ಅಪರೂಪದ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯದ ನಿರ್ದೇಶಕರ ಅಧಿಕೃತ ಫೋನನ್ನು ಕರೆ ಮಾಡಲು ಬಳಸಿದ ಸಂಬಂಧ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಫೋನ್ ಕರೆ ಸ್ವೀಕರಿಸಿದ ವ್ಯಕ್ತಿಗಳಲ್ಲಿ ಕರ್ನಾಟಕದ ಇಂಧನ ಸಚಿವ ಡಿಕೆ ಶಿವಕುಮಾರ್ ಹೆಸರೂ ಇದೆ.
ಐಟಿ ದಾಳಿ ಬಳಿಕ ಮೊದಲ ಬಾರಿಗೆ ಮಾವನ ಮನೆಗೆ ಡಿಕೆಶಿ
ಸಮನ್ಸ್ ಜಾರಿ ಮಾಡಲು ನಿರ್ದೇಶಕರ ಫೋನಿನಿಂದ ಕರೆ ಮಾಡಲಾಗಿದೆ.ಪ್ರಾಥಮಿಕ ಮಾಹಿತಿಗಳ ಪ್ರಕಾರ ಇದೊಂದು ಕಾಲರ್ ಐಡಿ ವಂಚನೆ ಪ್ರಕರಣ ಎನ್ನಲಾಗಿದೆ. ಶಿವಕುಮಾರ್ ಸೇರಿದಂತೆ ಕರೆ ಸ್ವೀಕರಿಸಿದವರು, ಇಡಿಯ ಕಡೆಯಿಂದ ಕರೆ ಬಂದಿದೆ ಎಂದು ಒಪ್ಪಿಕೊಂಡಿದ್ದಾರೆ.
ಇಡಿ ನಿರ್ದೇಶಕರ ಫೋನಿನಿಂದ ಬಂದ ಕರೆ ಸ್ವೀಕರಿಸಿದವರೆಲ್ಲ ಆರಂಭದಲ್ಲೇ ಇದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಸಾಮಾನ್ಯವಾಗಿ ರಿಜಿಸ್ಟರ್ ಪೋಸ್ಟ್ ಅಥವಾ ತನ್ನ ಅಧಿಕಾರಿಗಳ ಮೂಲಕವೇ ಇಡಿ ಸಮನ್ಸ್ ಜಾರಿ ಮಾಡುತ್ತದೆ. ಫೋನ್ ಕರೆ ಮೂಲಕ ಅದರಲ್ಲೂ ನಿರ್ದೇಶಕರ ಫೋನ್ ಮೂಲಕ ಸಮನ್ಸ್ ಜಾರಿ ಮಾಡಿದ ಉದಾಹರಣೆಗಳಿಲ್ಲ.
ಈ ಹಿನ್ನಲೆಯಲ್ಲಿ ಇಡಿಯ ಅಧಿಕಾರಿಗಳು ತಮ್ಮ ನಿರ್ದೇಶಕ ಕರ್ನಲ್ ಸಿಂಗ್ ಅಧಿಕೃತ ಫೋನಿನಿಂದ ಯಾರೋ ಅನಧಿಕೃತವಾಗಿ ಕರೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಬುಧವಾರ ಹೇಳಿಕೆ ನೀಡಿದ್ದ ಡಿಕೆ ಶಿವಕುಮಾರ್, ತಮಗೆ ಇಡಿಯ ಕಡೆಯಿಂದ ಎಂದು ಹೇಳಿ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು. ನಾನು ಕರೆ ಬಂದ ಸಂಖ್ಯೆಯನ್ನು ಮರುಪರಿಶೀಲನೆ ಮಾಡಿದಾಗ ನಿರ್ದೇಶಕ ಅಧಿಕೃತ ಸಂಖ್ಯೆ ಎಂದು ಗೊತ್ತಾಯಿತು. ಅವರು ನನಗೆ ನೊಟೀಸ್ ನೀಡಲು ಉದ್ದೇಶಿಸಿದ್ದರು. ಇದಕ್ಕಾಗಿ ಅವರಿಗೆ ನನ್ನ ವಿಳಾಸ ಬೇಕಾಗಿತ್ತು ಎಂದು ಹೇಳಿಕೆ ನೀಡಿದ್ದರು.
ಈ ಸಂಬಂಧ ದೆಹಲಿ ಪೊಲೀಸರ 'ಎಕಾನಾಮಿಕ್ ಅಫೆನ್ಸ್ ವಿಂಗ್'ಗೆ ಇಡಿ ದೂರು ಸಲ್ಲಿಸಿದ್ದು, ಇದೇ ರೀತಿ ದೆಹಲಿ ಮೂಲದ ವ್ಯಕ್ತಿಯೊಬ್ಬರಿಗೂ ಸಮನ್ಸ್ ನೀಡಲು ಕರೆ ಮಾಡಲಾಗಿರುವುದಾಗಿ ದೂರಿನಲ್ಲಿ ಹೇಳಿದೆ.