ಉದ್ಧವ್ ಠಾಕ್ರೆ ರಾಜೀನಾಮೆ; ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ
ಮುಂಬೈ, ಜೂನ್ 30; ಬುಧವಾರ ರಾತ್ರಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ.
ಮುಂಬೈನ ತಾಜ್ ಹೋಟೆಲ್ನಲ್ಲಿ ಬಿಜೆಪಿ ನಾಯಕರು ಸಿಹಿ ಹಂಚಿ, ಘೋಷಣೆಗಳನ್ನು ಕೂಗಿದರು. ಸಂಭ್ರಮಾಚರಣೆಯಲ್ಲಿ ಕೇಂದ್ರಬಿಂದುವಾಗಿದ್ದು, ದೇವೇಂದ್ರ ಫಡ್ನವಿಸ್.
ದೇವೇಂದ್ರ ಫಡ್ನವೀಸ್ ಮರಾಠಿ ಭಾಷಣದ ವೀಡಿಯೊ ಕ್ಲಿಪ್ ಅನ್ನು ಟ್ವೀಟ್ ಮಾಡಲಾಗಿದೆ. ಮರಾಠಿಯಲ್ಲಿ ಅದರ ಜೊತೆಗಿನ ಶೀರ್ಷಿಕೆಯು "ನಾನು ಮತ್ತೆ ಬರುತ್ತೇನೆ. ಹೊಸ ಮಹಾರಾಷ್ಟ್ರದ ಸೃಷ್ಟಿಗಾಗಿ! ಜೈ ಮಹಾರಾಷ್ಟ್ರ" ಎಂದು ಬರೆದಿದೆ.
ರಾಜೀನಾಮೆಯ ಭಾವುಕ ಭಾಷಣ; ಉದ್ಧವ್ ಠಾಕ್ರೆ ಹೇಳಿದ್ದೇನು?
ರಾಜ್ಯಪಾಲರ ಆದೇಶದಂತೆ ಗುರುವಾರ ಬೆಳಗ್ಗೆ 11 ಗಂಟೆಗೆ ತಮ್ಮ ಸರ್ಕಾರವು ವಿಶ್ವಾಸಮತ ಪರೀಕ್ಷೆಯನ್ನು ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರು.
ಉದ್ಧವ್ ಠಾಕ್ರೆ ರಾಜೀನಾಮೆಯೊಂದಿಗೆ ಬಹುಮತ ಸಾಬೀತು ಪರೀಕ್ಷೆ ಅನೂರ್ಜಿತವಾಗಿದೆ. ಫಡ್ನವೀಸ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಉದ್ಧವ್ ಠಾಕ್ರೆ ಮಂತ್ರಿಗಳ ಸಹಾಯ ಮತ್ತು ಸಹಕಾರಕ್ಕಾಗಿ ಔಪಚಾರಿಕವಾಗಿ ಧನ್ಯವಾದಗಳನ್ನು ಅರ್ಪಿಸಿದರು.
ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾಳೆ ಚೆಲ್ಲಬಹುದಾದ ಶಿವಸೈನಿಕರ ರಕ್ತದಲ್ಲಿ ನಾನು ಕೈ ಹಾಕಲು ಬಯಸುವುದಿಲ್ಲ" ಎಂದು ಠಾಕ್ರೆ ಅವರು ಬುಧವಾರ ಸಂಜೆ ಫೇಸ್ಬುಕ್ ಲೈವ್ ನಲ್ಲಿ ತಮ್ಮ ರಾಜೀನಾಮೆಯನ್ನು ಘೋಷಿಸಿದರು. ನಾವು ಯಾರನ್ನು ಪ್ರಚಾರ ಮಾಡಿ ಬೆಳೆಸಿದ್ದೇವೋ, ಅವರೇ ನಮಗೆ ದ್ರೋಹ ಮಾಡಿದ್ದಾರೆ ಎಂದು ಅವರು ಬಂಡಾಯ ಶಾಸಕರ ಮೇಲೆ ಕಿಡಿಕಾರಿದರು.