ಕಾಶ್ಮೀರ ಗಡಿಯಲ್ಲಿ ಪ್ರಾಣ ಅರ್ಪಿಸಿದ ಮತ್ತೊಬ್ಬ ಕನ್ನಡಿಗ
ಶ್ರೀನಗರ, ಫೆಬ್ರವರಿ , 13: ಸಿಯಾಚಿನ್ ನಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರ ನೆನಪಿನ ನೋವು ಕಾಡುತ್ತಿರುವಾಗಲೇ ಗಡಿಯಲ್ಲಿ ಮತ್ತಿಬ್ಬರು ಸೈನಿಕರು ಭಾರತ ಮಾತೆಗೆ ಪ್ರಾಣ ಅರ್ಪಿಸಿದ್ದಾರೆ. ವಿಜಯಪುರದ ಯೋಧ ಸಹದೇವ್ ಮೋರೆ ಸಹ ಪ್ರಾಣಾರ್ಪಣೆ ಮಾಡಿದ್ದಾರೆ.
ಶನಿವಾರ ಬೆಳಗ್ಗೆ ಉಗ್ರರ ಗುಂಡಿನ ದಾಳಿಗೆ ಇಬ್ಬರು ಯೋಧರು ಎದೆಯೊಡ್ಡಿದ್ದಾರೆ. ಅಲ್ಲದೇ ನಾಲ್ವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಸೈನಿಕರು 5 ಉಗ್ರಗಾಮಿಗಳನ್ನು ಕೊಂದು ಹಾಕಿದ್ದಾರೆ.[ಹನುಮಂತಪ್ಪ ಕೊಪ್ಪದ್ ಸಾವಿನ ನೋವು]
ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಗುಂಡಿನ ಕಾಳಗ ನಡೆದಿದೆ. ಚೌಕಿಬಾಲ್ ಗಡಿ ಪ್ರದೇಶದ ಮರ್ಸಾರಿ ಹಳ್ಳಿಯಲ್ಲಿ ಉಗ್ರರು ಒಳ ನುಸುಳುತ್ತಿರುವ ಮಾಹಿತಿ ತಿಳಿದ ಯೋಧರು, ಕಾರ್ಯಾಚರಣೆಗೆ ಮುಂದಾದಾಗ ಗುಂಡಿನ ಚಕಮಕಿ ನಡೆದಿದೆ. ಗಾಯಗೊಂಡ ನಾಲ್ವರು ಯೋಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.[ಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿ]
ಮರ್ಸಾರಿ ಹಳ್ಳಿಯ ಮನೆಯಲ್ಲಿ ಉಗ್ರರ ತಂಡವೊಂದು ಬೀಡುಬಿಟ್ಟಿದೆ ಎಂಬ ಮಾಹಿತಿ ತಿಳಿದು ಬಂದ ಹಿನ್ನಲೆಯಲ್ಲಿ ರಾಷ್ಟ್ರೀಯ ರೈಫಲ್ಸ್ ದಳ, ವಿಶೇಷ ಕಾರ್ಯಚರಣೆ ತಂಡ ಮತ್ತು ರಾಜ್ಯ ಮತ್ತು ಕೇಂದ್ರ ಮೀಸಲು ಪಡೆ ಮನೆಯನ್ನು ಸುತ್ತುವರೆದವು. ಕಳೆದ 18 ಗಂಟೆಗಳಿಂದ ಗುಂಡಿನ ಕಾಳಗ ನಡೆಯುತ್ತಿದೆ.