ಜಿಎಸ್ ಟಿ ಗುಂಗಲ್ಲಿ ಸದ್ದೇ ಆಗುತ್ತಿಲ್ಲ ವೈದ್ಯರ ದಿನ!
ನವದೆಹಲಿ, ಜುಲೈ 1: ದೇಶದಾದ್ಯಂತ ಜಿಎಸ್ ಟಿ ಕಾವು ಏರಿದ್ದು, ಜಿಎಸ್ ಟಿ ಹವಾದೆದುರು ಬೇರೆಲ್ಲವೂ ಗೌಣವಾಗುತ್ತಿವೆ. ಜುಲೈ1 ಜಿಎಸ್ ಟಿ ಯುಗಾರಂಭದ ದಿನವಷ್ಟೇ ಅಲ್ಲ. ಇಂದು ರಾಷ್ಟ್ರೀಯ ವೈದ್ಯರ ದಿನವೂ ಹೌದು. ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ರೋಗಿಗಳಿಗೆ ಹೊಸ ಬದುಕು ನೀಡುವ ವೈದ್ಯ ವೃತ್ತಿಯನ್ನು ದೇವರ ಕೆಲಸಕ್ಕೆ ಹೋಲಿಸುತ್ತಾರೆ. ಅದಕ್ಕೆಂದೇ ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ಚಾಲ್ತಿಯಲ್ಲಿದೆ.
ಆರೋಗ್ಯ ಕಾಪಾಡುವ ವೈದ್ಯರಿಗೆ ಥ್ಯಾಂಕ್ಸ್ ಹೇಳಿದ ಟ್ವೀಟ್ ಲೋಕ
ಸರ್ವೇ ಸಂತು ನಿರಾಮಯಾಃ (ಎಲ್ಲರೂ ರೋಗಮುಕ್ತರಾಗಿ, ಆರೋಗ್ಯವಂತರಾಗಲಿ) ಎಂಬ ಉದ್ದೇಶವನ್ನಿಟ್ಟುಕೊಂಡು ವೈದ್ಯವೃತ್ತಿಯನ್ನು ಆರಿಸಿಕೊಂಡ ಎಲ್ಲ ವೈದ್ಯರಿಗೂ 'ಒನ್ ಇಂಡಿಯಾ ಕನ್ನಡ' ವೈದ್ಯ ದಿನದ ಶುಭಾಶಯ ಕೋರುತ್ತಿದೆ.
ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಬಿಧನ್ ಚಂದ್ರ ರಾಯ್ ಅವರ ಹುಟ್ಟಿದ ದಿನವಾದ ಜುಲೈ 1 (1882)ಅನ್ನು ರಾಷ್ಟ್ರೀಯ ವೈದ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತ ರತ್ನ ಬಿಸಿ ರಾಯ್ ಪ್ರಖ್ಯಾತ ವೈದ್ಯರು. ಮಾತ್ರವಲ್ಲ, ಮಹಾತ್ಮ ಗಾಂಧೀಜಿಯವರ ಆಪ್ತಮಿತ್ರರೂ, ಅವರ ಖಾಸಗಿ ವೈದ್ಯರೂ ಆಗಿದ್ದ ರಾಯ್, ಸ್ವಾತಂತ್ರ್ಯ ಹೋರಾಟಗಾರರೂ ಹೌದು. ವೈದ್ಯಕೀಯ ಕ್ಷೇತ್ರಕ್ಕೆ ಅವರು ನೀಡಿದ ಕಾಣಿಕೆಯನ್ನು ಮನಗಂಡು ಅವರ ಹುಟ್ಟಿದ ದಿನವನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಇನ್ನೂ ಅಚ್ಚರಿಯ ವಿಷಯ ಎಂದರೆ ಅವರು ಮರಣ ಹೊಂದಿದ ದಿನವೂ ಜುಲೈ 1(1962)!
ಎಂಬಿಬಿಎಸ್ ಪೂರ್ಣಗೊಂಡ ಬಳಿಕ ಗ್ರಾಮೀಣ ಸೇವೆ ಕಡ್ಡಾಯ
ಜಿಎಸ್ ಟಿ ಅಬ್ಬರ ನಡುವಲ್ಲೂ ವೈದ್ಯರ ದಿನಕ್ಕಾಗಿ ಟ್ವಿಟ್ಟರ್ ನಲ್ಲಿ #DoctorsDay ಹ್ಯಾಶ್ ಟ್ಯಾಗ್ ಸೃಷ್ಟಿಯಾಗಿದೆ.
|
ರೋಗಿಗಳ ಆರೋಗ್ಯಕ್ಕೆ ಅವಿರತ ಶ್ರಮ
ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನೂ ಬದಿಗಿಟ್ಟು, ರೋಗಿಗಳ ಆರೋಗ್ಯಕ್ಕಾಗಿ ಅವಿರತವಾಗಿ ಹೋರಾಡುವ ಎಲ್ಲ ವೈದ್ಯರಿಗೂ ವೈದ್ಯ ದಿನದ ಶುಭಾಶಯಗಳು ಎಂದು ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ, ಎನ್ ಸಿಪಿ ಮುಖ್ಯಸ್ಥ ಧನಂಜಯ ಮುಂಡೆ ಟ್ವೀಟ್ ಮಾಡಿದ್ದಾರೆ.
|
ಮನುಕುಲದ ಒಳಿತಿಗಾಗಿ ಶ್ರಮಿಸುವ ವೈದ್ಯರು
ಮನುಕುಲದ ಒಳಿತಿಗಾಗಿ ತಮ್ಮ ಬದುಕನ್ನು ಸಮರ್ಪಿಸಿದ ಎಲ್ಲ ವೈದ್ಯರಿಗೂ ವೈದ್ಯರ ದಿನದ ಶುಭಾಶಯಗಳು ಎಂದು ಕೇಂದ್ರ ಸಚಿವೆ ಹರ್ಸಿಮೃತ್ ಕೌರ್ ಬಾದಲ್ ಟ್ವೀಟ್ ಮಾಡಿದ್ದಾರೆ.
|
ದೇವರ ಮತ್ತೊಂದು ಅವತಾರ
ವೈದ್ಯರು ನಿಜಕ್ಕೂ ದೇವರ ಮತ್ತೊಂದು ಅವತಾರ. ಮತ್ತೊಬ್ಬರ ಸೇವೆಗಾಗಿ ಅವಿರತವಾಗಿ, ಪ್ರಾಮಾಣಿಕವಾಗಿ ದುಡಿಯುತ್ತಿರುವ ಎಲ್ಲ ವೈದ್ಯರಿಗೂ ವೈದ್ಯರ ದಿನದ ಶುಭಾಶಯಗಳು ಎಂದು ಕೇಂದ್ರ ಸಚಿವ ಡಾ. ಮಹೇಶ್ ಶರ್ಮಾ ಟ್ವೀಟ್ ಮಾಡಿದ್ದಾರೆ.
|
ಸಂಜಿಬ್ ಘೋಷ್
ಬಿ.ಸಿ. ರಾಯ್ ಮತ್ತು ಅವರಂತೆ ನಮ್ಮೆಲ್ಲರ ಸ್ವಾಸ್ಥ್ಯಕ್ಕಾಗಿ ಅವಿರತವಾಗಿ ಹೋರಾಡಿದ, ಹೋರಾಡುತ್ತಿರುವ ಎಲ್ಲ ವೈದ್ಯರನ್ನೂ 'ವೈದ್ಯ ದಿನ'ದಂದು ನೆನಪಿಸಿಸಕೊಳ್ಳೋಣ ಎಂದು ಸಂಜಿಬ್ ಘೋಷ್ ಎನ್ನುವವರು ಟ್ವೀಟ್ ಮಾಡಿದ್ದಾರೆ.