ಕ್ಯಾಲಿಫೋರ್ನಿಯಾದ ವ್ಯಕ್ತಿ ಟ್ವಿಟ್ಟರ್ನ ನೂತನ ಕುಂದುಕೊರತೆ ಅಧಿಕಾರಿ
ನವದೆಹಲಿ, ಜೂ.28: ಧರ್ಮೇಂದ್ರ ಚತುರ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಕ್ಯಾಲಿಫೋರ್ನಿಯಾ ಮೂಲದ ಜೆರೆಮಿ ಕೆಸೆಲ್ನನ್ನು ಭಾರತದ ಹೊಸ ಕುಂದುಕೊರತೆ ಅಧಿಕಾರಿಯಾಗಿ ಟ್ವಿಟರ್ ನೇಮಿಸಿದೆ.
ಸೋಮವಾರ ಬೆಳಿಗ್ಗೆ ಟ್ವಿಟರ್ನ ವೆಬ್ಸೈಟ್ನಲ್ಲಿನ ಅಪ್ಡೇಟ್ ಕ್ಯಾಲಿಫೋರ್ನಿಯಾ ಮೂಲದ ಹರ್ಮಿ ಕೆಸೆಲ್ರನ್ನು ಭಾರತದ ಹೊಸ ಕುಂದುಕೊರತೆ ಪರಿಹಾರ ಅಧಿಕಾರಿಯಾಗಿ ನೇಮಕ ಮಾಡಿದೆ ಎಂದು ತೋರಿಸಿದೆ.
ಆದರೆ ಕ್ಯಾಲಿಫೋರ್ನಿಯಾ ಮೂಲದ ಹರ್ಮಿ ಕೆಸೆಲ್ ನೇಮಕವು ಹೊಸ ಐಟಿ ನಿಯಮಗಳಿಗೆ ಅನುಗುಣವಾಗಿಲ್ಲ. ಈ ಹೊಸ ಐಟಿ ನಿಯಮಗಳ ಪ್ರಕಾರ ಕುಂದುಕೊರತೆ ಪರಿಹಾರ ಅಧಿಕಾರಿ ಸೇರಿದಂತೆ ಎಲ್ಲಾ ನೋಡಲ್ ಅಧಿಕಾರಿಗಳು ಭಾರತದವರು ಆಗಿರಬೇಕು.

ಹೊಸ ಸಾಮಾಜಿಕ ಮಾಧ್ಯಮ ನಿಯಮಗಳ ಕುರಿತು ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಹಾಗೂ ಭಾರತ ಸರ್ಕಾರದ ನಡುವೆ ವಾಗ್ವಾದ ನಡೆಯುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ. ಉದ್ದೇಶಪೂರ್ವಕವಾಗಿ ಭಾರತ ಸರ್ಕಾರದ ಹೊಸ ಐಟಿ ನಿಯಮವನ್ನು ಉಲ್ಲಂಘಿಸಿದ ಹಾಗೂ ದೇಶದ ಹೊಸ ಐಟಿ ನಿಯಮಗಳನ್ನು ಪಾಲಿಸಲು ವಿಫಲವಾದ ಹಿನ್ನೆಲೆ ಸರ್ಕಾರ ಟ್ವಿಟರ್ ವಿರುದ್ದ ವಾಗ್ದಾಳಿ ನಡೆಸಿದೆ.
ಮೇ 25 ರಿಂದ ಜಾರಿಗೆ ಬಂದ ಹೊಸ ನಿಯಮವು ಬಳಕೆದಾರರಿಂದ ಅಥವಾ ಯಾವುದೇ ಸಂತ್ರಸ್ಥರಿಂದ ದೂರುಗಳನ್ನು ಪಡೆದು ಅದನ್ನು ಪರಿಹರಿಸಲು ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಸ್ಥಾಪಿಸಲು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಆದೇಶ ನೀಡುತ್ತವೆ.
ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿ ಎಂಬ ಮೂರು ಪ್ರಮುಖ ಸಿಬ್ಬಂದಿಯನ್ನು ನೇಮಕ ಮಾಡಬೇಕು, ಈ ಮೂವರೂ ಅಧಿಕಾರಿಗಳು ಭಾರತದ ನಿವಾಸಿಗಳಾಗಿರಬೇಕು ಎಂಬ ಈ ಹೊಸ ಐಟಿ ನಿಯಮಗಳನ್ನು ಪಾಲಿಸುವಲ್ಲಿ ದೇಶದಲ್ಲಿ 1.75 ಕೋಟಿ ಬಳಕೆದಾರರನ್ನು ಹೊಂದಿರುವ ಟ್ವಿಟ್ಟರ್ ವಿಫಲವಾಗಿದೆ.
ಈ ಹಿಂದೆ ಸರ್ಕಾರ ಟ್ವಿಟ್ಟರ್ ಉದ್ದೇಶಪೂರ್ವಕವಾಗಿ ನಿಯಮವನ್ನು ಧಿಕ್ಕರಿಸುತ್ತಿದೆ, ಐಟಿ ನಿಯಮಗಳನ್ನು ಪಾಲಿಸಲು ವಿಫಲವಾಗಿದೆ ಎಂದು ಟ್ವಿಟರ್ ವಿರುದ್ಧ ವಾಗ್ದಾಳಿ ನಡೆಸಿತ್ತು. ಬಳಿಕ ನೂತನ ಐಟಿ ನಿಯಮಗಳನ್ನು ಅನುಸಾರವಾಗಿ ಶಾಸನಬದ್ಧ ಅಧಿಕಾರಿಗಳನ್ನು ನೇಮಕ ಮಾಡಲು ವಿಫಲವಾದ ಕಾರಣ ಟ್ವಿಟ್ಟರ್ ಭಾರತದಲ್ಲಿ ತನ್ನ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡಿದೆ.
ಟ್ವಿಟ್ಟರ್ ಕಾನೂನಿನ ನಿಬಂಧನೆಗಳಿಗೆ ಒಳಗೊಳ್ಳದಿದ್ದರೆ ಅಂದರೆ ಕಾನೂನಾತ್ಮಕ ರಕ್ಷಣೆ ಹೊಂದಿಲ್ಲದಿದ್ದರೆ ಎಲ್ಲಾ ಟ್ವೀಟ್ಗಳಿಗೂ ಟ್ವಿಟ್ಟರ್ ಸಂಸ್ಥೆಯೇ ಹೊಣೆಯಾಗಿರುತ್ತದೆ. ಇದರಿಂದಾಗಿ ಆಕ್ಷೇಪಾರ್ಹ ಟ್ವೀಟ್ಗಳ ಹೊಣೆಯೂ ಟ್ವಿಟ್ಟರ್ ಸಂಸ್ಥೆಯ ಮೇಲೆ ಇರಲಿದೆ. ಈ ಬೆನ್ನಲ್ಲೇ ಟ್ವಿಟ್ಟರ್ ವಿರುದ್ದ ಉತ್ತರಪ್ರದೇಶದಲ್ಲಿ ದೂರು ಕೂಡಾ ದಾಖಲಾಗಿದೆ.
ಇನ್ನು ರೈತರ ಪ್ರತಿಭಟನೆಯ ಸಮಯದಲ್ಲಿ ಮತ್ತು ನಂತರ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಆಡಳಿತ ಪಕ್ಷದ ಬಿಜೆಪಿಯ ಹಲವಾರು ನಾಯಕರ ರಾಜಕೀಯ ಪೋಸ್ಟ್ಗಳನ್ನು ''ತಿರುಚಿದ ಮಾಧ್ಯಮ'' ಎಂದು ಟ್ಯಾಗ್ ಮಾಡಿತ್ತು. ಟ್ವಿಟ್ಟರ್ ಭಾರತದಲ್ಲಿ ಅಂದಾಜು 1.75 ಕೋಟಿ ಬಳಕೆದಾರರನ್ನು ಹೊಂದಿದೆ ಎಂದು ಸರ್ಕಾರ ಇತ್ತೀಚೆಗೆ ದಾಖಲೆಯೊಂದರಲ್ಲಿ ಉಲ್ಲೇಖಿಸಿದೆ.
ಮೂಲಗಳ ಪ್ರಕಾರ ಈವರೆಗೆ ಕುಂದುಕೊರತೆ ಅಧಿಕಾರಿಯಾಗಿದ್ದ ಧರ್ಮೇಂದ್ರ ಚತುರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ಟ್ವಿಟ್ಟರ್ ನೀಡಿಲ್ಲ.
(ಒನ್ಇಂಡಿಯಾ ಸುದ್ದಿ)












Click it and Unblock the Notifications