ಉಗ್ರ ತರಬೇತಿ ನೆಲೆ ಹೊಸ ಹೆಸರಿನೊಂದಿಗೆ ಬಾಲಾಕೋಟ್ ನಲ್ಲಿ ಮತ್ತೆ ಸಕ್ರಿಯ
ನವದೆಹಲಿ, ಸೆಪ್ಟೆಂಬರ್ 22: ಪಾಕಿಸ್ತಾನದ ಬಾಲಾ ಕೋಟ್ ನಲ್ಲಿ ಇದ್ದ ಜೈಷ್- ಇ- ಮೊಹ್ಮದ್ ಉಗ್ರ ನೆಲೆಗಳನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸಿದ ಏಳು ತಿಂಗಳ ಮೇಲೆ ಮತ್ತೆ ಇದೇ ಸ್ಥಳದಲ್ಲಿ ತನ್ನ ಕಾರ್ಯ ಚಟುವಟಿಕೆ ಆರಂಭಿಸಿದೆ. ಭಾರತದ ಜಮ್ಮು- ಕಾಶ್ಮೀರ ಹಾಗೂ ಇತರೆಡೆಗಳಲ್ಲಿ ದಾಳಿ ನಡೆಸಲು ನಲವತ್ತು ಜಿಹಾದಿಗಳಿಗೆ ತರಬೇತಿ ನೀಡುತ್ತಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾರ ಗಮನಕ್ಕೂ ಬಾರದಿರಲಿ ಎಂಬ ಕಾರಣಕ್ಕೆ ಹೊಸ ಹೆಸರಿನೊಂದಿಗೆ ಚಟುವಟಿಕೆ ಆರಂಭಿಸಿದೆ ಎಂದು 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ. ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ತೆಗೆದ ಮೇಲೆ, ಪಾಕಿಸ್ತಾನದ ನೆರವಿನೊಂದಿಗೆ ಇಲ್ಲಿ ತರಬೇತಿ ಕ್ಯಾಂಪ್ ನಡೆಯುತ್ತಿದೆ.
ಆಗಸ್ಟ್ ಐದರ ನಂತರ ಪಾಕಿಸ್ತಾನ ಸರ್ಕಾರವು ನಿಬಂಧನೆಗಳನ್ನು ತೆಗೆದಿದೆ. ಭಾರತದ ವಿರುದ್ಧ ದಾಳಿ ನಡೆಸುವ ಉಗ್ರ ಸಂಘಟನೆಗಳ ಮೇಲಿನ ನಿಬಂಧನೆ ತೆಗೆಯಲಾಗಿದೆ. ಫೆಬ್ರವರಿ ಹದಿನಾಲ್ಕರಂದು ಸಿಆರ್ ಪಿಎಫ್ ಸಿಬ್ಬಂದಿ ವಾಹನದ ಮೇಲೆ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಗೆ ಪ್ರತಿಯಾಗಿ ಭಾರತದ ವಾಯು ಸೇನೆಯು ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಇದ್ದ ಉಗ್ರ ತರಬೇತಿ ನೆಲೆಗಳನ್ನು ಧ್ವಂಸಗೊಳಿಸಿತ್ತು.

ಆ ನಂತರ ಅಷ್ಟೇನೂ ಸಕ್ರಿಯವಾಗಿ ಇಲ್ಲದ ಉಗ್ರ ಸಂಘಟನೆಗಳು ಕಾಶ್ಮೀರದ ಬಗ್ಗೆ ಭಾರತ ಸರ್ಕಾರ ತೀರ್ಮಾನ ಕೈಗೊಂಡ ಮೇಲೆ ಜೈಷ್ ಇ ಮೊಹ್ಮದ್ ನ ಕಾರ್ಯ ಚಟುವಟಿಕೆ ಕಮ್ಯಾಂಡರ್ ಮುಫ್ತಿ ಅಬ್ದುಲ್ ರವೂಫ್ ಅಸ್ಗರ್ ಮತ್ತು ಆತನ ತಂಡದ ಜತೆ ರಾವಲ್ಪಿಂಡಿಯಲ್ಲಿ ಐಎಸ್ ಐ ಸಭೆ ನಡೆಸಿದೆ. ಭಾರತದ ವಿರುದ್ಧ ವಿಧ್ವಂಸಕ ಕೃತ್ಯ ನಡೆಸಲು ತೀರ್ಮಾನಿಸಿದೆ.
ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ, ಜೈಷೆಯಿಂದ ಜಮ್ಮು- ಕಾಶ್ಮೀರ ಮಾತ್ರವಲ್ಲ, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಕೂಡ ದಾಳಿ ನಡೆಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಕಾಶ್ಮೀರಿ ಯುವಕರನ್ನು ಬಳಸಲು ತೀರ್ಮಾನಿಸಲಾಗಿದೆ. ಅಲ್ ಉಮ್ನಾರ್ ಮುಜಾಹಿದೀನ್ ನಂಥ ಗುಂಪುಗಳಿಗೆ ಚೈತನ್ಯ ತುಂಬಲಾಗುತ್ತಿದೆ.
ಆತ್ಮಾಹುತಿ ದಾಳಿಕೋರರ ಬಗ್ಗೆ ನಮಗೆ ವರದಿ ಬಂದಿದೆ. ಜಮ್ಮು- ಕಾಶ್ಮೀರದಲ್ಲಿ ಟೆಲಿಕಾಂ ಮೇಲಿನ ನಿರ್ಬಂಧವನ್ನು ಪೂರ್ತಿ ತೆಗೆಯಲಿ ಎಂದು ಉಗ್ರರು ಕಾಯುತ್ತಿದ್ದಾರೆ. ಆ ನಂತರ ಕಣಿವೆ ರಾಜ್ಯದೊಳಕ್ಕೆ ನುಸುಳಲು ಹಾಗೂ ದಾಳಿ ಸಂಘಟಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications