ಬ್ರಹ್ಮಪುತ್ರದಿಂದ ಕ್ಸಿನ್ ಜಿಯಾಂಗ್ ಗೆ ನೀರು, ಸಾವಿರ ಕಿ.ಮೀ. ಸುರಂಗ!
ಚೀನಾದ ನಡೆಯೊಂದು ಭಾರತದ ಚಿಂತೆಗೆ ಕಾರಣವಾಗಿದೆ. ಬ್ರಹ್ಮಪುತ್ರ ನದಿಯ ನೀರನ್ನು ಕ್ಸಿನ್ ಜಿಯಾಂಗ್ ಗೆ ತೆಗೆದುಕೊಂಡು ಹೋಗಲು ಸಾವಿರ ಕಿಲೋಮೀಟರ್ ಉದ್ದದ ಸುರಂಗ ಕೊರೆಯುವ ಯೋಜನೆಯನ್ನು ಚೀನಾ ಸಿದ್ಧ ಮಾಡಿದೆ. ಈ ಯೋಜನೆಗಾಗಿ ಹಲವು ವಿಜ್ಞಾನಿಗಳು ಕಮ್ಯುನಿಸ್ಟ್ ಸರಕಾರದ ಬೆನ್ನಿಗೆ ನಿಂತಿದ್ದಾರೆ.
ಈ ಯೋಜನೆ ಸಾಕಾರವಾದರೆ ಜಗತ್ತಿನಲ್ಲೇ ಅತಿ ದೊಡ್ಡ ಸುರಂಗ ಇದಾಗಲಿದೆ. ಜತೆಗೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ನೀರಿಗೆ ತತ್ವಾರ ಆಗುವ ಸಾಧ್ಯತೆಗಳಿವೆ. ಈ ಯೋಜನೆಯ ನೀಲನಕ್ಷೆ ಸಿದ್ಧವಾಗಿದ್ದು, ಮಾರ್ಚ್ ನಲ್ಲೇ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ.

ಹಾಂಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಈ ಬಗ್ಗೆ ವರದಿ ಮಾಡಿದ್ದು, ಈ ಯೋಜನೆಯ ತಾಂತ್ರಿಕ ವಿಚಾರಗಳ ಬಗ್ಗೆ ಎಂಜಿನಿಯರ್ ಗಳು ಪರಿಶೀಲನೆ ನಡೆಸುತ್ತಿದ್ದಾರೆ. ಟಿಬೆಟ್ ನಿಂದ ಕ್ಸಿನ್ ಜಿಯಾಂಗ್ ನಲ್ಲಿ ತಕ್ಲಿಮಕನ್ ಮರುಭೂಮಿಗೆ ನೀರು ತರುವ ಒಂದು ಸಾವಿರ ಕಿಲೋಮೀಟರ್ ಉದ್ದದ ಸುರಂಗ ನಿರ್ಮಾಣಕ್ಕೆ ಅನುಸರಿಸಬೇಕಾದ ತಾಂತ್ರಿಕ ಸಂಗತಿಗಳ ಅವಲೋಕನ ನಡೆಯುತ್ತಿದೆ ಎಂದು ಹೇಳಲಾಗಿದೆ.
ಚೀನಾದ ಸುರಂಗ ನಿರ್ಮಾಣದ ತಜ್ಞರಾದ ವಾಂಗ್ ಮೆನ್ಷು ಸರಕಾರಕ್ಕೆ ಸಲಹೆ ನೀಡಿದ್ದು, ದಕ್ಷಿಣ ಟಿಬೆಟ್ ನಲ್ಲಿರುವ ಯಾರ್ಲಂಗ್ ಸ್ಯಾಂಗ್ ಪೋ ನದಿಯನ್ನು ಪೂರ್ತಿಯಾಗಿ ಒಣಗಿಸುವಂತೆ ಸಲಹೆ ಮಾಡಿದ್ದಾರೆ. ಈ ಸ್ಥಳವು ಭಾರತದೊಂದಿಗಿನ ವಿವಾದಿತ ಗಡಿ ಪ್ರದೇಶದಲ್ಲಿದೆ.
ಭಾರತ ಹಾಗೂ ಬಾಂಗ್ಲಾದೇಶ್ ಗಳಿಂದ ಈ ಯೋಜನೆಗೆ ಪ್ರತಿಭಟನೆ ವ್ಯಕ್ತವಾಗಬಹುದು. ಬೇರೆ ಯೋಜನೆಗಳಿಗೆ ಹೋಲಿಸಿದರೆ ನೆಲದಡಿಯಿಂದ ತೋಡುವ ಸುರಂಗ ಮಾರ್ಗದಿಂದ ಟಿಬೆಟ್ ನ ಭೂ ಮೇಲ್ಮೈಗೆ ಯಾವುದೇ ಹಾನಿ ಆಗುವುದಿಲ್ಲ ಎಂದು ಕೂಡ ವಾಂಗ್ ಮೆನ್ಷು ಹೇಳಿದ್ದಾರೆ.
ಇನ್ನೂ ಮುಂದುವರಿದು, ಭೂಮಿಯ ಮೇಲೆ ಈ ಯೋಜನೆಯ ಯಾವುದೇ ಗುರುತು ಸಿಗುವುದಿಲ್ಲ. ಅಥವಾ ಪರಿಸರ ಕಾರ್ಯಕರ್ತರು ಬೊಟ್ಟು ಮಾಡಿ ತೋರುವಂಥ ಯಾವುದೇ ಆಕ್ಷೇಪಣೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.












Click it and Unblock the Notifications