Tirumala Tirupati: ಟಿಟಿಡಿ ಮಾಡಿದ ಆವಾಂತರಕ್ಕೆ ಆರು ಬಡ ಭಕ್ತರ ಬಲಿ- ಕಾಲ್ತುಳಿತದಲ್ಲಿ ಶ್ರೀಮಂತರೇಕೆ ಸತ್ತಿಲ್ಲ
ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಕ್ಕಾಗಿ ಟಿಕೆಟ್ ಪಡೆಯುವ ಸಮಯದಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ಕಾಲ್ತುಳಿತದಲ್ಲಿ ಆರು ಜನ ಸಾಮಾನ್ಯ ಭಕ್ತರು ಸಾವನ್ನಪ್ಪಿದ್ದು ಸುಮಾರು 40 ಜನರು ಗಾಯಗೊಂಡಿದ್ದಾರೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಿರುಪತಿಗೆ ಆಗಮಿಸುತ್ತಾರೆ ಎನ್ನುವ ಮಾಹಿತಿ ಇದ್ದರೂ ಕೂಡ ಟಿಟಿಡಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವುದು ಎದ್ದು ಕಾಣುತ್ತಿದೆ. ಇದಕ್ಕೆ ಹೊಣೆ ಯಾರು ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಅಷ್ಟಕ್ಕೂ ಆಗಿದ್ದೇನು? ಕಾಲ್ತುಳಿತ ಉಂಟಾಗಿದ್ದು ಯಾವ ಕಾರಣಕ್ಕೆ?
ಜನವರಿ 10ರಿಂದ ಪ್ರಾರಂಭವಾಗುವ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕಾಗಿ ದೇಶಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಿರುಪತಿಗೆ ಆಗಮಿಸಿದ್ದರು. ಆದರೆ ವೈಕುಂಠ ದ್ವಾರ ದರ್ಶನಕ್ಕೆ ಎಲ್ಲರಿಗೂ ಅವಕಾಶವಿಲ್ಲ. ಇದಕ್ಕಾಗಿ ಜನ ಟಿಕೆಟ್ ಪಡೆಯಬೇಕು. ಟಿಕೆಟ್ ಪಡೆದವರಿಗೆ ಮಾತ್ರ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಹೀಗಾಗಿ ಟಿಕೆಟ್ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವಾಗ ಏಕಾಏಕಿ ಕಾಲ್ತುಳಿತ ಉಂಟಾಗಿದೆ. ಈ ಘಟನೆಗೆ ಕಾರಣವೇನು? ದೇವಸ್ಥಾನಗಳಲ್ಲಿ ದೇವರ ದರ್ಶನ ಸಾಮಾನ್ಯ ಭಕ್ತರಿಗೆ ಕಠಿಣವಾಗುತ್ತಿದಿಯಾ? ಶ್ರೀಮಂತರಿಗೆ ಸಿಗುತ್ತಿರುವ ಸೌಲಭ್ಯಗಳಿಂದಾಗಿ ಬಡ ಭಕ್ತರು ಬಲಿಯಾಗುತ್ತಿದ್ದಾರಾ ಎನ್ನುವ ಅನುಮಾನ ಮೂಡಿದೆ.
ಸಾಮಾನ್ಯ ಭಕ್ತರಿಗೆ ಕಠಿಣವಾದ ದೇವರ ದರ್ಶನ
ದೇಶದಲ್ಲಿ ಶ್ರೀಮಂತ ದೇವರು ಎನಿಸಿಕೊಂಡ ತಿರುಪತಿ ತಿಮ್ಮಪ್ಪನಿಗೆ ಅಸಂಖ್ಯಾತ ಭಕ್ತರ ಬಳಗವಿದೆ. ಬಡವ ಶ್ರೀಮಂತ ಎನ್ನದೇ ದೇಶ ವಿದೇಶಗಳಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ. ವಿಶೇಷವಾಗಿ ವೈಕುಂಠ ದ್ವಾರ ದರ್ಶನ ಪಡೆಯುವುದು ಎಂದರೆ ಪುಣ್ಯದ ಕೆಲಸ ಎನ್ನುವುದು ಲಕ್ಷಾಂತರ ಭಕ್ತರ ನಂಬಿಕೆ ಆಗಿದೆ. ಈ ಸಮಯದಲ್ಲಿ ಅಂದಾಜು ಏಳು ಲಕ್ಷ ಭಕ್ತರು ದರ್ಶನ ಪಡೆಯುತ್ತಾರೆ. ಆದರೆ ಇದಕ್ಕಾಗಿ ಭಕ್ತರು ಟಿಕೆಟ್ಗಳನ್ನು ಪಡೆಯಬೇಕು.

ಒಂದು ಬಾರಿ ಯೋಚಿಸಿದರೆ ಎದೆ ನಡುಕ ಬರುತ್ತದೆ. ಸುಮಾರು ಏಳು ಲಕ್ಷ ಭಕ್ತರಿಗೆ ವೈಕುಂಠ ದ್ವಾರ ದರ್ಶನದ ಟಿಕೆಟ್ ಸಿಗಬೇಕು. ಅದು ಹತ್ತು ದಿನದ ಅವಧಿಯಲ್ಲಿ ದರ್ಶನ ಪಡೆಯಲು ಟಿಕೆಟ್ ಸಿಕ್ಕರೆ ಅದು ಆ ಭಕ್ತನ ಫುಣ್ಯ ಎನ್ನಬಹುದು. ಈ ಟಿಕೆಟ್ ಪಡೆಯಲು ಒಂದು ಅಥವಾ ಎರಡು ದಿನಕ್ಕೂ ಮುಂಚಿತವಾಗಿ ತಿರುಪತಿಗೆ ಭಕ್ತರು ಆಗಮಿಸುತ್ತಾರೆ. ಇದಕ್ಕಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾಯುತ್ತಾರೆ.
ಕಾಸು ಇದ್ದವರಿಗೆ ಶ್ರೀಮಂತ ದೇವರ ದರ್ಶನ ಸುಲಭ
ಆದರೆ ತ್ವರಿತವಾದ ದರ್ಶನಕ್ಕಾಗಿ ಹಾಗೂ ಭಕ್ತರ ಬೇಡಿಕೆಯ ಅನುಗುಣವಾಗಿ ತಿರುಪತಿ ತಿರುಮಲ ದೇವಸ್ಥಾನಂ ಬೋರ್ಡ್ (ಟಿಟಿಡಿ) ವಿಐಪಿ ದರ್ಶನದ ಟಿಕೆಟ್ಗಳನ್ನು ನೀಡುತ್ತದೆ. ಈ ಟಿಕೆಟ್ಗಳನ್ನು ಉಚಿತವಾಗಿ ನೀಡಲಾಗುವುದಿಲ್ಲ. ಬದಲಿಗೆ 10,000 ಅಥವಾ ಅದಕ್ಕಿಂತ ಹೆಚ್ಚಿನ ದೇಣಿಗೆ ಪಡೆಯುವ ಮೂಲಕ ವಿಐಪಿ ಬ್ರೇಕ್ ದರ್ಶನ ಟಿಕೆಟ್ಗಳನ್ನು ನೀಡಲಾಗುತ್ತದೆ. ಹೀಗೆ ಹಣವಿರುವ ಶ್ರೀಮಂತರು ದೇಣಿಗೆ ನೀಡಿ ಶಿಫಾರಸು ಪತ್ರಗಳನ್ನು ಪಡೆಯುತ್ತಾರೆ. ಅಲ್ಲದೆ ಹೆಚ್ಚುವರಿ ಹಣವನ್ನು ನೀಡಿದರೇ ಅಂದುಕೊಂಡ ದಿನವೇ ದರ್ಶನ ಪಡೆಯಬಹುದು. ಇದಕ್ಕಾಗಿ ಆನ್ಲೈನ್ನಲ್ಲೂ ಟಿಕೆಟ್ ನೊಂದಣಿ ಮಾಡಿಕೊಳ್ಳಬಹುದು.
ಹಣವಿದ್ದವರು ಮನೆಯಲ್ಲಿ ಕುಳಿತು ದೇವರ ದರ್ಶನಕ್ಕೆ ಆರಾಮದಾಯಕವಾಗಿ ಟಿಕೆಟ್ ಪಡೆಯುತ್ತಾರೆ. ಆದರೆ ಬಡವರು ಮಾತ್ರ ಗಂಟೆಗಟ್ಟಲೆ ಸರಿತಿ ಸಾಲಿನಲ್ಲಿ ನಿಂತರೂ ಕೂಡ ಅವರಿಗೆ ಟಿಕೆಟ್ ಸಿಗುವುದು ಕಷ್ಟವಿದೆ. ಎಷ್ಟೋ ಜನ ಟಿಕೆಟ್ ಸಿಗದೆ ನಿರಾಸೆರಾಗಿರುವುದು ಇದೆ. ಆದರೆ ಗಂಟೆಗಟ್ಟಲೆ ಕಾದರೂ ದರ್ಶನ ಪಡೆಯದೆ ವಾಪಸ್ಸ ಹೋಗಲು ಮನಸ್ಸು ಮಾಡದ ಸಾಮಾನ್ಯ ಭಕ್ತರು ಶತಾಯಗತಾಯ ದರ್ಶನ ಟಿಕೆಟ್ ಪಡೆಯಲು ಮುಂದಾಗಿ ಕಾಲ್ತುಳಿತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಾರೆ.
ಎಚ್ಚೆತ್ತುಕೊಳ್ಳಬೇಕು ಆಂಧ್ರ ಸರ್ಕಾರ- ಟಿಟಿಡಿ
ಇದರರ್ಥ ದುಡ್ಡು ಇದ್ದವರಿಗೆ ದೇವರು ಕೂಡ ಬೇಗ ದರ್ಶನ ನೀಡಿ ಬಿಡುತ್ತಾನೆ. ದುಡ್ಡು ಇಲ್ಲದ ಜನರಿಗೆ ದೇವರು ತನ್ನ ಬಳಿಗೇ ಕರೆಸಿಕೊಂಡು ಬಿಡುತ್ತಾನೆ. ಇದು ಬಡವ ಶ್ರೀಮಂತ ಎನ್ನುವ ಬೇಧ ಭಾವ ಅಲ್ಲದೆ ಇನ್ನೇನು? ದೇವರ ಮೇಲೆ ಭಕ್ತಿ ಇದ್ದರೆ ಎಲ್ಲರೊಂದಿಗೆ ದರ್ಶನ ಪಡೆಯಬೇಕು. ಎಲ್ಲರಂತೆ ಟಿಕೆಟ್ ಪಡೆಯಬೇಕು. ಎಲ್ಲರಿಗೂ ಒಂದೇ ವ್ಯವಸ್ಥೆ ಇರಬೇಕು. ಶ್ರಮಪಟ್ಟವರಿಗೆ ದರ್ಶನವಿಲ್ಲ ದುಡ್ಡಿದ್ದವರಿಗೆ ದರ್ಶನಕ್ಕೆ ಸುಲಭ ಅವಕಾಶ ಕಲ್ಪಿಸಿದರೆ ಇದರಿಂದ ಹೋಗುವ ಸಂದೇಶದ ಬಗ್ಗೆ ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ.
ವಿಐಪಿ ಟಿಕೆಟ್ ಪಡೆದವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇತ್ತ ಸಾಮಾನ್ಯ ಭಕ್ತರಿಗೆ ಟಿಕೆಟ್ ಕೈತಪ್ಪುತ್ತದೆ. ಇದರಿಂದ ಭಕ್ತರಿಗೆ ಮೋಸ ಆಗುತ್ತಿದೆ. ದುಡ್ಡಿನ ಆಸೆಗೆ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಈ ರೀತಿಯ ತಾರತಮ್ಯ ನಿಲ್ಲಬೇಕು. ಎಲ್ಲರಿಗೂ ಒಂದೇ ರೀತಿಯಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಅಂದಾಗ ಮಾತ್ರ ಎಲ್ಲರೂ ಒಂದೇ ಎನ್ನುವ ಭಾವನೆ ಮೂಡುತ್ತದೆ.
ಶ್ರೀಮಂತರಿಗೆ ಹಾಗೂ ಹಣ ಉಳ್ಳವರಿಗೆ ದೇವರ ದರ್ಶನ ಸುಲಭವಾದರೆ ಬಡವರ ಗತಿ ಏನು? ಆಂಧ್ರಪ್ರದೇಶ ಸರ್ಕಾರ ಇದರ ಬಗ್ಗೆ ಎಚ್ಚರ ವಹಿಸಬೇಕು. ಎಲ್ಲಾ ಭಕ್ತರಿಗೂ ಒಂದೇ ರೀತಿಯಾದ ದರ್ಶನ ವ್ಯವಸ್ಥೆ ಕಲ್ಪಿಸುವುದನ್ನು ಜಾರಿಗೆ ತರಬೇಕು. ಬಡ ಭಕ್ತರು ಬಲಿಯಾಗುವುದನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ಜಾರಿಗೆ ತರಬೇಕಿದೆ.












Click it and Unblock the Notifications