ಕ್ರೂರರ ಸಾಲಿನಲ್ಲಿ ಪ್ರಧಾನಿ ಮೋದಿ ಚಿತ್ರ: ಕೇಸು ದಾಖಲು
ತ್ರಿಶ್ಶೂರ್, ಜೂನ್ 11: ಅತ್ತ ನೂತನ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಹಾದಿಯಲ್ಲಿ ತಲ್ಲೀನರಾಗಿರುವಾಗ ಇತ್ತ ಕೇರಳದ ಕಾಲೇಜೊಂದು ಮೋದಿ ಕಾಲೆಳೆಯುವ ದುಸ್ಸಾಹದ ಮಾಡಿದೆ.
ವಿಶ್ವದ ಅತಿ ಕ್ರೂರ ಜನರನ್ನೊಳಗೊಂಡ ಲೇಖನದಲ್ಲಿ ಇಲ್ಲಿನ ಕಾಲೇಜೊಂದು ಮೋದಿ ಚಿತ್ರವನ್ನೂ ಪ್ರಕಟಿಸಿದೆ. ಇದರ ವಿರುದ್ಧ ಸ್ಥಳೀಯ ಪೊಲೀಸರು ಕಾಲೇಜು ಮ್ಯಾಗಜೀನ್ ಪ್ರಕಟಣೆಯ ಉಸ್ತುವಾರಿ ಹೊತ್ತಿದ್ದ ನಾಲ್ವರು ವಿದ್ಯಾರ್ಥಿಗಳೂ ಸೇರಿದಂತೆ 7 ಮಂದಿಯ ವಿರುದ್ಧ ಕೇಸು ದಾಖಲಿಸಿದ್ದಾರೆ.
ಕಾಲೇಜು ಮ್ಯಾಗಜೀನ್ ಹೊರತರುವಲ್ಲಿ ಎಡರಂಗ ಪರ ವಿದ್ಯಾರ್ಥಿ ಸಂಘಟನೆಯ ಕೆಲ ವಿದ್ಯಾರ್ಥಿಗಳ ಪಾತ್ರವಿದೆ ಎನ್ನಲಾಗಿದೆ. ತ್ರಿಶ್ಶೂರಿನ ಕುನ್ನಂಕುಳಂ ಸರಕಾರಿ ಪಾಲಿಟೆಕ್ನಿಕ್ ಈ ವಿವಾದಾತ್ಮಕ ಕಾಲೇಜು ಮ್ಯಾಗಜೀನ್ ಅನ್ನು ಪ್ರಕಟಿಸಿದೆ. ವಿವಾದ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ. (ಉತ್ತಮ ಸಲಹೆ ಇದ್ದರೆ ಮೋದಿಗೆ ನೀವೂ ಮೇಲ್ ಮಾಡಿ!)

ಅಲ್ ಖೈದಾ ಮುಖ್ಯಸ್ಥ ಬಿನ್ ಲಾಡೆನ್, ಮುಂಬೈ ದಾಳಿಕೋರ ಅಜ್ಮಲ್ ಕಸಬ್ ಮತ್ತು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಸಾಲಿನಲ್ಲಿ ನರೇಂದ್ರ ಮೋದಿ ಅವರ ಚಿತ್ರವೂ ಪ್ರಕಟಗೊಂಡಿದೆ. ಈ ಅಚಾತುರ್ಯ ಹೇಗೆ ನಡೆಯಿತು ಎಂಬುದರ ಬಗ್ಗೆ ಆಂತರಿಕ ತನಿಖೆ ನಡೆಸಿದ್ದೇವೆ ಎಂದು ಸರಕಾರಿ ಪಾಲಿಟೆಕ್ನಿಕ್ ಪ್ರಿನ್ಸಿಪಾಲ್ ಬಾಬು ರಾಜ್ ಹೇಳಿದ್ದಾರೆ.
ಕಳೆದ ವಾರ ಹೊಸ ಶೈಕ್ಷಣಿಕ ವರ್ಷ ಆರಂಭವಾದಾಗ ವಿದ್ಯಾರ್ಥಿಗಳಿಗೆ ಈ ಪುಸ್ತಕ ಹಂಚಿದಾಗ ಈ ಅಚಾತುರ್ಯ ಬೆಳಕಿಗೆ ಬಂದಿದೆ. ಮುದ್ರಣಕ್ಕೆ ಕಳುಹಿಸುವಾಗ ಹಸ್ತಪ್ರತಿಯಲ್ಲಿ ಮೋದಿ ಚಿತ್ರ ಇರಲಿಲ್ಲ. ಆದರೆ ಯಾರು ಅದನ್ನು ಪತ್ರಿಕೆಯಲ್ಲಿ ಸೇರ್ಪಡೆ ಮಾಡಿದರೋ ಗೊತ್ತಾಗುತ್ತಿಲ್ಲ ಎಂದು ಪ್ರಿನ್ಸಿಪಾಲ್ ಬಾಬು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಪ್ರಕರಣದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದನ್ನು ರಾಜ್ಯ ಸರಕಾರದ ವಿವೇಚನೆಗೆ ಬಿಡುತ್ತೇವೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಮುರಳೀಧರನ್ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications