ಸಿಬಿಐ ಮುಖ್ಯಸ್ಥ ಹುದ್ದೆಗೆ 3 ಹೆಸರು ಅಂತಿಮ; ಕಾಂಗ್ರೆಸ್ ಆಕ್ಷೇಪ
ನವದೆಹಲಿ, ಮೇ 25; ದೇಶದ ಉನ್ನತ ತನಿಖಾ ಸಂಸ್ಥೆ ಸಿಬಿಐನ ಮುಂದಿನ ಮುಖ್ಯಸ್ಥರು ಯಾರು?. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ಮೂವರ ಹೆಸರುಗಳನ್ನು ಅಂತಿಮಗೊಳಿಸಿದೆ. ಆದರೆ ಕಾಂಗ್ರೆಸ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಐಸಿಎಸ್ಎಫ್ ಡೈರೆಕ್ಟರ್ ಜನರಲ್ ಸುಭೋದ್ ಕುಮಾರ್ ಜೈಸ್ವಾಲ್, ಎಸ್ಎಸ್ಬಿ ಡಿಜಿ ಕುಮಾರ್ ರಾಜೇಶ್ ಚಂದ್ರ, ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿ ವಿಎಸ್ಕೆ ಕೌಮುದಿ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಪ್ರಧಾನಿಗಳ ನಿವಾಸದಲ್ಲಿ ಸುಮಾರು 90 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಈ ಹೆಸರು ಅಂತಿಮವಾಗಿದೆ.
ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮೂರು ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚಿಸೋಣ ಎಂದು ಕಾಂಗ್ರೆಸ್ ಪ್ರತಿನಿಧಿಸುವವರು ಸಭೆಯಲ್ಲಿ ಹೇಳಿದ್ದಾರೆ. ಸಮಿತಿಯ ಇಬ್ಬರು ಇತರ ಸದಸ್ಯರು ಪಟ್ಟಿಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಸುಭೋದ್ ಕುಮಾರ್ ಜೈಸ್ವಾಲ್ 1985ನೇ ಬ್ಯಾಚ್ ಐಪಿಎಸ್ ಅಧಿಕಾರಿ. ಮಹಾರಾಷ್ಟ್ರ ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ ಮುಖ್ಯಸ್ಥರಾಗಿದ್ದಾರೆ. ಕುಮಾರ್ ರಾಜೇಶ್ ಚಂದ್ರ 1985ನೇ ಬ್ಯಾಚ್ನ ಬಿಹಾರ ಕೆಡರ್ ಐಪಿಎಸ್ ಅಧಿಕಾರಿ. ಸಶಸ್ತ್ರ ಸೀಮಾ ಬಲದ ಡೈರೆಕ್ಟರ್ ಜನರಲ್ ಆಗಿ ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಉತ್ತರ ಪ್ರದೇಶ ಡಿಜಿಪಿ ಹೆಸರು ಇದೆ
ವಿಎಸ್ಕೆ ಕೌಮುದಿ 1986ನೇ ಬ್ಯಾಚ್ ಆಂಧ್ರ ಪ್ರದೇಶ ಕೆಡರ್ನ ಐಪಿಎಸ್ ಅಧಿಕಾರಿ. ಗೃಹ ಇಲಾಖೆ ವಿಶೇಷ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇವರ ಜೊತೆಗೆ 1985ನೇ ಬ್ಯಾಚ್ ಐಪಿಎಸ್ ಅಧಿಕಾರಿ ಎಚ್. ಸಿ. ಅವಸ್ತಿ ಹೆಸರು ಪರಿಶೀಲನೆಯಲ್ಲಿದ್ದು, ಅವರು ಉತ್ತರ ಪ್ರದೇಶದ ಡಿಜಿಪಿಯಾಗಿದ್ದಾರೆ.

ಯಾರ-ಯಾರು ಸಮಿತಿ ಸದಸ್ಯರು?
ಸಿಬಿಐ ಮುಖ್ಯಸ್ಥರನ್ನು ಆಯ್ಕೆ ಮಾಡಲು ಉನ್ನತ ಮಟ್ಟದ ಸಮಿತಿ ಸಭೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಮಿತಿಯಲ್ಲಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್. ವಿ. ರಮಣ, ಲೋಕಸಭೆ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಇದ್ದಾರೆ. ಆದರೆ ಆಯ್ಕೆ ಪ್ರಕ್ರಿಯಿಗೆ ಅಧೀರ್ ರಂಜನ್ ಚೌಧರಿ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಆಕ್ಷೇಪವೇಕೆ?
ಮೇ 11ರಂದು 109 ಹೆಸರುಗಳನ್ನು ಸಿಬಿಐ ಮುಖ್ಯಸ್ಥರ ಹುದ್ದೆಗೆ ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿತ್ತು. ಸೋಮವಾರ ಮಧ್ಯಾಹ್ನ 1 ಗಂಟೆಗೆ 10 ಹೆಸರು ಅಂತಿಮಗೊಂಡಿತ್ತು. ಸಂಜೆ 4 ಗಂಟೆ ವೇಳೆಗೆ 6 ಹೆಸರು ಅಂತಿಮವಾಗಿತ್ತು. 6.30ಕ್ಕೆ ನಡೆದ ಸಭೆಯ ವೇಳೆ 3 ಹೆಸರು ಅಂತಿಮಗೊಳಿಸಲಾಗಿದೆ. ಈ ಆಯ್ಕೆ ಪ್ರಕ್ರಿಯೆ ಬಗ್ಗೆಯೇ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
Recommended Video

ಫೆಬ್ರವರಿ ಇಂದ ಖಾಲಿ ಇದೆ
ಎರಡು ವರ್ಷಗಳ ಕಾಲ ಸಿಬಿಐ ನಿರ್ದೇಶಕರಾಗಿದ್ದ ರಿಶಿ ಕುಮಾರ್ ಶುಕ್ಲಾ ಫೆಬ್ರವರಿ 4ರಂದು ನಿವೃತ್ತರಾಗಿದ್ದಾರೆ. ಬಳಿಕ ಹುದ್ದೆ ಖಾಲಿ ಇದೆ, 1988ನೇ ಬ್ಯಾಚ್ ಗುಜರಾತ್ ಕೆಡರ್ ಐಪಿಎಸ್ ಅಧಿಕಾರಿ ಪ್ರವೀಣ್ ಸಿನ್ಹಾ ಪ್ರಸ್ತುತ ಉಸ್ತುವಾರಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಪ್ರಸ್ತುತ ಕೋವಿಡ್ ಪರಿಸ್ಥಿತಿಯಲ್ಲಿ ನೇಮಕಾತಿ ಬೇಡ, ಮುಂದಕ್ಕೆ ಹಾಕಿ ಎಂದು ಸಹ ಕಾಂಗ್ರೆಸ್ ಒತ್ತಾಯ ಮಾಡುತ್ತಿದೆ.












Click it and Unblock the Notifications